ಉಪಚುನಾವಣಾ ಫಲಿತಾಂಶ: 14 ರಲ್ಲಿ ಬಿಜೆಪಿಗೆ 3, ಕಾಂಗ್ರೆಸಿಗೆ 5 ಗೆಲುವು
ನವದೆಹಲಿ, ಮೇ 31: ಕರ್ನಾಟಕದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಮುಂದೂಡಲ್ಪಟ್ಟ ಚುನಾವಣೆ ಹಾಗೂ 4 ಲೋಕಸಭಾ ಸ್ಥಾನಗಳು 9 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರ ಬಿದ್ದಿದೆ.
ಒಟ್ಟು 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಕೇವಲ 3 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಮೈತ್ರಿಕೂಟ ಬಿಜೆಪಿಗಿಂತ ಉತ್ತಮ ಪ್ರದರ್ಶನ ನೀಡಿದ್ದು 5 ಕ್ಷೇತ್ರಗಳಲ್ಲಿ ಯುಪಿಎ ಅಭ್ಯರ್ಥಿಗಳು ಗೆದ್ದಿದ್ದಾರೆ.
ಪಕ್ಷವಾರು ಫಲಿತಾಂಶ ನೋಡುವುದಾದರೆ, ಬಿಜೆಪಿ - 2, ಕಾಂಗ್ರೆಸ್ - 4, ಜೆಎಂಎಂ - 2, ಆರ್.ಜೆ.ಡಿ - 1, ಆರ್.ಎಲ್.ಡಿ - 1, ಎನ್.ಸಿ.ಪಿ - 1, ಎಸ್.ಪಿ - 1, ಎನ್.ಡಿ.ಪಿ.ಪಿ. - 1, ಸಿಪಿಎಂ - 1, ಟಿಎಂಸಿ - 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಎಲ್ಲಾ ಕ್ಷೇತ್ರಗಳ ಫಲಿತಾಂಶ ಇಲ್ಲಿದೆ.
1) ಕೈರಾನಾ (ಲೋಕಸಭಾ ಕ್ಷೇತ್ರ) – ಆರ್.ಎಲ್.ಡಿ ಗೆಲುವು
ಇಲ್ಲಿ ಆರ್.ಎಲ್.ಡಿಯ ತಬಸ್ಸುಮ್ ಬೇಗಂ ಗೆಲುವು ಸಾಧಿಸಿದ್ದಾರೆ. 4,01,464 ಮತಗಳನ್ನು ಪಡೆದ ಅವರು ಸುಮಾರು 51 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮೃಗಾಂಕಾ ಸಿಂಗ್ ರನ್ನು ಸೋಲಿಸಿದ್ದಾರೆ.
2) ನೂರ್ ಪುರ್ (ವಿಧಾನಸಭಾ ಕ್ಷೇತ್ರ) - ಎಸ್ಪಿಗೆ ಗೆಲುವು
ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಯೀಮುಲ್ ಹುಸೇನ್ ಗೆಲುವು ಸಾಧಿಸಿದ್ದಾರೆ. ಅವರು 92,113 ಮತಗಳನ್ನು ಪಡೆದು 82,523 ಮತಗಳನ್ನು ಪಡೆದ ಬಿಜೆಪಿಯ ಅವನಿ ಸಿಂಗ್ ರನ್ನು ಸೋಲಿಸಿದ್ದಾರೆ.
3) ಭಂಡಾರ – ಗೋಂಡಿಯಾ (ಲೋಕಸಭಾ ಕ್ಷೇತ್ರ) – ಎನ್ ಸಿಪಿಗೆ ಗೆಲುವು
ವಿದರ್ಭ ಭಾಗದಲ್ಲಿ ಬರುವ ಈ ಲೋಕಸಭಾ ಕ್ಷೇತ್ರದಲ್ಲಿ ಎನ್ ಸಿಪಿಯ ಕುಕಾಡೆ ಮಧುಕ್ರಾವ್ ಯಶವಂತ್ರಾವ್ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಹೇಮಂತ್ ಪಾಟೀಲ್ ವಿರುದ್ಧ ಅವರು ಜಯ ಸಾಧಿಸಿದ್ದಾರೆ.
