23 ರಾಜ್ಯಗಳಿಗೆ ಮುಂಗಡ ವಿಪತ್ತು ಪರಿಹಾರ ನಿಧಿ ನೀಡಲು ಕೇಂದ್ರ ಅನುಮೋದನೆ
ನವದೆಹಲಿ, ಅಕ್ಟೋಬರ್ 01: ರಾಜ್ಯ ವಿಪತ್ತು ಪರಿಹಾರ ನಿಧಿಯ (ಎಸ್ಡಿಆರ್ಎಫ್) ಎರಡನೇ ಕಂತನ್ನು 23 ರಾಜ್ಯಗಳಿಗೆ ಮುಂಗಡವಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.
23 ರಾಜ್ಯಗಳಿಗೆ ಮುಂಗಡವಾಗಿ ಎರಡನೇ ಕಂತಿನ 7,274.40 ಕೋಟಿ ರೂ ಮೊತ್ತವನ್ನು ಬಿಡುಗಡೆ ಮಾಡಲು ಕೇಂದ್ರ ಅನುಮತಿ ನೀಡಿದೆ. ಯಾವುದೇ ವಿಪತ್ತಿನಿಂದ ಉಂಟಾಗುವ ತುರ್ತು ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ತಮ್ಮ ಎಸ್ಡಿಆರ್ಎಫ್ನಲ್ಲಿ ಸಾಕಷ್ಟು ಹಣ ಹೊಂದಿರಬೇಕೆಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿದ್ದು, ಅದರ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ಐದು ರಾಜ್ಯಗಳಿಗೆ ಈಗಾಗಲೇ ಮುಂಚಿತವಾಗಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಎರಡನೇ ಕಂತಿನ 1599 ಕೋಟಿ ರೂ ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ.

ಕೇಂದ್ರ ಸರ್ಕಾರ ಸೆಪ್ಟೆಂಬರ್ 25ರಂದು ಈ ಸಂಬಂಧ ಆದೇಶ ಹೊರಡಿಸಿದ್ದು, ಎಸ್ಡಿಆರ್ಎಫ್ ಅಡಿಯಲ್ಲಿ ನೆರವು ನೀಡಲು ಮಾನದಂಡಗಳನ್ನು ಪರಿಷ್ಕರಿಸಿ ಕೊರೊನಾ ಸೋಂಕಿನಿಂದ ಮೃತಪಟ್ಟ ಸಂಬಂಧಿಗಳಿಗೆ ಪರಿಹಾರ ನೀಡುವ ಅವಕಾಶವನ್ನು ನೀಡಿದೆ.
ಜೂನ್ 30ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಅನುಸಾರವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೆಪ್ಟೆಂಬರ್ 11ರಂದು ಹೊರಡಿಸಿದ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಂತೆ ಎಸ್ಡಿಆರ್ಎಫ್ ನಿಯಮಗಳಲ್ಲಿ ಅವಕಾಶ ನೀಡಲಾಗಿದೆ. ಇದರಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರಿಗೆ ರಾಜ್ಯ ಸರ್ಕಾರ ಪರಿಹಾರ ನೀಡುವುದು ಸೇರಿದೆ.
SDRF ಕೇಂದ್ರದ ಎರಡನೇ ಕಂತಿನ 7274 ಕೋಟಿ ರೂ ಹಣವನ್ನು ಮುಂಗಡವಾಗಿ 23 ರಾಜ್ಯಗಳಿಗೆ ಬಿಡುಗಡೆ ಮಾಡಲು ಅಮಿತ್ ಶಾ ಅನುಮೋದನೆ ನೀಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರಗಳು ಈಗ ತಮ್ಮ ಎಸ್ಡಿಆರ್ಎಫ್ನಲ್ಲಿ 2021-22ರ ಆರ್ಥಿಕ ವರ್ಷದಲ್ಲಿ 23,218.40 ಕೋಟಿ ರೂ ಮೊತ್ತವನ್ನು ಹೊಂದಿವೆ. SDRFನಲ್ಲಿ ಲಭ್ಯವಿರುವ ಆರಂಭಿಕ ಉಳಿಕೆ ಮೊತ್ತದ ಜೊತೆಗೆ ಕೋವಿಡ್ನಿಂದ ಮೃತಪಟ್ಟ ಸಂಬಂಧಿಗಳಿಗೆ ಪರಿಹಾರ ನೀಡಲು ಸೂಚಿಸಲಾಗಿದೆ.












Click it and Unblock the Notifications