ಬುರಾರಿ ರೀಕ್ಯಾಪ್? ಕೇರಳದಲ್ಲೊಂದು ನಿಗೂಢ ಕ್ರೈಂ ಥ್ರಿಲ್ಲರ್!
ಇಡುಕ್ಕಿ, ಆಗಸ್ಟ್ 02: ಇತ್ತೀಚೆಗಷ್ಟೇ ಇಡೀ ದೇಶದ ಗಮನ ಸೆಳೆದಿದ್ದ ದೆಹಲಿಯ ಬುರಾರಿ ಸಾಮೂಹಿಕ ಆತ್ಮಹತ್ಯೆಯ ರೀಕ್ಯಾಪ್ ಎಂಬಂಥ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಕೇರಳದ ಇಡುಕ್ಕಿ ಜಿಲ್ಲೆಯ ರಬ್ಬರ್ ಎಸ್ಟೇಟ್ ನಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರ ಶವ ಮಣ್ಣಿನಲ್ಲಿ ಹುಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುತೂಹಲ ಸೃಷ್ಟಿಸಿದೆ.
ಬುರಾರಿ ಆತ್ಮಹತ್ಯೆ: 11 ಶವ, 11 ಡೈರಿ ಮತ್ತು ಭಯ ಹುಟ್ಟಿಸುವ 11 ಸಂಗತಿ
ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಹೊರಗೆತೆದು ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ಕಳಿಸಲಾಗಿದೆ. ಶವಗಳ ಮೇಲೆ ಗಾಯದ ಕಲೆಗಳಿದ್ದು, ಸಾಯುವ ಮುನ್ನ ನಾಲ್ವರಿಗೂ ಕೊಡಲಿಯಂಥ ವಸ್ತುವಿನಿಂದ ಥಳಿಸಿರಬಹುದು ಎಂದು ಅಂದಾಜಿಸಲಾಗಿದೆ. ಮೇಲ್ನೋಟಕ್ಕೆ ಇದು ಕೊಲೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಂದೇ ಕುಟುಂಬದ ನಾಲ್ವರು
ಇಡುಕ್ಕಿ ಜಿಲ್ಲೆಯ ಮುಂಡಾನ್ಮುಂಡಿ ರಬ್ಬರ್ ಎಸ್ಟೇಟ್ ನಲ್ಲಿ ವಾಸವಿದ್ದ ಕೃಷ್ಣನ್(52), ಆತನ ಪತ್ನಿ ಸುಶೀಲಾ(50), ಪುತ್ರಿ ಅರ್ಶಾ(21) ಮತ್ತು ಪುತ್ರ ಅರ್ಜುನ್(19) ಈ ನಾಲ್ವರು ಮೃತರು ಎಂದು ಗುರುತಿಸಲಾಗಿದೆ. ಘಟನೆ ಜುಲೈ 29 ರಂದು ರಾತ್ರಿ ನಡೆದಿದ್ದಿರಬಹುದೆಂದು ಅಂದಾಜಿಸಲಾಗಿದೆ. ನಾಲ್ಕು ದಿನಗಳಿಂದ ಈ ಮನೆಯ ನಾಲ್ವರೂ ಕಾಣದೇ ಇದ್ದಿದ್ದರಿಂದ ಅವರ ನೆರೆಹೊರೆಯವರು ಮತ್ತು ಸಂಬಂಧಿಗಳು ಆತಂಕ ವ್ಯಕ್ತಪಡಿಸಿದ್ದರು. ಅವರ ಮನೆಗೆ ತೆರಳಿದಾಗ ಮನೆಯ ಕೆಲವೆಡೆ ರಕ್ತದ ಕಲೆಗಳು ಕಂಡಿದ್ದು, ಅನುಮಾನಗೊಂಡ ಸಂಬಂಧಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ದೆಹಲಿ ಸಾಮೂಹಿಕ ಆತ್ಮಹತ್ಯೆ: ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಫೋಟಕ ಮಾಹಿತಿ
ಮಾಟಮಂತ್ರ ಕಾರಣವೇ?