4) ಪಲುಸ್ - ಕಡೆಗಾಂವ್ (ವಿಧಾನಸಭಾ ಕ್ಷೇತ್ರ) - ಕಾಂಗ್ರೆಸ್ ಗೆ ಗೆಲುವು
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಶ್ವಜೀತ್ ಪಿ ಕದಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಣದಲ್ಲಿದ್ದ ಏಕೈಕ ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು ಬಿಜೆಪಿ ಹಿಂತೆಗೆದುಕೊಂಡಿದ್ದರಿಂದ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
5) ಪಲ್ಗಾರ್ (ಲೋಕಸಭಾ ಕ್ಷೇತ್ರ) - ಬಿಜೆಪಿಗೆ ಜಯ
ಕೊಂಕಣ ಪ್ರದೇಶದಲ್ಲಿ ಬರುವ ಪಲ್ಗಾರ್ ನಲ್ಲಿ ಬಿಜೆಪಿಯ ಗವಿತ್ ರಾಜೇಂದ್ರ ಧೇಡ್ಯಾ 2,72,780 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಇಲ್ಲಿ ಶಿವಸೇನೆ ಎರಡನೇ ಸ್ಥಾನವನ್ನು ಪಡೆದಿದ್ದು ಅವರ ಅಭ್ಯರ್ಥಿ 2,43,206 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಬಿವಿಎ ಪಕ್ಷದ ಬಲಿರಾಮ್ ಸುಕೂರ್ ಜಾಧವ್ 2,22,837 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
6) ನಾಗಲ್ಯಾಂಡ್ (ಲೋಕಸಭಾ ಕ್ಷೇತ್ರ) - ಎನ್ ಡಿಪಿಪಿಗೆ ಗೆಲುವು
ನಾಗಲ್ಯಾಂಡ್ ನಲ್ಲಿರುವು ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಪಕ್ಷ ಎನ್ ಡಿಪಿಪಿಯ ಟೊಕೆಹೋ ಜಯ ಸಾಧಿಸಿದ್ದಾರೆ. ಇಲ್ಲಿ ಟೊಕೆಹೋ 5,48,749 ಮತಗಳನ್ನು ಪಡೆದರೆ ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) ನ ಸಿ. ಅಪೋಕ್ ಜಮೀರ್ 3,92,827 ಮತಗಳನ್ನು ಪಡೆದು ಸೋತಿದ್ದಾರೆ.
7) ಚೆಂಗನೂರು (ವಿಧಾನಸಭಾ ಕ್ಷೇತ್ರ) – ಸಿಪಿಎಂಗೆ ಜಯ
ಚೆಂಗನೂರು ವಿಧಾನಸಭಾ ಕ್ಷೇತ್ರದಲ್ಲಿ ಎಡಪಂಥೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಪರವಾಗಿ ಸಿಪಿಎಂ ಪಕ್ಷಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ಶಾಜಿ ಚೆರಿಯನ್ 67,303 ಮತಗಳನ್ನು ಪಡೆದು ಇಲ್ಲಿ ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸಿನ ಡಿ. ವಿಜಯಕುಮಾರ್ 46,347 ಮತ್ತು ಬಿಜೆಪಿಯ ಪಿ.ಎಸ್. ಶ್ರೀಧರನ್ ಪಿಳ್ಳೈ 35,270 ಮತಗಳನ್ನು ಪಡೆದಿದ್ದಾರೆ.
