CBSE 10ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ: ಮೊದಲ ಬೋರ್ಡ್ ಪರೀಕ್ಷೆಗೆ ಹಾಜರಾತಿ ಕಡ್ಡಾಯ
ಸಿಬಿಎಸ್ಇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು ಮಹತ್ವದ ಹಾಗೂ ಕಟ್ಟುನಿಟ್ಟಿನ ಸೂಚನೆಯೊಂದನ್ನು ನೀಡಿದೆ. 2026ನೇ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ಜಾರಿಗೆ ತರಲಾಗಿರುವ ಎರಡು ಬೋರ್ಡ್ ಪರೀಕ್ಷೆಗಳ (Two-board exam system) ನಿಯಮಗಳ ಕುರಿತು ಮಂಡಳಿಯು ಸ್ಪಷ್ಟನೆ ನೀಡಿದೆ. ಈ ಹೊಸ ನಿಯಮದ ಪ್ರಕಾರ, 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಮೊದಲ ಬೋರ್ಡ್ ಪರೀಕ್ಷೆಗೆ ಹಾಜರಾಗುವುದು ಸಂಪೂರ್ಣವಾಗಿ ಕಡ್ಡಾಯವಾಗಿದೆ. ಒಂದು ವೇಳೆ ವಿದ್ಯಾರ್ಥಿಗಳು ಮೊದಲ ಪರೀಕ್ಷೆಯನ್ನು ಲಘುವಾಗಿ ಪರಿಗಣಿಸಿ, ಮೂರು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳ ಪರೀಕ್ಷೆಗೆ ಗೈರುಹಾಜರಾದರೆ, ಅಂತಹ ವಿದ್ಯಾರ್ಥಿಗಳನ್ನು 'ಅಗತ್ಯ ಪುನರಾವರ್ತನೆ' (Essential Repeat) ವಿಭಾಗಕ್ಕೆ ಸೇರಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅಗತ್ಯ ಪುನರಾವರ್ತನೆ ಎಂದರೇನು?
ಅಗತ್ಯ ಪುನರಾವರ್ತನೆ ಎಂದರೆ, ವಿದ್ಯಾರ್ಥಿಯು ಅದೇ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಪರೀಕ್ಷೆ ಬರೆಯುವ ಅವಕಾಶವನ್ನು ಕಳೆದುಕೊಳ್ಳುವುದು ಎಂದರ್ಥ. ಸಿಬಿಎಸ್ಇ ಪರೀಕ್ಷಾ ನಿಯಂತ್ರಣಾಧಿಕಾರಿ ಸಂಯಮ್ ಭಾರದ್ವಾಜ್ ಅವರ ಪ್ರಕಾರ, "ಯಾವುದೇ ವಿದ್ಯಾರ್ಥಿ ಮೊದಲ ಬೋರ್ಡ್ ಪರೀಕ್ಷೆಯಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ಹಾಜರಾಗದಿದ್ದರೆ, ಅವರಿಗೆ ಎರಡನೇ ಬೋರ್ಡ್ ಪರೀಕ್ಷೆ (ಮೇ ತಿಂಗಳಲ್ಲಿ ನಡೆಯುವ ಪರೀಕ್ಷೆ) ಬರೆಯಲು ಅವಕಾಶವಿರುವುದಿಲ್ಲ. ಅಂತಹ ವಿದ್ಯಾರ್ಥಿಗಳನ್ನು 'ಎಸೆನ್ಷಿಯಲ್ ರಿಪೀಟ್' ವಿಭಾಗದಲ್ಲಿ ಇರಿಸಲಾಗುತ್ತದೆ. ಈ ವಿದ್ಯಾರ್ಥಿಗಳು ಮುಂದಿನ ವರ್ಷ (2027ರ ಫೆಬ್ರವರಿ) ನಡೆಯುವ ಮುಖ್ಯ ಪರೀಕ್ಷೆಗಳಲ್ಲಿ ಮಾತ್ರ ಮತ್ತೆ ಪರೀಕ್ಷೆ ಬರೆಯಬೇಕಾಗುತ್ತದೆ." ಈ ಕಠಿಣ ನಿಯಮವು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಗಂಭೀರತೆಯನ್ನು ಹೆಚ್ಚಿಸುವ ಹಾಗೂ ನಿರಂತರ ಕಲಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.

ಸ್ಪಷ್ಟನೆಗೆ ಕಾರಣವೇನು?
