ಮಹಾರಾಷ್ಟ್ರದ ಕಾರ್ಖಾನೆ ಸ್ಪೋಟ: 3ಸಾವು, ನಾಲ್ವರ ಸ್ಥಿತಿ ಗಂಭೀರ
ಮುಂಬೈ, ಜನವರಿ 01: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಭಾನುವಾರ ರಾಸಾಯನಿಕ ಕಂಪನಿಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಮೃತಪಟ್ಟಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಇಲ್ಲಿನ ಮುಂಡೆಗಾಂವ್ ಗ್ರಾಮದ ಕಾರ್ಖಾನೆಯಲ್ಲಿ ಬೆಳಗ್ಗೆ 11 ಗಂಟೆಗೆ ಭಾರಿ ಬಾಯ್ಲರ್ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ. ಜಿಂದಾಲ್ ಕಂಪನಿಗೆ ಸೇರಿದ ಪಾಲಿ ಫಿಲ್ಮ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ನಾಲ್ವರ ಸ್ಥಿತಿ ಗಂಭೀರವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಮತ್ತು ವಿಪತ್ತು ನಿರ್ವಹಣೆ ತಂಡ ದೌಡಾಯಿಸಿದವು.
ಕ್ರಿಕೆಟಿಗ ರಿಷಬ್ ಪಂತ್ ರಕ್ಷಿಸಿದ ಬಸ್ ಸಿಬ್ಬಂದಿಗೆ ಸರ್ಕಾರಿ ಸನ್ಮಾನ
ಈ ಪ್ರದೇಶದಲ್ಲಿನ ನಿವಾಸಿಗಳು ಬೃಹತ್ತಾದ ಸ್ಫೋಟದ ಶಬ್ದ ಹಾಗೂ ಬೃಹದಾಕಾರವಾಗಿ ಹೊಗೆ ಸೃಷ್ಟಿಯಾಗಿದ್ದು, ಅದನ್ನು ನೋಡಿ ಭಯಗೊಂಡಿದ್ದಾರೆ. ಕೆಲವು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಘಟನೆ ಸಂಬಂಧ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಪ್ರತಿಕ್ರಿಯಿಸಿ, ಅಲ್ಲಿನ ಪರಿಸ್ಥಿತಿ, ಮೃತರು ಸೇರಿದಂತೆ ಸಂಪೂರ್ಣ ಪ್ರಕರಣದ ಮಾಹಿತಿ ಪಡೆದಿದ್ದಾರೆ. ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವಂತೆ ತಿಳಿಸಲಾಗಿದೆ.
ಇದು ಸ್ವಯಂಚಾಲಿತ ಸ್ಥಾವರವಾದ್ದರಿಂದ, ಸ್ಫೋಟದ ಸಮಯದಲ್ಲಿ ಹೆಚ್ಚಿನ ಸಿಬ್ಬಂದಿ ಇರಲಿಲ್ಲ. ರಕ್ಷಣಾ ಕಾರ್ಯಾಚರಣೆಗೆ ಸರ್ಕಾರವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತದೆ. ನಮ್ಮ ಅಧಿಕಾರಿಗಳು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
5 ಲಕ್ಷ ರೂಪಾಯಿ ಪರಿಹಾರ: ಇನ್ನೂ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವ ಮಹಾರಾಷ್ಟ್ರ ಸರ್ಕಾರ, ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಘಟನೆ ಬಗ್ಗೆ ಉನ್ನತ ತನಿಖೆಗೆ ಆದೇಶಿಸಿದ್ದೇವೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದರು.
ಘಟನೆಯಲ್ಲಿ ಮೃತಪಟ್ಟವರ ಪೈಕಿ ಒಬ್ಬರು ಮಹಿಳೆಯು ಇದ್ದಾರೆ. ಗಾಯಗೊಂಡ ಸುಮಾರು 19 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಸಾಮಾನ್ಯವಾಗಿ 20ರಿಂದ 25 ಮಂದಿ ಸ್ಥಾವರದಲ್ಲಿ ಕೆಲಸ ಮಾಡುತ್ತಾರೆ. ಆದರೆ, ಹೊಸ ವರ್ಷದ ಮೊದಲ ದಿನವಾದ್ದರಿಂದ ಭಾನುವಾರ ಕೆಲಸಗಾರರ ಸಂಖ್ಯೆ ಕಡಿಮೆ ಇತ್ತು ಎಂದು ಪೊಲೀಸರು ವಿವರಿಸಿದರು.