ಲಸಿಕೆ ವಿತರಣೆಯಲ್ಲೂ ಕೇಂದ್ರ ರಾಜಕೀಯ ಆಟವಾಡುತ್ತಿದೆ; ರಾಜ್ಯಗಳ ದೂರು
ನವದೆಹಲಿ, ಏಪ್ರಿಲ್ 9: ಕೇಂದ್ರ ಸರ್ಕಾರವು ಲಸಿಕೆ ವಿತರಣೆ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಕೆಲವು ರಾಜ್ಯ ಸರ್ಕಾರಗಳು ದೂರಿವೆ.
ಈಚೆಗೆ ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿದ್ದು, ಕೊರೊನಾ ಪರೀಕ್ಷೆಗಳು ಹಾಗೂ ಲಸಿಕಾ ಕಾರ್ಯಕ್ರಮವನ್ನು ಚುರುಕುಗೊಳಿಸಲಾಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆಯ ಕೊರತೆ ಎದುರಾಗಿದೆ. ಹೀಗಾಗಿ, ಲಸಿಕೆ ವಿತರಣೆಯು ಸಮರ್ಪಕವಾಗಿಲ್ಲ. ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೆ ಲಸಿಕೆಗಳನ್ನು ಕೇಂದ್ರ ವಿತರಣೆ ಮಾಡದೆ ಲಸಿಕೆ ವಿಷಯವನ್ನೂ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ದೂರು ಕೇಳಿಬಂದಿವೆ.
ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ಮಮಹಾರಾಷ್ಟ್ರ, ಪಂಜಾಬ್, ಛತ್ತೀಸ್ಗಡ ಹಾಗೂ ದೆಹಲಿಯಂಥ ರಾಜ್ಯಗಳಿಗೆ ಸೂಕ್ತವಾಗಿ ಲಸಿಕೆಗಳನ್ನು ಪೂರೈಸದೇ ಇರುವುದು ದುರದೃಷ್ಟ ಎಂದು ಕೆಲವು ರಾಜ್ಯಗಳು ಪ್ರತಿಕ್ರಿಯೆ ನೀಡಿವೆ.
ಬುಧವಾರ ಆರೋಗ್ಯ ಸಚಿವ ಹರ್ಷವರ್ಧನ್ ಪತ್ರ ಬರೆದಿದ್ದು, ಕೆಲವು ರಾಜ್ಯಗಳು ಲಸಿಕೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅರ್ಹ ಫಲಾನುಭವಿಗಳಿಗೂ ಲಸಿಕೆ ನೀಡಿಲ್ಲ. ಈ ವಿಷಯವನ್ನು ಹೇಳಿದರೆ, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಲಸಿಕೆ ಕೊರತೆಯ ನೆಪ ಹೇಳುತ್ತಿದ್ದಾರೆ. ಸದ್ಯಕ್ಕಿರುವ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡದೇ, ಎಲ್ಲರಿಗೂ ಲಸಿಕೆ ಕೊಡಿ ಎಂದು ಬೇಡಿಕೆ ಒಡ್ಡಿ, ಜನರಲ್ಲಿ ಇಲ್ಲದ ಆತಂಕ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಭಾರತವೇ ನಂ.1: ಕೊರೊನಾ ಲಸಿಕೆ ವಿತರಿಸುವಲ್ಲಿ ದೇಶಕ್ಕೆ ಅಗ್ರಸ್ಥಾನ
ಈ ಪತ್ರಕ್ಕೆ ಸಂಬಂಧಿಸಿದಂತೆ ಜಂಟಿ ಆರೋಗ್ಯ ಕಾರ್ಯದರ್ಶಿ ಮನೋಹರ್ ಅವರು ಪ್ರತಿಕ್ರಿಯೆ ನೀಡಿದ್ದು, ಈ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಸರಾಸರಿ 85.5%ಗಿಂತಲೂ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿದ್ದವು ಹಾಗೂ ಸುಧಾರಣೆಯ ಅವಶ್ಯಕತೆಯನ್ನು ತೋರಿದ್ದವು ಎಂದು ದೂರಿದ್ದರು.
ಮಹಾರಾಷ್ಟ್ರವು ಸರಿಯಾಗಿ ಲಸಿಕೆಯನ್ನು ಬಳಸಿಕೊಳ್ಳುತ್ತಿಲ್ಲ ಎಂದು ಕೇಂದ್ರದ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪ್, "ಸದ್ಯಕ್ಕೆ ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ನಿಯಂತ್ರಣಕ್ಕೆ ವಾರಕ್ಕೆ ನಾಲ್ಕು ಮಿಲಿಯನ್ ಲಸಿಕೆಯ ಡೋಸ್ಗಳನ್ನು ಕೇಳಿದ್ದೆವು. ಆದರೆ ಕೇಂದ್ರವು ಇದನ್ನು ಕೂಡ ಕಡಿಮೆಗೊಳಿಸಿದೆ" ಎಂದು ತಿಳಿಸಿದ್ದಾರೆ.
ತಮ್ಮ ರಾಜ್ಯಕ್ಕಿಂತ ಜನಸಂಖ್ಯೆ ಕಡಿಮೆ ಇದ್ದರೂ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೆ ಹೆಚ್ಚಿನ ಲಸಿಕೆಗಳನ್ನು ಪೂರೈಸಲಾಗುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಹರಿಯಾಣಗಳಿಗೆ ಮಹಾರಾಷ್ಟ್ರಕ್ಕಿಂತಲೂ ಹೆಚ್ಚಿನ ಲಸಿಕೆಗಳು ಪೂರೈಕೆಯಾಗುತ್ತಿವೆ ಎಂದು ಹೇಳಿದರು.