ಚೊಚ್ಚಲ ಸಭೆಯಲ್ಲಿ ಮೋದಿ ಸಂಪುಟದ ಮಹತ್ತರ ನಿರ್ಧಾರ
ನವದೆಹಲಿ, ಮೇ 28: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮಹತ್ತರವಾದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಿನ್ನೆ ರಾತ್ರಿ ಕೇಂದ್ರ ಸಂಪುಟವು ತನ್ನ ಚೊಚ್ಚಲ ಸಭೆಯಲ್ಲಿ ಸುಪ್ರೀಂಕೋರ್ಟ್ ಸೂಚನೆಯಂತೆ ಕಪ್ಪು ಹಣ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ಅಸ್ತಿತ್ವಕ್ಕೆ ತಂದಿದೆ.
ಸುಪ್ರೀಂಕೋರ್ಟ್ ಗೆ ಚಳ್ಳೆಹಣ್ಣು ತಿನ್ನಿಸುತ್ತಾ ಕೊನೆಯ ಘಳಿಗೆಯವರೆಗೂ ಈ Special Investigation Teamವನ್ನು ರಚಿಸಲು ಹಿಂದಿನ ಸರಕಾರ ಹಿಂದೇಟು ಹಾಕಿತ್ತು. ಆದರೆ ಬಿಜೆಪಿಯು ಕಪ್ಪು ಹಣದ ವಿರುದ್ಧ ಸಮರ ಸಾರುತ್ತಾ ಬಂದಿತ್ತು. ಇದೀಗ ಎನ್ ಡಿಎ ಮೈತ್ರಿ ಸರಕಾರವು ಕಾಳ ಧನದ ವಿಷಯದಲ್ಲಿ ನಿರ್ಣಾಯಕ ಹೆಜ್ಜೆಯಿಟ್ಟಿದ್ದು, ಇದು ದೇಶದ ಭವಿಷ್ಯದ ಮೇಲೆ ಅಗಾಧ ಪರಿಣಾಮ ಬೀರಲಿದೆ.
ಕೇಂದ್ರ ಸಂಪುಟದ ಈ ಮಹತ್ವದ ನಿರ್ಧಾರದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಕೇಂದ್ರದ ಈ ನಿರ್ಧಾರದಿಂದ ಕಪ್ಪು ಹಣ ವಾಪಸಾತಿ ವಿಷಯದಲ್ಲಿ ತನ್ನ ಬದ್ಧತೆ ಏನೆಂಬುದನ್ನು ಎನ್ ಡಿಎ ಸರಕಾರ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ.

ಕೇಂದ್ರದಲ್ಲಿ ಅಧಿಕಾರ ಹಸ್ತಾಂತರ ಪರ್ವ ನಡೆಯುತ್ತಿದ್ದಾಗ ವಿಶೇಷ ತನಿಖಾ ತಂಡ ರಚಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೀಡಿದ್ದ ಗಡುವನ್ನು ಮೊನ್ನೆಯಷ್ಟೇ ಒಂದು ವಾರ ಕಾಲ ವಿಸ್ತರಿಸಿತ್ತು. ಆದರೆ ತ್ವರಿತವಾಗಿ ನಿರ್ಧಾರ ತೆಗೆದುಕೊಂಡ ನೂತನ ಸರಕಾರವು ಸುಪ್ರೀಂಕೋರ್ಟ್ ಅಧೀನದಲ್ಲಿಯೇ ಖಡಕ್ ವಿಚಾರಣೆ ನಡೆಸುವಂತೆ ನಿವೃತ್ತ ನ್ಯಾ. ಎಂಬಿ ಶಾ ಅವರನ್ನು SIT ಮುಖ್ಯಸ್ಥರನ್ನಾಗಿ ಮಾಡಲಾಗಿದೆ.
ಕಂದಾಯ ಕಾರ್ಯದರ್ಶಿ, ಸಿಬಿಐ ಮತ್ತು ಐಬಿ ನಿರ್ದೇಶಕರು, ಜಾರಿ ನಿರ್ದೇಶನಾಲಯದ ಉನ್ನತಾಧಿಕಾರಿಗಳು, ಸಿಬಿಡಿಟಿ ಅಧ್ಯಕ್ಷರು ಮತ್ತು ಆರ್ ಬಿಐ ಡೆಪ್ಯುಟಿ ಗವರ್ನರ್ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸುಪ್ರೀಂ ಕೋರ್ಟಿನ ಹಿಂದಿನ ನ್ಯಾಯಾಧೀಶರಾದ ಅರಿಜಿತ್ ಪಸಾಯತ್ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋದ ಮಹಾನಿರ್ದೇಶಕರು, ಕಂದಾಯ ಗುಪ್ತ ದಳದ ಮಹಾನಿರ್ದೇಶಕರು, ಹಣಕಾಸು ಗುಪ್ತದಳದ ಮಹಾನಿರ್ದೇಶಕರು, ನೇರ ತೆರಿಗೆಗಳ ಕೇಂದ್ರ ಮಂಡಳಿಯ ಜಂಟಿ ಕಾರ್ಯದರ್ಶಿ ಸಮಿತಿಯ ಸದಸ್ಯರಾಗಿರುತ್ತಾರೆ. (ಕಪ್ಪುಹಣ: ಮತ್ತೆ ಕೇಂದ್ರಕ್ಕೆ ಚುರುಕು ಮುಟ್ಟಿಸಿದ ಕೋರ್ಟ್)
ನ್ಯಾಯವಾದಿ ರಾಮ ಜೇಠ್ಮಲಾನಿ ಅವರು ಭಾರತೀಯರ 19 ಲಕ್ಷ ಕೋಟಿ ರೂ. ಹಣ ವಿದೇಶಿ ಬ್ಯಾಂಕುಗಳಲ್ಲಿ (Liechtenstein Bank, Germany) ಇದೆ. ಇದನ್ನು ವಾಪಸ್ ತರಬೇಕು ಎಂದು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಸುತ್ತಿದೆ. ಅದರ ಅಂಗವಾಗಿ ಸುಪ್ರೀಂಕೋರ್ಟ್ 2011ರಲ್ಲಿ Special Investigation Team (SIT) ರಚಿಸಿತ್ತು. ಆದರೆ ಕೇಂದ್ರ ಸರಕಾರವು ಕಾಳಧನದ ವಿಚಾರದಲ್ಲಿ ದೇಶದ ಹಿತಾಸಕ್ತಿಗೆ ಎಳ್ಳುನೀರು ಬಿಟ್ಟು, SITಯನ್ನು ಸುಪ್ತಾವಸ್ಥೆಯಲ್ಲಿಟ್ಟಿತ್ತು.
ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಬಿಪಿ ಜೀವನ್ ರೆಡ್ಡಿ ಅವರು SIT ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಅದು ಬಲ ಕಳೆದುಕೊಂಡಿತ್ತು. ತನ್ನ ನಿರ್ಗಮನದ ಕೊನೆಯ ದಿನಗಳಲ್ಲಿ ಯುಪಿಎ ಸರಕಾರವು 18 ಮಂದಿಯ ಕಾಳ ಧನವಂತರನ್ನು ಹೆಸರಿಸಿ, ಕೋರ್ಟಿಗೆ ವರದಿ ಸಲ್ಲಿಸಿದ್ದ ಕೇಂದ್ರ ಸರಕಾರವು SIT ಪುನಾರಚನೆ ವಿಷಯವನ್ನು ಕೈಬಿಡಬೇಕು ಎಂದು ಮನವಿ ಸಲ್ಲಿಸಿತ್ತು.












Click it and Unblock the Notifications