8) ಅಂಪಟಿ (ವಿಧಾನಸಭಾ ಕ್ಷೇತ್ರ) – ಕಾಂಗ್ರೆಸ್ ಗೆ ಜಯ
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಮೇಘಾಲಯದ ಅಂಪಟಿ ಕ್ಷೇತ್ರದಲ್ಲಿ ಇಲ್ಲಿನ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಪುತ್ರಿ ಮಿಯಾನಿ ಡಿ ಶಿರಾ ಗೆದ್ದಿದ್ದಾರೆ. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಅವರು 14,259 ಮತಗಳನ್ನು ಪಡೆದು ಎನ್ ಪಿಪಿಯ ಕ್ಲೆಮೆಂಟ್ ಜಿ ಮೊಮಿನ್ ವಿರುದ್ಧ ಗೆದ್ದಿದ್ದಾರೆ. ಇಲ್ಲಿ ಮೊಮಿನ್ 11,068 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದರು.
9) ಮಹೇಶ್ತಲ (ವಿಧಾನಸಭಾ ಕ್ಷೇತ್ರ) – ಟಿಎಂಸಿ ಜಯಭೇರಿ
ಮಹೇಶ್ತಲ ವಿಧಾನಸಭಾ ಕ್ಷೇತ್ರದಲ್ಲಿಯೂ ಗೆಲುವಿನ ನಗೆ ಬೀರಿ ಆಡಳಿತರೂಢ ಟಿಎಂಸಿ ರಾಜ್ಯದಲ್ಲಿ ತನ್ನ ಹಿಡಿತ ಬಲವಾಗಿದೆ ಎಂಬುದನ್ನು ಮತ್ತೆ ನಿರೂಪಿಸಿದೆ. ಇಲ್ಲಿ ಟಿಎಂಸಿಯ ದುಲಾಲ್ ಚಂದ್ರ ದಾಸ್ ಗೆದ್ದಿದ್ದರೆ, ಸಿಪಿಎಂನ ಪ್ರಬಾತ್ ಚೌಧರ್ಇ ಮತ್ತು ಬಿಜೆಪಿಯ ಸುಜಿತ್ ಕುಮಾರ್ ಘೋಷ್ ಸೋಲೊಪ್ಪಿಕೊಂಡಿದ್ದಾರೆ.
10) ಜೋಕಿಹಾಟ್ (ವಿಧಾನಸಭಾ ಕ್ಷೇತ್ರ) – ಆರ್.ಜೆ.ಡಿಗೆ ಗೆಲುವು
ಆರ್.ಜೆ.ಡಿ ಯ ಶಹನವಾಜ್ ಇಲ್ಲಿ ಗೆಲುವು ಸಾಧಿಸಿದ್ದಾರೆ. 76,002 ಮತಗಳನ್ನು ಪಡೆದ ಅವರು ಜೆಡಿಯುನ ಮುರ್ಷಿದ್ ಅಲಾಂ ವಿರುದ್ಧ ಗೆಲುವು ಸಾಧಿಸಿದ್ದಾರೆ. ಆಡಳಿತರೂಢ ಜೆಡಿಯು-ಬಿಜೆಪಿ ಮೈತ್ರಿಕೂಟ ಇಲ್ಲಿ ಸೋಲೊಪ್ಪಿಕೊಂಡು ಭಾರೀ ಮುಖಭಂಗ ಅನುಭವಿಸಿದೆ.
11) ಶಹಾಕೂಟ್ (ವಿಧಾನಸಭಾ ಕ್ಷೇತ್ರ) – ಕಾಂಗ್ರೆಸ್ ಗೆಲುವು
ಇಂದು ಶಹಾಕೂಟ್ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸಿನ ಹರ್ದೇವ್ ಸಿಂಗ್ ಲಾಡಿ ಗೆಲುವು ಸಾಧಿಸಿದ್ದಾರೆ. ಅಕಾಲಿ ದಳದ ಅಭ್ಯರ್ಥಿ ನಯೀಬ್ ಸಿಂಗ್ ಕೋಹರ್ ಮತ್ತು ಎಎಪಿಯ ಅಭ್ಯರ್ಥಿ ರತನ್ ಸಿಂಗ್ ವಿರುದ್ಧ ಅವರು ಭರ್ಜರಿ ಜಯ ದಾಖಲಿಸಿದ್ದಾರೆ.
