ಅತ್ಯಾಚಾರ ಪ್ರಕರಣದಲ್ಲಿ ದೇವಮಾನವ ರಾಮ್ ರಹೀಮ್ ಸಿಂಗ್ ದೋಷಿ
ಚಂಡೀಗಢ, ಆಗಸ್ಟ್ 25: 15 ವರ್ಷ ಹಿಂದೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ದೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ಪಂಚಕುಲದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
Live: ರಾಮ್ ರಹೀಮ್ ಸಿಂಗ್ ಅನುಯಾಯಿಗಳಿಂದ ಹಿಂಸಾಚಾರ
ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಆಗಸ್ಟ್ 28ರಂದು ಪ್ರಕಟಿಸಲಿದೆ. ನ್ಯಾಯಾಲಯ ತೀರ್ಪು ನೀಡುವ ವೇಳೆ ಹಾಜರಿದ್ದ ಸ್ವಘೋಷಿತ ದೇವಮಾನವ ರಾಮ್ ರಹೀಮ್ ಸಿಂಗ್ ರನ್ನು ಕೋರ್ಟ್ ಆವರಣದಲ್ಲೇ ಪೊಲೀಸರು ವಶಕ್ಕೆ ಪಡೆದರು.
ರಾಮ್ ರಹೀಮ್ ಸಿಂಗ್ ನ್ಯಾಯಾಂಗ ಬಂಧನದಲ್ಲಿದ್ದು, ಅವರನ್ನು ಹರ್ಯಾಣ ಪೊಲೀಸರು ಅಂಬಾಲ ಜೈಲಿಗೆ ಕರೆತರಲಿದ್ದಾರೆ.
ಅತ್ಯಾಚಾರಿ ಬಾಬಾ ರಾಮ್ ರಹೀಮ್ ಜನಪ್ರಿಯತೆಯ ಗುಟ್ಟೇನು?
ರಾಮ್ ರಹೀಮ್ ಸಿಂಗ್ ದೋಷಿ ಎನ್ನುತ್ತಿದ್ದಂತೆ ಅವರ ಬೆಂಬಲಿಗರು ಹಿಂಸಾಚಾರಕ್ಕೆ ಇಳಿದಿದ್ದು ಪಂಜಾಬ್ ಮತ್ತು ಹರ್ಯಾಣದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ರಾಜಸ್ಥಾನವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ರಾಮ್ ರಹೀಮ್ ಸಿಂಗ್ ಪ್ರಕರಣ ಬೆಳಕಿಗೆ ತಂದ ಪತ್ರಕರ್ತನ ಹತ್ಯೆಯಾಗಿತ್ತು
ಏನಿದು ಪ್ರಕರಣ?
ಚಂಡೀಗಢದಿಂದ ಸುಮಾರು 260 ಕಿಲೋಮೀಟರ್ ದೂರದಲ್ಲಿರುವ ಸಿರ್ಸಾದ ದೇರಾದಲ್ಲಿ ಗುರ್ಮಿತ್ ರಾಮ್ ರಹೀಂ ಸಿಂಗ್ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಇದಾಗಿದೆ. ಈ ಸಂಬಂಧ ಸಿಬಿಐ 2002ರಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. 2008ರ ಸುಮಾರಿಗೆ ಇದರ ವಿಚಾರಣೆ ಆರಂಭವಾಗಿತ್ತು. ಇಂದು ತೀರ್ಪು ಪ್ರಕಟವಾಗಿದ್ದು ರಾಮ್ ರಹೀಮ್ ಸಿಂಗ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.