ವಿಮಾನದಲ್ಲಿ ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಆರೋಪಿಗೆ ಜಾಮೀನು!
ನ್ಯೂಯಾರ್ಕ್ನಿಂದ ನವದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿ ಶಂಕರ್ ಮಿಶ್ರಾಗೆ ದೆಹಲಿ ನ್ಯಾಯಾಲಯ ಇಂದು ಜಾಮೀನು ನೀಡಿದೆ.
ನವದೆಹಲಿ ಜನವರಿ 31: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿ ಶಂಕರ್ ಮಿಶ್ರಾಗೆ ದೆಹಲಿ ನ್ಯಾಯಾಲಯ ಇಂದು ಜಾಮೀನು ನೀಡಿದೆ. ಕಳೆದ ವರ್ಷ ನವೆಂಬರ್ 26 ರಂದು ನ್ಯೂಯಾರ್ಕ್ನಿಂದ ನವದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಶಂಕರ್ ಮಿಶ್ರಾ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪವನ್ನು ಹೊತ್ತಿದ್ದರು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜನವರಿ 11 ರಂದು ಮಿಶ್ರಾ ಅವರಿಗೆ ಜಾಮೀನು ನಿರಾಕರಿಸಿತ್ತು. ಕಳೆದ ದಿನ ತೀರ್ಪನ್ನು ಕಾಯ್ದಿಸಿದ್ದ ನ್ಯಾಯಾಲಯ ಇಂದು ಶಂಕರ್ ಮಿಶ್ರಾಗೆ ಜಾಮೀನು ಮಂಜೂರು ಮಾಡಿದೆ.
ಶಂಕರ್ ಮಿಶ್ರಾ ಅವರನ್ನು ಏಕೆ ಬಂಧಿಸಲಾಯಿತು?
ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ವಯಸ್ಸಾದ ಮಹಿಳೆಯೊಬ್ಬರ ಮೇಲೆ ಸಹ-ಪ್ರಯಾಣಿಕ ಶಂಕರ್ ಮಿಶ್ರಾ ಮೂತ್ರ ವಿಸರ್ಜನೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಲುಕ್ ಔಟ್ ಸುತ್ತೋಲೆ ಹೊರಡಿಸಿದ ನಂತರ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಯಿತು. ವಿಷಯ ಬೆಳಕಿಗೆ ಬಂದಾಗಿನಿಂದ ಅವರು ತಲೆಮರೆಸಿಕೊಂಡಿದ್ದರು. ಈ ವಿಚಾರ ಸಂಬಂಧ ಎಫ್ ಐಆರ್ ದಾಖಲಾದ ನಂತರ ಆರೋಪಿಯ ಲೋಕೇಶನ್ ಪತ್ತೆ ಹಚ್ಚಲು ಆರಂಭಿಸಿದಾಗ ಬೆಂಗಳೂರು ತೋರಿಸುತಿತ್ತು. ಆದರೆ, ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 3 ರಂದು ಆತನ ಕೊನೆಯ ಲೋಕೇಶನ್ ಬೆಂಗಳೂರಿನಲ್ಲಿ ಪತ್ತೆಯಾಗಿತ್ತು. ಆದರೆ, ತದನಂತರ ಫೋನ್ ಸ್ವಿಚ್ ಆಫ್ ಆಗಿತ್ತು. ಆರೋಪಿ ಬೆಂಗಳೂರಿಗೆ ಹೋಗಲು ಟ್ಯಾಕ್ಸಿ ಬಳಸಿದ್ದ. ಆತನ ಟ್ರಾವೆಲ್ ಹಿಸ್ಟರಿ ಬಳಸಿ ಬೆಂಗಳೂರಿಗೆ ಹೋಗಿ ಬಂಧಿಸಲಾಯಿತು.
'ಮೂತ್ರ ವಿಸರ್ಜನೆ' ಘಟನೆಯನ್ನು ಗಮನಿಸಿ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾಕ್ಕೆ ಶೋಕಾಸ್ ನೋಟಿಸ್ ಜಾರಿ ಮಾಡಿತು. ಘಟನೆಯನ್ನು ನಿರ್ವಹಿಸಿದ ರೀತಿ 'ವೃತ್ತಿಪರವಾಗಿಲ್ಲ' ಎಂದು ಹೇಳಿತ್ತು. ಘಟನೆಯ ನಂತರ, ಶಂಕರ್ ಮಿಶ್ರಾ ಅವರನ್ನು ಕೆಲಸದಿಂದಲೂ ವಜಾಗೊಳಿಸಲಾಯಿತು.












Click it and Unblock the Notifications