Budget 2023: ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯನ್ನು ಲೋಕಸಭೆಯಲ್ಲಿ ವೀಕ್ಷಿಸಿದ ಪುತ್ರಿ, ಸಂಬಂಧಿಕರು- ಪತಿ ಗೈರು
ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ avru ಮಂಡಿಸುತ್ತಿರುವಾಗ ಅವರ ಪುತ್ರಿ ವಂಗ್ಮಯಿ ಪರಕಾಲ ಮತ್ತು ಹಲವಾರು ಸಂಬಂಧಿಕರು ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ವೀಕ್ಷಿಸಿದರು. ಆದರೆ, ಅವರ ಪತಿ ಹಾಗೂ ಆರ್ಥಕ ತಜ್ಞ ಪರಕಾಲ ಪ್ರಭಾಕರನ್ ಗೈರು ಹಾಜರಾಗಿದ್ದರು.
ನವದೆಹಲಿ, ಫೆಬ್ರುವರಿ 01: 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ avru ಮಂಡಿಸುತ್ತಿರುವಾಗ ಅವರ ಪುತ್ರಿ ವಂಗ್ಮಯಿ ಪರಕಾಲ ಮತ್ತು ಹಲವಾರು ಸಂಬಂಧಿಕರು ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ವೀಕ್ಷಿಸಿದರು. ನರೇಂದ್ರ ಮೋದಿ ಸರಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗುತ್ತಿರುವಾಗ ಗ್ಯಾಲರಿಯಲ್ಲಿ ಜನರು ತುಂಬಿ ತುಳುಕುತ್ತಿತ್ತು. ಈ ವೇಳೆ, ನಿರ್ಮಲಾ ಸೀತಾರಾಮನ್ ಅವರ ಪುತ್ರಿ ವಂಗ್ಮಯಿ ಹಾಜರಿದ್ದರು. ಆದರೆ, ನಿರ್ಮಲಾ ಸೀತಾರಾಮನ್ ಅವರ ಪತಿ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಅವರು ಗೈರಾಗಿದ್ದರು.
ಬಜೆಟ್ 2023: ರಾಜಧಾನಿ, ಶತಾಬ್ದಿ, ದುರಂತೋ ಪ್ರಯಾಣಿಕರಿಗೆ ಶುಭ ಸುದ್ದಿ
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆಗೂಡಿ ನಿರ್ಮಲಾ ಸೀತಾರಾಮನ್ ಪುತ್ರಿ ಲೋಕಸಭೆಗೆ ಬಂದರು. ಗ್ಯಾಲರಿಯಲ್ಲಿ ಕುಳಿತಿದ್ದ ಇತರ ರಾಜ್ಯಸಭಾ ಸದಸ್ಯರು ಕೇಂದ್ರ ಬಜೆಟ್ನಲ್ಲಿ ವಿವಿಧ ಪ್ರಸ್ತಾಪಗಳನ್ನು ಪ್ರಕಟಿಸುತ್ತಿದ್ದಂತೆ ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಿದ್ದರು. ಅದರಂತೆಯೇ ಪರಕಾಲ ವಂಗ್ಮಯಿ ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಿರುವುದು ಕಂಡುಬಂದಿತು.
ಪರಕಾಲ ವಂಗ್ಮಯಿ ಅವರು ಬಜೆಟ್ ಅಧಿವೇಶನಕ್ಕೆ ಸಾಕ್ಷಿಯಾಗುತ್ತಿರುವುದು ಇದೇ ಮೊದಲಲ್ಲ. 2020ರ ಕೇಂದ್ರ ಬಜೆಟ್ಗಾಗಿ ಅವರು ತಮ್ಮ ತಾಯಿಯೊಂದಿಗೆ ಸಂಸತ್ತಿಗೆ ಬಂದಿದ್ದರು. ಅವರು 'ಮಿಂಟ್' ಪತ್ರಿಕೆಗೆ ಬರಹಗಾರರಾಗಿದ್ದಾರೆ. ಈ ಹಿಂದೆ 'ದಿ ಹಿಂದೂ' ಪತ್ರಿಕೆಗೂ ಬರೆಯುತ್ತಿದ್ದರು.
ಈ ಕೇಂದ್ರ ಬಜೆಟ್ ಭಾಷಣದಲ್ಲಿ ಸಾಮಾನ್ಯ ಜನರಿಗಾಗಿ ಮಾಡಿದ ಕೆಲವು ಗಮನಾರ್ಹ ಘೋಷಣೆಗಳಲ್ಲಿ, ದೇಶಾದ್ಯಂತ ಗುಣಮಟ್ಟದ ಪುಸ್ತಕಗಳ ಲಭ್ಯತೆಯನ್ನು ಸುಲಭಗೊಳಿಸಲು ಮಕ್ಕಳು ಮತ್ತು ಹದಿಹರೆಯದವರಿಗೆ ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದರು.
'ಭೌಗೋಳಿಕತೆ, ಭಾಷೆಗಳು, ಪ್ರಕಾರಗಳು ಮತ್ತು ವಿವಿದ ಹಂತಗಳಲ್ಲಿ ಗುಣಮಟ್ಟದ ಪುಸ್ತಕಗಳ ಲಭ್ಯತೆಗೆ ಅನುಕೂಲವಾಗುವಂತೆ ಮಕ್ಕಳು ಮತ್ತು ಹದಿಹರೆಯದವರಿಗೆ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲಾಗುವುದು' ಎಂದು ಸೀತಾರಾಮನ್ ಹೇಳಿದರು.
'ರಾಜ್ಯಗಳು ಅವರಿಗೆ (ಮಕ್ಕಳಿಗೆ) ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲು ಮತ್ತು ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯ ಮೂಲಸೌಕರ್ಯಗಳನ್ನು ಒದಗಿಸಲು ಪ್ರೋತ್ಸಾಹಿಸಲಾಗುವುದು' ಎಂದೂ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಹೆಚ್ಚುವರಿಯಾಗಿ, ಓದುವ ಸಂಸ್ಕೃತಿಯನ್ನು ನಿರ್ಮಿಸಲು ಮತ್ತು ಸಾಂಕ್ರಾಮಿಕ-ಸಮಯದ ಕಲಿಕೆಯ ನಷ್ಟವನ್ನು ಸರಿದೂಗಿಸುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಇದುವರೆಗೂ ಐದು ಬಾರಿ ಬಜೆಟ್ ಅನ್ನು ಮಂಡಿಸಿ ದಾಖಲೆ ಬರೆದಿದ್ದಾರೆ. ಈ ಹಿಂದೆ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿ ಹಾಗೂ ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಅವರು ಸತತ ಐದು ಬಜೆಟ್ ಅನ್ನು ಮಂಡಿಸಿದ್ದರು.