ಭಾರತೀಯ ಸೈನಿಕರ ಶೌರ್ಯದ ಬಗ್ಗೆ ರಾಜನಾಥ್ ಸಿಂಗ್ ಪ್ರಶಂಸೆ
ನವದೆಹಲಿ, ಡಿಸೆಂಬರ್ 17: ಗಾಲ್ವಾನ್ ಕಣಿವೆ ಘರ್ಷಣೆ ಮತ್ತು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಇತ್ತೀಚೆಗೆ ನಡೆದ ಮುಖಾಮುಖಿಯ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯ ಶ್ಲಾಘನೀಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಚೀನಾ ಯೋಧರು ಗಡಿಯಲ್ಲಿ ನುಗ್ಗಲು ಪ್ರಯತ್ನಿಸಿದ ಸಂದರ್ಭದಲ್ಲಿ ಭಾರತೀಯ ಯೋಧರು ತೋರಿದ ಧೈರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಸಚಿವರು, ಭಾರತ ಸೈನಿಕರನ್ನು ಎಷ್ಟು ಹೊಗಳಿದರೂ ಸಾಕಾಗುವುದಿಲ್ಲ ಎಂದರು.
ಇಂಡಸ್ಟ್ರಿ ಚೇಂಬರ್ ಎಫ್ಐಸಿಸಿಐನಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಚೀನಾದೊಂದಿಗಿನ ಗಡಿ ರೇಖೆಯನ್ನು ಸರ್ಕಾರ ನಿಭಾಯಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. "ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯದ ರೀತಿಗೆ ಯಾವುದೇ ಪ್ರಶಂಸೆ ಸಾಕಾಗುವುದಿಲ್ಲ, ಅದು ಗಾಲ್ವಾನ್ ಅಥವಾ ತವಾಂಗ್ ಆಗಿರಲಿ," ಎಂದು ಸಿಂಗ್ ಹೇಳಿದರು.

ಸುಳ್ಳಿನ ಮೇಲೆ ರಾಜಕೀಯ ದೀರ್ಘಕಾಲದವರೆಗೂ ಇರಲ್ಲ
''ವಿರೋಧ ಪಕ್ಷದಲ್ಲಿರುವ ಯಾವುದೇ ನಾಯಕರ ಉದ್ದೇಶವನ್ನು ನಾವು ಎಂದಿಗೂ ಪ್ರಶ್ನಿಸಿಲ್ಲ. ಆದರೆ ನೀತಿಗಳ ಆಧಾರದ ಮೇಲೆ ಮಾತ್ರ ಚರ್ಚೆ ನಡೆಸಿದ್ದೇವೆ. ಈ ಸತ್ಯದ ಆಧಾರದ ಮೇಲೆ ರಾಜಕೀಯ ನಡೆಯಬೇಕೇ ವಿನಃ ಸುಳ್ಳಿನ ಆಧಾರದಲ್ಲಿ ದೀರ್ಘಕಾಲದ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.

ರಾಹುಲ್ ಗಾಂಧಿಗೆ ರಾಜನಾಥ್ ನಾಥ್ ಪ್ರತ್ಯುತ್ತರ
"ಸಮಾಜವನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ಪ್ರಕ್ರಿಯೆಯನ್ನು ರಾಜನೀತಿ ಎಂದು ಕರೆಯಲಾಗುತ್ತದೆ. ಯಾವಾಗಲೂ ಯಾರ ಉದ್ದೇಶವನ್ನು ಅನುಮಾನಿಸುವುದರ ಹಿಂದಿನ ಕಾರಣ ನನಗೆ ಅರ್ಥವಾಗುತ್ತಿಲ್ಲ. ಪ್ರಧಾನಿ ಮೋದಿ ನಾಯಕತ್ವದಲ್ಲಿ ವಿಶ್ವ ವೇದಿಕೆಯಲ್ಲಿ ಭಾರತದ ಘನತೆ ಗಣನೀಯವಾಗಿ ಹೆಚ್ಚಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಈಗ ಭಾರತವು ವಿಶ್ವ ವೇದಿಕೆಯಲ್ಲಿ ಕಾರ್ಯಸೂಚಿಯನ್ನು ಹೊಂದಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆ ರಾಹುಲ್ ಗಾಂಧಿ ಉಲ್ಲೇಖ
ಚೀನಾ ದೇಶವು ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವು ನಿದ್ರೆಯಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದಿದರು. ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಕೇವಲ ಆಕ್ರಮಣಕ್ಕೆ ಅಲ್ಲ. ಅವರ ಅಸ್ತ್ರಗಳ ಮಾದರಿಯನ್ನು ನೋಡಿ. ಅವರು ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ. ನಮ್ಮ ಸರ್ಕಾರ ಈ ವಾಸ್ತವವನ್ನು ಒಪ್ಪಿಕೊಳ್ಳುತ್ತಿಲ್ಲ. ಭಾರತ ಸರ್ಕಾರವು ಕೇವಲ ನಡೆದಿರುವ ಘಟನೆಗಳ ಬಗ್ಗೆ ತಲೆಕೆಸಿಕೊಂಡಿದೆಯೇ ಹೊರತು ಮುಂದಿನ ತಂತ್ರಗಳ ಬಗ್ಗೆ ಅಲ್ಲ' ಎಂದು ಅವರು ಟೀಕಿಸಿದರು.

ಚೀನಾ ಸೈನಿಕರದ್ದು ಪ್ರತಿವರ್ಷ ಇದೇ ಕಥೆ
ಚೀನಿಯರು ಘರ್ಷಣೆಗಾಗಿ ಕ್ಲಬ್ಗಳು, ಕೋಲುಗಳು ಮತ್ತು ಇತರ ಸಲಕರಣೆಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದರು. ಎದುರಾಳಿಯ ಉದ್ದೇಶಗಳನ್ನು ತಿಳಿದಿದ್ದರಿಂದ ಭಾರತೀಯ ಸೈನಿಕರು ಸಹ ಘರ್ಷಣೆಗೆ ಸಿದ್ಧರಾಗಿದ್ದರು.
ಭಾರತೀಯ ಸೇನೆಯ ಒಂದು ತುಕಡಿಯು ಅಲ್ಲಿಂದ ಹೊರಡುವ ಹಾದಿಯಲ್ಲಿತ್ತು. ಹೊಸ ಘಟಕವನ್ನು ಆ ಪ್ರದೇಶಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ಆದಾಗ್ಯೂ, ಈ ಪ್ರದೇಶದಲ್ಲಿ ಎರಡೂ ಘಟಕಗಳಿದ್ದ ದಿನದಂದು ಚೀನಿಯರು ಘರ್ಷಣೆಯನ್ನು ಆರಿಸಿಕೊಂಡರು. ಚೀನಾದ ಸೇನಾ ಪಡೆಗಳು ಪ್ರತಿ ವರ್ಷವೂ ಈ ಪ್ರದೇಶಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತವೆ. ಭಾರತವು ಅದಕ್ಕೆ ಅನುಮತಿಸದೇ ಹಕ್ಕು ರೇಖೆಯನ್ನು ಗಸ್ತು ತಿರುಗಲು ಪ್ರಯತ್ನಿಸುತ್ತದೆ.












Click it and Unblock the Notifications