ಸಂಪುಟ ವಿಸ್ತರಣೆ: ಪ್ರಧಾನಿ ಮೋದಿಗೆ ದೇವೇಗೌಡರ ವಿಷಾದದ 3 ಪ್ರಶ್ನೆಗಳು
ಕೇಂದ್ರದ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ವಿಷಾದ ವ್ಯಕ್ತ ಪಡಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಗೆ ದೇವೇಗೌಡರ ಮೂರು ಪ್ರಶ್ನೆಗಳು.
ಭಾನುವಾರ (ಸೆ 3) ನಡೆದ ಕೇಂದ್ರದ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ವಿಷಾದ ವ್ಯಕ್ತ ಪಡಿಸಿದ್ದಾರೆ.
ದಾವಣಗೆರೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಗೌಡ್ರು, ಪ್ರಧಾನಿ ಮೋದಿಯವರ ಭರವಸೆಗಳು ಬರೀ ಹೇಳಿಕೆಗೆ ಸೀಮಿತವಾಗದೇ, ಕಾರ್ಯರೂಪಕ್ಕೂ ಬರಲಿ ಎಂದು ಹೇಳಿದ್ದಾರೆ.
ಉತ್ತರಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಗೌಡ್ರು, ಮೋದಿ ಸರಕಾರದ ಈ ನಿರ್ಧಾರ ಒಂದು ವರ್ಗವನ್ನು ಓಲೈಸಲು ಎನ್ನುವುದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ.
ನಾನು ಮತ್ತು ಕುಮಾರಸ್ವಾಮಿ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ನಮಗೆ ಈ ಬಾರಿ ಮತದಾರ ಆಶೀರ್ವಾದ ಮಾಡಬಹುದು ಎನ್ನುವ ಆಶಾಭಾವನೆಯನ್ನು ಹೊಂದಿದ್ದೇವೆ ಎಂದು ದೇವೇಗೌಡರು ಹೇಳಿದ್ದಾರೆ.
ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಕಿತ್ತಾಡುವುದರಲ್ಲೇ ಕಾಲಕಳೆಯುತ್ತಿದೆ. ಜನರ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಬಿಜೆಪಿಗೆ ಮತ್ತು ಕಾಂಗ್ರೆಸ್ಸಿಗೆ ಪುರುಷೋತ್ತಿಲ್ಲ ಎಂದು ಗೌಡ್ರು ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದು ಮೇಲೆ ಗೌಡ್ರ ಬೇಸರ, ಮೋದಿಗೆ ಗೌಡರ ಮೂರು ಪ್ರಶ್ನೆಗಳು, ಮುಂದೆ ಓದಿ..

ಸಿದ್ದರಾಮಯ್ಯ ಈ ರಾಜ್ಯದ ಶಕ್ತಿ ಎಂದಿದ್ದೆ
ಈ ಹಿಂದೆ ನಾನೇ ಕೆಲವು ಬಾರಿ ಸಿದ್ದರಾಮಯ್ಯ ಈ ರಾಜ್ಯದ ಶಕ್ತಿ ಎಂದಿದ್ದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಕಾರ್ಯವೈಖರಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಚುನಾವಣಾ ಹೊತ್ತಿನಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದೆಗೆಡುವ ಸಾಧ್ಯತೆಯಿದೆ - ದೇವೇಗೌಡ.

ಗೌಡರ ಶಕ್ತಿ ಏನಿದ್ದರೂ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ
ಗೌಡರ ಶಕ್ತಿ ಏನಿದ್ದರೂ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಮೂರು ತಿಂಗಳು ಪ್ರವಾಸ ಮಾಡುತ್ತಿದ್ದೇನೆ, 125 ಕ್ಷೇತ್ರ ಗೆಲ್ಲಬೇಕು ಎನ್ನುವ ಕನಸನ್ನು ಹೊಂದಿದ್ದೇನೆ - ದೇವೇಗೌಡ.

ಬೆಂಕಿಚೆಂಡು ಎನ್ನುವ ಹೆಸರನ್ನು ಹೆಗಡೆ ಹೊಂದಿದ್ದಾರೆ
ಉತ್ತರಕನ್ನಡ ಜಿಲ್ಲೆಯಲ್ಲಿ 'ಬೆಂಕಿಚೆಂಡು' ಎನ್ನುವ ಹೆಸರನ್ನು ಅನಂತಕುಮಾರ್ ಹೆಗಡೆ ಹೊಂದಿದ್ದಾರೆ. ವೈದರ ಮೇಲೆ ಹೆಗಡೆ ಹಲ್ಲೆ ನಡೆಸಿದ್ದೂ ನಮಗೆಲ್ಲಾ ಗೊತ್ತಿದೆ. ಇಂತವರಿಗೆ ಸಚಿವ ಸ್ಥಾನ ನೀಡಿದರೆ, ಕಾನೂನು ಮತ್ತು ಸುವ್ಯವಸ್ಥೆ ಗತಿಯೇನಾಗಬೇಕು? ಮೋದಿಗೆ ಗೌಡ್ರ ಮೊದಲ ಪ್ರಶ್ನೆ.

ಪ್ರಧಾನಿ ಮೋದಿಗೆ ಗೌಡ್ರ ಎರಡನೇ ಪ್ರಶ್ನೆ
ಅನಂತಕುಮಾರ್ ಹೆಗಡೆಗೆ ಮುಸ್ಲಿಂ ಸಮುದಾಯದ ಜೊತೆ ಯಾವ ರೀತಿ ಬಾಂಧವ್ಯ ಇದೆ ಎನ್ನುವುದು ಗೊತ್ತಿದ್ದರೂ, ಅವರಿಗೆ ಸ್ಥಾನ ನೀಡಿದ್ದೀರಾ. ಈ ಭಾಗದ ಮುಸ್ಲಿಮರು ಈಗ ಎಲ್ಲಿಗೆ ಹೋಗಬೇಕು ಹೇಳಿ? ಮೋದಿಗೆ ಗೌಡ್ರ ಎರಡನೇ ಪ್ರಶ್ನೆ.

ಪ್ರಧಾನಿ ಮೋದಿಗೆ ಗೌಡರ ಮೂರನೇ ಪ್ರಶ್ನೆ
ದೇಶದಲ್ಲಿ ಸಾಮರಸ್ಯ ಬೇಕು ಎನ್ನುವ ನಿಮಗೆ ಅನಂತಕುಮಾರ್ ಹೆಗಡೆಗೆ ಸ್ಥಾನ ನೀಡಿದ್ದು ಸರಿ ಎನಿಸುತ್ತಿದೆಯಾ, ಕಟ್ಟಾ ಹಿಂದೂವಾದಿಯಾಗಿರುವ ಹೆಗಡೆರನ್ನು ಸಚಿವರನ್ನಾಗಿ ಮಾಡಿ, ಉತ್ತರಕನ್ನಡ ಜಿಲ್ಲೆಯ ಮುಸ್ಲಿಂರನ್ನು ಎಲ್ಲಿಗೆ ಕಳುಹಿಸುತ್ತೀರಾ? ಮೋದಿಗೆ ಗೌಡರ ಮೂರನೇ ಪ್ರಶ್ನೆ.












Click it and Unblock the Notifications