ಸುಕ್ಮಾ ಹತ್ಯಾಕಾಂಡದ ಹಿಂದೆ ಅನುಮಾನ ಹುಟ್ಟಿಸುವ ನಿಗೂಢ ನಡೆಗಳು!
ಸುಕ್ಮಾ(ಛತ್ತೀಸ್ ಗಢ), ಜುಲೈ 5: ಛತ್ತೀಸ್ ಗಢದ ಸುಕ್ಮಾದಲ್ಲಿ ಏಪ್ರಿಲ್ 24, 2017 ರಲ್ಲಿ ನಡೆದ 25 ಸಿಆರ್ ಪಿಎಫ್ ಯೋಧರ ಹತ್ಯಾಕಾಂಡ ಭಾರತೀಯ ಇತಿಹಾಸದಲ್ಲೇ ಕರಾಳ ದಿನ. ನಕ್ಸಲರು ಸುಕ್ಮಾದ ಬುರ್ಕಾಪಾಲ್ ನ ಸೇನಾ ಶಿಬಿರದಲ್ಲಿ ವಿಶ್ರಾಂತಿಯಲ್ಲಿದ್ದ ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆಸಿ 25 ಯೋಧರನ್ನು ಹತ್ಯೆಗೈದಿದ್ದರು. ಈ ಕುರಿತು ತನಿಖೆ ನಡೆಸುತ್ತಿದ್ದ ತನಿಖಾ ದಳವೊಂದಕ್ಕೆ ನಿಗೂಢ ವಿಷಯವೊಂದು ಗಮನಕ್ಕೆ ಬಂದಿದೆ.
ಈ ದಾಳಿ ನಡೆಯುವ ಒಂದು ಗಂಟೆ ಮೊದಲು ಈ ಭಾಗದ ಬಿಎಸ್ ಎನ್ ಎಲ್ ಟವರ್ ಗಳು ಸಂಪೂರ್ಣ ಸ್ಥಗಿತಗೊಂಡಿದ್ದವು ಎಂಬ ಅಚ್ಚರಿಯ ಅಂಶವೊಂದು ಹೊರಬಿದ್ದಿದ್ದು, ಟವರ್ ಸ್ಥಗಿತವಾಗಿದ್ದಕ್ಕೂ, ಈ ದಾಳಿಯಲ್ಲಿ ಪಾಲ್ಗೊಂಡವರಿಗೂ ಸಂಬಂಧವಿದೆ ಎಂಬ ಅನುಮಾನ ದಟ್ಟವಾಗಿದೆ. ದಾಳಿಗೂ ಮೊದಲು ಟವರ್ ಸ್ಥಗಿತವಾಗುತ್ತದೆ ಎಂದಾದರೆ, ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಯಾರದೋ ಬೆಂಬಲ ನಕ್ಸಲರಿಗಿತ್ತೇ ಎಂಬ ಸಂಶಯವೂ ಎದ್ದಿದೆ.
ಛತ್ತೀಸ್ ಘಡ ಎನ್ಕೌಂಟರ್: ಪೊಲೀಸರ ಸಾವಿನ ಸಂಖ್ಯೆ 26ಕ್ಕೆ ಏರಿಕೆ
ಅಷ್ಟೇ ಅಲ್ಲ, ದಾಳಿ ನಡೆಯುವ ಕೆಲವು ಗಂಟೆ ಮೊದಲು ಈ ಊರಿಗೆ ಅಪರಿಚಿತಳಾದ ಮಹಿಳೆಯೊಬ್ಬರು ಕೆಂಪು ಸೀರೆ ಉಟ್ಟು ಸೇನೆಯ ಶಿಬಿರದ ಬಳಿ ಓಡಾಡುತ್ತಿದ್ದುದನ್ನೂ ಕಂಡವರಿದ್ದಾರೆ. ಇದೂ ಸಹ ದಾಳಿಯ ಸೂಚನೆಯೇ ಆಗಿತ್ತೆಂದು, ದಾಳಿಯ ನಂತರ ಅನುಮಾನಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಏನೇ ಆದರೂ, 25 ಸೈನಿಕರ ಮಾರಣ ಹೋಮವಂತೂ ಭಾರತಕ್ಕೆ ತುಂಬಲಾರದ ನಷ್ಟವೆನ್ನುವುದು ಸುಳ್ಳಲ್ಲ.