ಪಾಪ ಮಾಡಿದವರಿಗೆ ದೇವರು ಕೊಡುವ ಶಿಕ್ಷೆ ಕ್ಯಾನ್ಸರ್: ಬಿಜೆಪಿ ಮುಖಂಡ
ಗುವಾಹಟಿ, ನವೆಂಬರ್ 23: "ಪಾಪ ಮಾಡಿದವರಿಗೆ ದೇವರೇ ಶಿಕ್ಷೆ ನೀಡುತ್ತಾನೆ. ಚಿಕ್ಕ ವಯಸ್ಸಿನಲ್ಲಿಯೇ ವಾಹನಾಪಘಾತದಿಂದ ಮರಣ ಹೊಂದುವುದು ಅಥವಾ ಕ್ಯಾನ್ಸರ್ ನಂಥ ಮಾರಣಾಂತಿಕ ಕಾಯಿಲೆಗೆ ತುತ್ತಾಗುವುದು ಎಂದರೆ ದೇವರೇ ನೀಡುವ ಶಿಕ್ಷೆ ಅದು" ಎಂಬ ಅಸಂಬದ್ಧ ಹೇಳಿಕೆಯೊಂದನ್ನು ನೀಡುವ ಮೂಲಕ ಅಸ್ಸಾಮಿನ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ವಿವಾದ ಸೃಷ್ಟಿಸಿದ್ದಾರೆ.
ಮೋದಿ ವಿರುದ್ಧ ಬೆಟ್ಟುಮಾಡಿದರೆ, ಬೆರಳು ಕತ್ತರಿಸುತ್ತೇನೆ: ಬಿಜೆಪಿ ನಾಯಕ
ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಶರ್ಮಾ, ಇಂಥದೊಂದು ವಿವೇಚನಾ ರಹಿತ ಹೇಳಿಕೆ ನೀಡಿದ್ದರ ಕುರಿತು ಪಿ.ಚಿದಂಬರಂ ಸೇರಿದಂತೆ ಪ್ರತಿಪಕ್ಷ ಕಾಂಗ್ರೆಸ್ ನ ಹಲವು ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.
'ಈ ಹೇಳಿಕೆಯಿಂದ ಆ ಪಕ್ಷದ ನಾಯಕರ ಮನಸ್ಥಿತಿ ಎಂಥದು ಎಂಬುದು ಅರ್ಥವಾಗುತ್ತದೆ' ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಶರ್ಮಾ, 'ಪಿ.ಚಿದಂಬರಂ ಅವರು ನನ್ನ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ. ನಾನು ಹೇಳಿದ್ದು, ಹಿಂದು ಮತ್ತು ಕ್ರೈಸ್ತ ನಂಬಿಕೆಯ ಪ್ರಕಾರ ಕರ್ಮ ಸಿದ್ಧಾಂತದಲ್ಲಿ ನಮಗೆ ನಂಬಿಕೆ ಇದೆ ಎಂದಷ್ಟೆ. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಲಾಗಿದೆ' ಎಂದು ಸಮಜಾಯಿಷಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮತ್ತೋರ್ವ ಕಾಂಗ್ರೆಸ್ ಮುಖಂಡ ದೇಬಾಬ್ರತ ಸಾಯ್ಕಾಯ್, 'ಈ ಮಾತು ಕ್ಯಾನ್ಸರ್ ರೋಗಿಗಳಿಗೆ ಎಷ್ಟು ನೋವುಂಟು ಮಾಡುತ್ತದೆ ಎಂಬ ಅರಿವಿದೆಯೇ? ಒಬ್ಬ ಆರೋಗ್ಯ ಸಚಿವರಾಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂಥ ಮಾತನ್ನಾಡಿರುವುದು ನಿಜಕ್ಕೂ ದುರಂತ' ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.