ರಬ್ಬರ್ ಪ್ಲಾಂಟೇಶನ್ ಹೊಂದಿದ್ದ ಕುಟುಂಬದ ಯಜಮಾನ ಕೃಷ್ಣನ್, ಮಾಟಮಂತ್ರವನ್ನೂ ಮಾಡುತ್ತಿದ್ದರು. ಈ ಮಾಟ ಮಂತ್ರವೇ ಅವರ ಸಾವಿಗೆ ಕಾರಣವಾಯಿತೇ ಎಂಬುದು ಈಗಿರುವ ಪ್ರಶ್ನೆ. ಈ ದಿಕ್ಕಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುಟುಂಬದ ಮೇಲೆ ಯಾರಿಗಾದರೂ ದ್ವೇಷವಿತ್ತೇ? ಹಣಕಾಸಿಗೆ ಸಂಬಂಧಿಸಿದ ಭಿನ್ನಾಭಿಪ್ರಾಯವೇನಾದರೂ ಇದಕ್ಕೆ ಕಾರಣವಾಯಿತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮನೆಯಲ್ಲಿ ರಕ್ತಸಿಕ್ತ ಚೂರಿಗಳೂ ಪತ್ತೆಯಾಗಿವೆ.
ಶವ ಪತ್ತೆಯಾಗಿದ್ದು ಹೇಗೆ?
ನಾಪತ್ತೆ ದೂರು ಸ್ವೀಕರಿಸಿ ಮುಂಡಾನ್ಮುಂಡಿ ಎಸ್ಟೇಟ್ ಮನೆಗೆ ಬಂದ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮನೆಯ ಹಿತ್ತಲಿನಲ್ಲಿ ಮಣ್ಣುಗಳು ತೇವವಾಗಿದ್ದಿದ್ದನ್ನು ಕಂಡು ಅನುಮಾನಗೊಂಡ ಪೊಲೀಸರು ಮಣ್ಣು ಅಗೆಸಿ ನೋಡಿದಾಗ ಒಂದರ ಮೇಲೊಂದರಂತೆ ನಾಲ್ಕು ಶವಗಳು ಪತ್ತೆಯಾಗಿವೆ. ನಾಪತ್ತೆಯಾಗಿದ್ದ ಆ ಕುಟುಂಬದ ಸದಸ್ಯರೇ ಶವವೇ ಅದು ಎಂಬುದು ದೃಢವಾಗಿದೆ. ತಕ್ಷಣ ಎಲ್ಲಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿಕೊಡಲಾಗಿದೆ.
ಬುರಾರಿ ರೀಕ್ಯಾಪ್
ಜೂನ್ 30, ಜುಲೈ 1 ರ ಸಮಯದಲ್ಲಿ ದೆಹಲಿಯ ಬುರಾರಿಯಲ್ಲಿ ನಡೆದ ಒಂದೇ ಕುಟುಂಬದ 11 ಜನರ ಆತ್ಮಹತ್ಯೆ ಪ್ರಹಸನವನ್ನು ಈ ಘಟನೆ ನೆನಪಿಸಿದೆ. ಇತ್ತೀಚೆಗಷ್ಟೆ ರಾಂಚಿಯಲ್ಲಿಯೂ ಒಂದೇ ಕುಟುಂಬದ 7 ಜನ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಗೆ ಆರ್ಥಿಕ ಸಮಸ್ಯೆಯೇ ಕಾರಣ ಎನ್ನಲಾಗಿತ್ತು. ಬುರಾರಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಪಷ್ಟ ಕಾರಣ ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಮೋಕ್ಷದ ಬಗ್ಗೆ ಕುಟುಂಬಸ್ಥರಲ್ಲಿದ್ದ ಭಾವನೆ ಮತ್ತು ಮಾನಸಿಕ ಸಮಸ್ಯೆ ಈ ಘಟನೆಗೆ ಕಾರಣವಿದ್ದಿರಬಹುದು ಎಂದು ಅಂದಾಜಿಸಲಾಗಿದೆ.