5ಜಿ ಯಾವಾಗ ಶುರು, ತರಂಗಾಂತರಗಳ ಹರಾಜು ಯಾವಾಗ? ಮೋದಿ ಹೇಳಿದ್ದಿಷ್ಟು
ನವದೆಹಲಿ, ಮಾರ್ಚ್ 02: ದೇಶದಲ್ಲಿ ಮುಂದಿನ ವರ್ಷದಿಂದಲೇ 5ಜಿ ಸೇವೆ ಆರಂಭವಾಗಲಿವೆ, ಇದೇ ವರ್ಷ ತರಂಗಾಂತರಗಳ ಹರಾಜು ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನಗಳು ನಮ್ಮ ಜೀವನದ ಒಂದು ಭಾಗವೇ ಆಗಿದೆ, ಅತ್ಯಾಧುನಿಕ ತಂತ್ರಜ್ಞಾನವು ಡಿಜಿಟಲ್ ಆರ್ಥಿಕತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಈ ಎಲ್ಲಾ ಕಾರಣಗಳಿಂದಾಗಿ ವಿವಿಧ ಸೇವೆಗಳು ಜನರಿಗೆ ತ್ವರಿತವಾಗಿ ತಲುಪುವುದು ಹಾಗೂ ನಾಗರಿಕರ ಸಬಲೀಕರಣ ಸಾಧ್ಯವಾಗಿದೆ ಎಂದರು.
ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಎಂಬ ವಿಷಯ ಕುರಿತ ವೆಬಿನಾರ್ನಲ್ಲಿ ಮಾತನಾಡಿದರು. 5ಜಿ ತಂತ್ರಜ್ಞಾನದಿಂದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಸಾಕಷ್ಟು ಅವಕಾಶಗಳು ಸಿಗಲಿವೆ. ವೈದ್ಯವಿಜ್ಞಾನದಲ್ಲಿಯೂ ತಂತ್ರಜ್ಞಾನ ಪ್ರಮುಖ ಪಾತ್ರವಹಿಸುತ್ತಿದ್ದು, ವೈದ್ಯಕೀಯ ಸಾಧನಗಳ ಉತ್ಪಾದನೆಗೂ ಗಮನಹರಿಸಬೇಕು ಎಂದರು.

ಸಮಾಜದ ಕೊನೆಯ ವ್ಯಕ್ತಿಗೂ ವಿವಿಧ ಸೇವೆಗಳನ್ನು ತ್ವರಿತವಾಗಿ ತಲುಪಿಸಲು ಹಾಗೂ ಉದ್ಯೋಗ ಸೃಷ್ಟಿಯಲ್ಲಿ ತಂತ್ರಜ್ಞಾನ ಕ್ಷೇತ್ರ ಮಹತ್ತರ ಪಾತ್ರವಹಿಸುತ್ತದೆ, ಹೀಗಾಗಿ ಇಂತಹ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಬಹಳ ಮುಖ್ಯ ಎಂದು ಹೇಳಿದರು.
ಭಾರತದಲ್ಲಿ 5G ತಂತ್ರಜ್ಞಾನ ತ್ವರಿತ ಗತಿಯಲ್ಲಿ ಅಳವಡಿಕೆ ಮತ್ತು ಸುರಕ್ಷಿತ ನೆಟ್ವರ್ಕ್ ಒದಗಿಸಬಲ್ಲ ವಿಶ್ವಾಸಾರ್ಹ ಪಾಲುದಾರರನ್ನು ಸರ್ಕಾರ ಎದುರು ನೋಡುತ್ತಿದೆ. ಈ ಉನ್ನತ ತಂತ್ರಜ್ಞಾನದ ಕ್ಷೇತ್ರದಲ್ಲಿ ಹೂಡಿಕೆ ಅಗತ್ಯ ಹೆಚ್ಚಿದೆ.
ತರಂಗಾಂತರ ಗುಚ್ಛ ಹಂಚಿಕೆ ಬಗ್ಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುತ್ತದೆ. ತಂತ್ರಜ್ಞಾನದ ಇತಿಮಿತಿ ಹಾಗೂ ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ಬಂದಿರುವ ವರದಿಗಳನ್ನು ಪರಿಗಣಿಸಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದರು.
ಯುಎಸ್ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಅಲ್ಲಿನ ಪ್ರಮುಖ ಸಂಸ್ಥೆಗಳ ಸಿಇಒಗಳ ಜೊತೆ ನಡೆಸಿದ ಮಾತುಕತೆಯಲ್ಲಿ ಹೆಚ್ಚಿನ ಚರ್ಚೆ ಟೆಲಿಕಾಂ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ್ದು ಎಂಬುದು ಗಮನಾರ್ಹ. ಭಾರತದಲ್ಲಿ 5 ಜಿ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಪ್ರಮುಖ ಸಂಸ್ಥೆ ಕ್ವಾಲ್ಕಾಮ್ ಆಸಕ್ತಿ ತೋರಿದೆ.
ಸ್ಯಾನ್ ಡಿಯಾಗೋ ಮೂಲದ ಈ ಕಂಪನಿಯು ವೈರ್ಲೆಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸೆಮಿಕಂಡಕ್ಟರ್ಗಳು, ಸಾಫ್ಟ್ವೇರ್ ಮತ್ತು ಸೇವೆಗಳನ್ನು ನೀಡುತ್ತಿದೆ ಮತ್ತು ಪ್ರವರ್ತಕ ಉತ್ಪನ್ನಗಳ ಶ್ರೇಣಿಯೊಂದಿಗೆ 5G ತಂತ್ರಜ್ಞಾನ ಒದಗಿಸಬಲ್ಲ ಸಾಮರ್ಥ್ಯ ಹೊಂದಿದೆ.












Click it and Unblock the Notifications