Breaking: ಸೇತುವೆ ದುರಂತ: ನಾಳೆ ಮೊರ್ಬಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
ಅಹಮದಾಬಾದ್, ಅ. 31: ಬ್ರಿಟಿಷರ ಕಾಲದ ಮೊರ್ಬಿ ತೂಗು ಸೇತುವೆ ಭಾನುವಾರ ಸಂಜೆ ಕುಸಿದು ಕನಿಷ್ಠ 141 ಜನರು ಸಾವನ್ನಪ್ಪಿದ್ದು, ಗುಜರಾತ್ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮೊರ್ಬಿಗೆ ಭೇಟಿ ನೀಡಲಿದ್ದಾರೆ.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 500 ಜನರು ತೂಗು ಸೇತುವೆಯ ಮೇಲೆ ಇದ್ದಾಗಲೇ ಸೇತುವೆ ಕುಸಿತವಾಗಿದ್ದು, 141 ಜನರು ಸಾವನ್ನಪ್ಪಿದ್ದಾರೆ. ಮೋರ್ಬಿಯಲ್ಲಿ 150 ವರ್ಷಗಳಷ್ಟು ಹಳೆಯದಾದ ಸೇತುವೆಯ ಮೇಲೆ ಹಲವರು ಛತ್ ಪೂಜೆ ವಿಧಿವಿಧಾನಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.
ಗುಜರಾತ್ ಮೊರ್ಬಿ ಸೇತುವೆ ದುರಂತಕ್ಕೆ ಬಿಜೆಪಿ ವಿರುದ್ಧ ಭಾರೀ ಟೀಕೆ
ಘಟನೆ ಕುರಿತು ಸೋಮವಾರ ಮುಂಜಾನೆ, ರಾಜ್ಯಕ್ಕೆ ಕೇಂದ್ರ ಸರ್ಕಾರವು ಎಲ್ಲಾ ಸಹಾಯವನ್ನು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
"ನಾನು ಏಕ್ತಾ ನಗರದಲ್ಲಿದ್ದೇನೆ, ಆದರೆ ನನ್ನ ಮನಸ್ಸು ಮೊರ್ಬಿ ಸಂತ್ರಸ್ತರ ಜೊತೆಗಿದೆ. ಅಪರೂಪವಾಗಿ, ನನ್ನ ಜೀವನದಲ್ಲಿ ಇಂತಹ ನೋವನ್ನು ಅನುಭವಿಸಿದ್ದೇನೆ. ಒಂದು ಕಡೆ, ನೋವಿನಿಂದ ಕೂಡಿದ ಹೃದಯವಿದೆ, ಇನ್ನೊಂದು ಕಡೆ, ಕರ್ತವ್ಯದ ಹಾದಿ" ಎಂದು ಗುಜರಾತ್ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗುಜರಾತ್ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ವೇಳೆ ಮೊರ್ಬಿ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಅಪಘಾತದ ತನಿಖೆಗೆ ಸಮಿತಿಯನ್ನೂ ರಚಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಮೊರ್ಬಿಯ ಮಚ್ಚು ನದಿಯ ಸೇತುವೆಯನ್ನು ದುರಸ್ತಿಗಾಗಿ ಕಳೆದ ಏಳು ತಿಂಗಳಿನಿಂದ ಮುಚ್ಚಲಾಗಿತ್ತು. ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದಂದು ನಾಗರಿಕ ಅಧಿಕಾರಿಗಳಿಂದ ಫಿಟ್ನೆಸ್ ಪ್ರಮಾಣಪತ್ರವಿಲ್ಲದೆ ಇದನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ.
ಸೇತುವೆ ಕುಸಿತ ಪ್ರಕರಣದ ಕುರಿತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಮತ್ತು ಐವರು ಸದಸ್ಯರ ಉನ್ನತ ಸಮಿತಿಯು ತನಿಖೆ ನಡೆಸುತ್ತಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಸೋಮವಾರ ಬೆಳಗ್ಗೆ ಹೇಳಿದ್ದಾರೆ.