ಇತ್ತೀಚೆಗೆ ಕೆಲವು ಪೋಷಕರು ಮತ್ತು ವಿದ್ಯಾರ್ಥಿಗಳು ಸಿಬಿಎಸ್ಇ ಮಂಡಳಿಗೆ ಮನವಿಗಳನ್ನು ಸಲ್ಲಿಸಿದ್ದರು. ವೈಯಕ್ತಿಕ ಅಥವಾ ಇತರ ಕಾರಣಗಳಿಂದ ಮೊದಲ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ, ನೇರವಾಗಿ ಎರಡನೇ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದ್ದರು. ಆದರೆ, ಈ ಎಲ್ಲ ಮನವಿಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಬೋರ್ಡ್, ಯಾವುದೇ ಕಾರಣಕ್ಕೂ ಮೊದಲ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ. ಮೊದಲ ಪರೀಕ್ಷೆಯು ಮುಖ್ಯ ಪರೀಕ್ಷೆಯಾಗಿದ್ದು, ಎರಡನೆಯದು ಕೇವಲ ಅಂಕಗಳನ್ನು ಸುಧಾರಿಸಿಕೊಳ್ಳಲು (Improvement) ಅಥವಾ ಕಂಪಾರ್ಟ್ಮೆಂಟ್ (Compartment) ಪರೀಕ್ಷೆ ಬರೆಯಲು ನೀಡಲಾದ ಹೆಚ್ಚುವರಿ ಅವಕಾಶವಾಗಿದೆ.
ಎರಡನೇ ಪರೀಕ್ಷೆ (ಮೇ 2026) ಯಾರಿಗೆ ಅನ್ವಯಿಸುತ್ತದೆ?
ಹಾಗಾದರೆ ಎರಡನೇ ಬೋರ್ಡ್ ಪರೀಕ್ಷೆ ಯಾರಿಗೆ ಅನ್ವಯಿಸುತ್ತದೆ? ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳ ಪೈಕಿ ಗರಿಷ್ಠ ಮೂರು ವಿಷಯಗಳಲ್ಲಿ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಎರಡನೇ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾದ (Compartment) ವಿದ್ಯಾರ್ಥಿಗಳು ಸಹ ಈ ಎರಡನೇ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದಲ್ಲದೆ, ಸಿಬಿಎಸ್ಇ ಪರೀಕ್ಷಾ ನಿಯಂತ್ರಣಾಧಿಕಾರಿ ಸಂಯಮ್ ಭಾರದ್ವಾಜ್ ಅವರು ಇನ್ನೊಂದು ಮುಖ್ಯ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. 10ನೇ ತರಗತಿ ತೇರ್ಗಡೆಯಾದ ನಂತರ ಹೆಚ್ಚುವರಿ ವಿಷಯಗಳನ್ನು (Additional subjects) ತೆಗೆದುಕೊಳ್ಳಲು ಅಥವಾ ಪ್ರತ್ಯೇಕವಾಗಿ (Stand-alone subjects) ಬರೆಯಲು ವಿದ್ಯಾರ್ಥಿಗಳಿಗೆ ಅನುಮತಿ ಇರುವುದಿಲ್ಲ.
ಕೇವಲ ಒಂದು ವಿಷಯ ತಪ್ಪಿಸಿಕೊಂಡರೆ ಏನು ಮಾಡಬೇಕು?
ಒಂದು ವೇಳೆ ವಿದ್ಯಾರ್ಥಿಯು ಅನಾರೋಗ್ಯದಂತಹ ಗಂಭೀರ ಕಾರಣಗಳಿಂದ ಕೇವಲ ಒಂದು ವಿಷಯದ ಪರೀಕ್ಷೆಯನ್ನು ಮಾತ್ರ ತಪ್ಪಿಸಿಕೊಂಡರೆ, ಅದಕ್ಕೂ ಪರಿಹಾರವಿದೆ. ವಿದ್ಯಾರ್ಥಿಯು ಪರೀಕ್ಷೆ ಆರಂಭವಾದ 15 ದಿನಗಳ ಒಳಗೆ ಶಾಲೆಯ ಮುಖಾಂತರ ಪ್ರಾದೇಶಿಕ ಕಚೇರಿಗೆ (Regional Office) ಸೂಕ್ತ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಅಂತಹ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ, ತಪ್ಪಿಸಿಕೊಂಡ ಆ ಒಂದು ವಿಷಯವನ್ನು ಮಾತ್ರ ಎರಡನೇ ಪರೀಕ್ಷೆಯ (ಮೇ ತಿಂಗಳ) ವೇಳೆ ಬರೆಯಲು ಸಿಬಿಎಸ್ಇ ಅವಕಾಶ ನೀಡಬಹುದು. ಆದರೆ ಮೂರಕ್ಕಿಂತ ಹೆಚ್ಚು ವಿಷಯ ಕೈಬಿಟ್ಟರೆ ಯಾವುದೇ ವಿನಾಯಿತಿ ಇರುವುದಿಲ್ಲ.
