ಯುಪಿ ಎಲೆಕ್ಷನ್ ಬಳಿಕ ತ್ರಿವಳಿ ತಲಾಖ್ ನಿಷೇಧ: ಸಚಿವ ರವಿಶಂಕರ್
ಗಾಜಿಯಾಬಾದ್, ಫೆಬ್ರವರಿ. 06 : 'ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ತ್ರಿವಳಿ ತಲಾಖ್ ನಿಷೇಧಿಸುವ ಸಂಬಂಧ ಕೇಂದ್ರ ಪ್ರಮುಖ ನಿರ್ಣಯ ತೆಗೆದುಕೊಳ್ಳುಲಿದೆ' ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸೋಮವಾರ ಗಾಜಿಯಾಬಾದ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತ್ರಿವಳಿ ತಲಾಖ್ ಧಾರ್ಮಿಕ ವಿಷಯವಾಗಿ ಪರಿಗಣಿಸಲು ಸಾಧ್ಯವಿಲ್ಲ. ಇದು ಮಹಿಳೆಯರ ಗೌರವದ ಪ್ರಶ್ನೆ. ತ್ರಿವಳಿ ತಲಾಖ್ ಪದ್ಧತಿ ಮಹಿಳೆಯರ ಗೌರವವನ್ನು ಗಣನೆಗೆ ತೆಗೆದುಕೊಂಡಿಲ್ಲ, ಕೆಟ್ಟ ಸಾಮಾಜಿಕ ಪದ್ಧತಿಗಳಿಗೆ ಕೊನೆಹಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.[ತಲಾಖ್ ಪದ್ಧತಿ ಅಸಾಂವಿಧಾನಿಕ : ಅಲಹಾಬಾದ್ ಕೋರ್ಟ್]
ಇದೇ ವೇಳೆ ಈ ವಿಷಯ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಮಹಿಳೆಯರ ಸ್ವಾತಂತ್ರ್ಯ ಹಾಗೂ ಘನತೆಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.
ಮೂರು ಬಾರಿ ತಲಾಖ್ ಅಂತ ಹೇಳಿ ಮುಸ್ಲಿಂ ಮಹಿಳೆಗೆ ವಿಚ್ಛೇದನ ನೀಡುವ ಸಂಪ್ರದಾಯ ಅಸಂವಿಧಾನಕವಾದದ್ದು ಎಂದು ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಮಾನ ನೀಡಿತ್ತು.
ಆದರೆ, ಈ ತೀರ್ಪನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದ್ದು, ಬಲವಂತದ ಮದುವೆಯಿಂದ ಮಹಿಳೆಯನ್ನು ನರಕಕ್ಕೆ ತಳ್ಳುವ ಬದಲು ತಲಾಖ್ ನೀಡುವುದೇ ಉತ್ತಮ ಎಂದು ಅಖಿಲ ಭಾರತ ಮುಸ್ಲಿಂ ಅಭಿಪ್ರಾಯ ಮಂಡಿಸಿತ್ತು.
ಧಾರ್ಮಿಕವಾಗಿ ನೀಡಲಾಗಿರುವ ಹಕ್ಕುಗಳನ್ನು ಪ್ರಶ್ನಿಸುವ ಹಕ್ಕು ಕಾನೂನಿಗೆ ಇಲ್ಲ ಎಂದೂ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.