12) ಗೋಮಿಯಾ (ವಿಧಾನಸಭಾ ಕ್ಷೇತ್ರ) – ಜೆಎಂಎಂ ಗೆಲುವು
ಗೋಮಿಯಾ ಕ್ಷೇತ್ರವನ್ನು ಜೆಎಂಎಂ ತನ್ನ ಬಳಿಯಲ್ಲೇ ಉಳಿಸಿಕೊಂಡಿದೆ. ಇಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಅಭ್ಯರ್ಥಿ ಬಬಿತಾ ದೇವಿ 59,451 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. 'ಎಜೆಎಸ್ ಯುಪಿ'ಯ ಲಂಬೋದರ್ ಮಹತೋ ಇಲ್ಲಿ 51,507 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಮಾಧವ್ ಲಾಲ್ ಸಿಂಗ್ 40,013 ಮತಗಳನ್ನು ಪಡೆದು ಮೂರನೇ ಸ್ಥಾನವನ್ನಷ್ಟೇ ಪಡೆದುಕೊಂಡಿದ್ದಾರೆ.
ಸಿಲ್ಲಿ (ವಿಧಾನಸಭಾ ಕ್ಷೇತ್ರ) - ಜೆಎಂಎಂ ಗೆಲುವು
ಸಿಲ್ಲಿ ಕ್ಷೇತ್ರವನ್ನು ಸಹ ಜೆಎಂಎಂ ತನ್ನ ಬಳಿಯಲ್ಲೇ ಉಳಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಪಕ್ಷದಿಂದ ಕಣಕ್ಕಿಳಿದಿದ್ದ ಸೀಮಾ ದೇವಿ ಜಯ ಸಾಧಿಸಿದದ್ದಾರೆ. ಇಲ್ಲೂ ಎರಡನೇ ಸ್ಥಾನ ಎಜೆಎಸ್ ಯುಪಿ'ಯ ಪಾಲಾಗಿದೆ.
13) ಥರಾಲಿ (ವಿಧಾನಸಭಾ ಕ್ಷೇತ್ರ) – ಬಿಜೆಪಿ ಗೆಲುವು
ಥರಾಲಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಇಲ್ಲಿ ಪಕ್ಷದಿಂದ ಕಣಕ್ಕಿಳಿದಿದ್ದ ಮುನ್ನಿ ದೇವಿ ಶಾ 7,995 ಮತಗಳನ್ನು ಪಡೆದು ಗೆದ್ದಿದ್ದಾರೆ. ಇಲ್ಲಿ ಕಾಂಗ್ರೆಸಿನ ಜೀತ್ ರಾಂ 6,184 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ.
14) ರಾಜರಾಜೇಶ್ವರಿ ನಗರ (ವಿಧಾನಸಭಾ ಕ್ಷೇತ್ರ) – ಕಾಂಗ್ರೆಸ್ ಗೆ ಜಯ
ಕರ್ನಾಟಕದ ರಾಜರಾಜೇಶ್ವರಿ ನಗರದಲ್ಲಿ ನಡೆದ ಮುಂದೂಡಲ್ಪಟ್ಟ ಚುನಾವಣೆಯಲ್ಲಿ ಕಾಂಗ್ರೆಸ್ ನ ಮುನಿರತ್ನ ನಾಯ್ಡು ಗೆಲುವು ಸಾಧಿಸಿದ್ದಾರೆ. 1,08,064 ಮತಗಳನ್ನು ಪಡೆದು ಅವರು ಬಿಜೆಪಿಯ ಮುನಿರಾಜು ಗೌಡ ಅವರನ್ನು ಸೋಲಿಸಿದ್ದಾರೆ. ಇಲ್ಲಿ ಮುನಿರಾಜು ಗೌಡ 82,572 ಮತಗಳನ್ನು ಪಡೆದರೆ, ಜೆಡಿಎಸ್ ನ ಜಿ.ಎಚ್. ರಾಮಚಂದ್ರ 60,360 ಮತಗಳನ್ನು ಪಡೆದಿದ್ದಾರೆ.