ಪರೀಕ್ಷಾ ಮಾರ್ಗಸೂಚಿಗಳು
ಪರೀಕ್ಷಾ ಮಾರ್ಗಸೂಚಿಗಳ ಬಗ್ಗೆಯೂ ಮಂಡಳಿ ಎಚ್ಚರಿಕೆ ನೀಡಿದೆ. ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಬೆಳಿಗ್ಗೆ 10:00 ಗಂಟೆಯ ಒಳಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. 10:30ಕ್ಕೆ ಪರೀಕ್ಷೆ ಶುರುವಾಗಲಿದ್ದು, ಯಾವುದೇ ಕಾರಣಕ್ಕೂ ವಿಳಂಬವಾಗಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದಿಲ್ಲ. ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲಾ ಸಮವಸ್ತ್ರದಲ್ಲಿರಬೇಕು, ತಮ್ಮ ಮೂಲ ಪ್ರವೇಶ ಪತ್ರವನ್ನು (Admit Card) ಹಾಗೂ ಶಾಲಾ ಗುರುತಿನ ಚೀಟಿಯನ್ನು ಜೊತೆಯಲ್ಲಿ ತರಲೇಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ.
-
Lunar Eclipse: ಮಾರ್ಚ್ 3 ಹುಣ್ಣಿಮೆ: ವರ್ಷದ ಮೊದಲ ಮಹಾ ಚಂದ್ರ ಗ್ರಹಣ – ನಾಲ್ಕು ರಾಶಿಗಳಿಗೆ ಅಶುಭ ಸೂಚನೆ -
ರಶ್ಮಿಕಾ ಮೊದಲ ಸಿನಿಮಾದಲ್ಲಿ ನಾನು ಹೀರೋ, ನೀನು ಬಾಲಿವುಡ್ಗೆ ಪಕ್ಕಾ ಹೋಗ್ತೀಯ ಎಂದಿದ್ದೆ: ನಟ ತ್ರಿವಿಕ್ರಮ್ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಜೋಡಿಯಿಂದ ಕರ್ನಾಟಕ ಸೇರಿ ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಅನ್ನದಾನ ಸೇವೆ -
LPG Price: ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಏರಿಕೆ: ಇಲ್ಲಿದೆ ಮಾರ್ಚ್ 1ರ ದರಪಟ್ಟಿ -
Gold Rate Today: ಆಭರಣ ಪ್ರಿಯರ ಗಮನಕ್ಕೆ: ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ -
National Highway: ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿಯ ಮಹತ್ವದ ಅಪ್ಡೇಟ್ -
ಬೇರೆ ದೇಶಗಳಂತೆ ಭಾರತೀಯರಿಗೆ ಭಯದಿಂದ ನಿದ್ರಿಸುವ ಪರಿಸ್ಥಿತಿ ಅಲ್ಲ: ನಿವೃತ್ತ ಸೇನಾಧಿಕಾರಿ ಸುನೀಲ್ ಕುಮಾರ್ ಶಾಸ್ತ್ರಿ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ -
Karnataka Weather: ಕರ್ನಾಟಕದ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು -
ಮಾರ್ಚ್ 3, 2026 – ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಕೇತುಗ್ರಸ್ತ ಮಹಾ ಚಂದ್ರಗ್ರಹಣ: ದ್ವಾದಶ ರಾಶಿಗಳ ಫಲಿತಾಂಶ -
ಕರ್ನಾಟಕದ 4 ರೈಲು ನಿಲ್ದಾಣ ಸೇರಿ 76 ಕಡೆ ಪ್ರಯಾಣಿಕರ ನಿಲುಗಡೆ ತಾಣ ನಿರ್ಮಾಣ, ಏನಿದರ ಪ್ರಯೋಜನ?












Click it and Unblock the Notifications