ಎಸ್ ಬಿಐ ಮುಖ್ಯಸ್ಥೆಗೆ 'ಮಹಾ' ನೋಟೀಸ್
ರೈತರ ಸಾಲ ಮನ್ನಾ ವಿಚಾರವಾಗಿ ಎಸ್ ಬಿಐ ಮುಖ್ಯಸ್ಥೆ ಅರಂಧತಿ ಭಟ್ಟಾಚಾರ್ಯ ನೀಡಿದ್ದ ಹೇಳಿಕೆ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರಿಂದ ನೋಟಿಸ್ ಜಾರಿ.
ಮುಂಬೈ, ಮಾರ್ಚ್ 18: ರೈತರ ಸಾಲ ಮನ್ನಾ ಮಾಡುವ ಸರ್ಕಾರಗಳ ಕ್ರಮಗಳನ್ನು ಟೀಕಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶುಕ್ರವಾರ, ಸವಲತ್ತು ಉಲ್ಲಂಘನೆಯಡಿ (breach of privilege) ನೋಟಿಸ್ ಜಾರಿಗೊಳಿಸಲಾಗಿದೆ.
ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಈ ನೋಟಿಸ್ ಜಾರಿಗೊಳಿಸಿದ್ದಾರೆ.

ಸರ್ಕಾರಗಳು ಕೃಷಿ ಸಾಲ ಮನ್ನಾ ಮಾಡುವುದರಿಂದ ಬ್ಯಾಂಕುಗಳು ಕೃಷಿಕರಿಗೆ ನೀಡುವ ಸಾಲದ ಶಿಷ್ಠಾಚಾರಕ್ಕೆ ಭಂಗ ಬರುವಂತಾಗುತ್ತದೆ ಎಂದು ಅರಂಧತಿ ಭಟ್ಟಾಚಾರ್ಯ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದು ರಾಜಕೀಯ ನೇತಾರರನ್ನು ಸಹಜವಾಗಿ ಕೆರಳಿಸಿತ್ತು.
ಶುಕ್ರವಾರ, ಇದೇ ವಿಚಾರ ಮಹಾರಾಷ್ಟ್ರದ ಸದನದಲ್ಲಿ ಚರ್ಚೆಯಾಗಿ, ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಮತ್ತಿತರ ಪಕ್ಷಗಳ ಸದಸ್ಯರು ಎಸ್ ಬಿಐ ಮುಖ್ಯಸ್ಥೆಯ ಹೇಳಿಕೆ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಅಲ್ಲದೆ, ಅವರ ವಿರುದ್ಧ ನೋಟಿಸ್ ಜಾರಿಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದರು. ಹಾಗಾಗಿ, ಭಟ್ಟಾಚಾರ್ಯ ಅವರ ಹೇಳಿಕೆ ಅವರಿಂದಲೇ ಸ್ಪಷ್ಟನೆ ಕೋರಿ ನೋಟಿಸ್ ಜಾರಿಗೊಂಡಿದೆ.
ನೋಟಿಸ್ ನಲ್ಲಿ ಮಹಾರಾಷ್ಟ್ರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 8 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದಲೇ ಮಹಾರಾಷ್ಟ್ರ ಸರ್ಕಾರ ಮತ್ತೆ ರೈತರ ಸಾಲ ಮನ್ನಾ ಮಾಡಲು ಹೊರಟಿದೆ ಎಂದು ತಿಳಿಸಿದ್ದಾರೆ.












Click it and Unblock the Notifications