ಕಾಶ್ಮೀರ, ಜಾರ್ಖಂಡ್ನಲ್ಲಿ ಕೇಸರಿಯ ರಂಗೋರಂಗು!
ನವದೆಹಲಿ, ಡಿ. 23 : ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಉಭಯ ರಾಜ್ಯಗಳಲ್ಲಿ ಕೇಸರಿಯ ರಂಗು ತುಂಬಿದೆ. ಜಾರ್ಖಂಡ್ನಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದ್ದರೆ, ಕಣಿವೆ ರಾಜ್ಯದಲ್ಲಿ ಮೈತ್ರಿ ಮಾತುಕತೆಯ ಲೆಕ್ಕಾಚಾರಗಳು ಆರಂಭವಾಗಿವೆ.
2014 ಬಿಜೆಪಿ ಪಾಲಿಗೆ ಚುನಾವಣಾ ವರ್ಷ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ನಂತರ ನಡೆದ ಚುನಾವಣೆಯಲ್ಲಿ ಗೆಲುವಿನ ನಗೆ ಬೀರುತ್ತಿದೆ. ಸದ್ಯ ಉಭಯ ರಾಜ್ಯಗಳಲ್ಲಿಯೂ ಬಿಜೆಪಿ ಜಯಭೇರಿ ಭಾರಿಸಿದ್ದು, ಕಾಂಗ್ರೆಸ್ ಮುಕ್ತ ಭಾರತಕ್ಕೆ ಕರೆ ಕೊಟ್ಟಿದ್ದ ಪಕ್ಷಕ್ಕೆ ಜನರು ಬೆಂಬಲ ನೀಡಿದ್ದಾರೆ. [ಚುನಾವಣೆ ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ]
ಜಮ್ಮು ಮತ್ತು ಕಾಶ್ಮೀರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಕಾಶ್ಮೀರದಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಜಾರ್ಖಂಡ್ನಲ್ಲಿ 32 ಸ್ಥಾನದಲ್ಲಿ ಜಯಭೇರಿ ಭಾರಿಸಿದೆ. ಪಕ್ಷದ ಕಾರ್ಯಕರ್ತರ ಸಂಭ್ರಮದ ಚಿತ್ರಗಳು ಇಲ್ಲಿವೆ. [ಪಿಟಿಐ ಚಿತ್ರ]
ಗೆಲುವು ನಮ್ಮದೇ ಅಂದ್ರು ಬಿಜೆಪಿ ಅಧ್ಯಕ್ಷರು
ನವದೆಹಲಿಯ ಬಿಜೆಪಿ ಕಚೇರಿಗೆ ಆಗಮಿಸಿದ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಎರಡೂ ರಾಜ್ಯಗಳ ಚುನಾವಣೆ ಗೆಲುವಿನ ಸಂತಸ ಹಂಚಿಕೊಂಡರು.
ಗೆಲುವು ಮೋದಿ ಮ್ಯಾಜಿಕ್
ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ ಮುಖವಾಡ ಧರಿಸಿದ ಕಾರ್ಯಕರ್ತರು ಎರಡೂ ರಾಜ್ಯದಲ್ಲಿ ಮೋದಿ ಮ್ಯಾಜಿಕ್ ನಡೆಯಿತು ಎಂದು ಸಂಭ್ರಮಿಸಿದರು.
ಗೆಲುವಿನ ಶಂಖನಾದ
ಜಾರ್ಖಂಡ್ನ ರಾಂಚಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಕಾರ್ಯಕರ್ತನೊಬ್ಬ ಶಂಖನಾದ ಮೊಳಗಿಸಿ ಗೆಲುವಿನ ಸಂಭ್ರಮವನ್ನು ಹಂಚಿಕೊಂಡ.
ಬಿಜೆಪಿ ಕಾರ್ಯಕರ್ತರ ಸಂಭ್ರಮ
ಜಾರ್ಖಂಡ್ನ ರಾಂಚಿಯಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಬಿಜೆಪಿ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಿದರು.
ಜಮ್ಮುವಿನಲ್ಲಿ ಕಾರ್ಯಕರ್ತರ ಸಂಭ್ರಮ
ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.
ಗೆದ್ದ ಅಭ್ಯರ್ಥಿಯ ಅದ್ದೂರಿ ಮೆರವಣಿಗೆ
ಜಮ್ಮುವಿನ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಬಿಜೆಪಿಯ ಸತ್ ಪೌಲ್ ಶರ್ಮಾ ಅವರನ್ನು ಅದ್ದೂರಿ ಮೆರವಣಿಗೆ ಮೂಲಕ ಕಾರ್ಯಕರ್ತರು ಸ್ವಾಗತಿಸಿದರು.
ಬಿಜೆಪಿಗೆ ಗೆಲುವಿನ ಸಿಹಿ
ಜಮ್ಮುವಿನಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ರಾಜೀವ್ ಶರ್ಮಾ ಅವರಿಗೆ ಕಾರ್ಯಕರ್ತರು ಸಿಹಿ ತಿನ್ನಿಸಿ ಗೆಲುವಿನ ಸಂಭ್ರಮವನ್ನು ಆಚರಿಸಿದರು.
ಬಿಜೆಪಿ ಮಹಿಳಾ ಘಟಕದ ಸಂಭ್ರಮ
ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಜಾರ್ಖಂಡ್ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಬಣ್ಣಬಳಿದುಕೊಂಡು ಸಂಭ್ರಮಪಟ್ಟರು.
ರಾಂಚಿಯಲ್ಲಿ ಬಿಜೆಪಿ ರಂಗೋ ರಂಗು
ಜಾರ್ಖಂಡ್ನ ರಾಂಚಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಗೆಲುವನ್ನು ಸಂಭ್ರಮಿಸಿದರು.
ಪಕ್ಷದ ಕಚೇರಿ ಮುಂದೆ ದೀಪಾವಳಿ
ನವದೆಹಲಿಯ ಬಿಜೆಪಿ ಕಚೇರಿ ಮುಂಭಾಗದಲ್ಲಿ ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ್ ರಾಜ್ಯಗಳ ಗೆಲುವನ್ನು ಪಟಾಕಿ ಹಚ್ಚಿ ಸಂಭ್ರಮಿಸಲಾಯಿತು.
ಗೆಲುವಿನಲ್ಲಿ ನಿಮ್ಮ ಪಾಲಿದೆ
ಜಾರ್ಖಂಡ್ ರಾಜ್ಯದ ಉಸ್ತುವಾರಿ ಭೂಪೇಂದ್ರ ಯಾದವ್ ಅವರಿಗೆ ಸಿಹಿ ತಿನ್ನಿಸಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಜಾರ್ಖಂಡ್ ಗೆಲುವಿನ ಸಂತಸವನ್ನು ಹಂಚಿಕೊಂಡರು.
ಒಂದು ಕ್ಷೇತ್ರದಲ್ಲಿ ಗೆದ್ದ ಸಿಎಂ ಒಮರ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರು ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ತಮ್ಮ ನಿವಾಸದಿಂದ ಕಾರಿನಲ್ಲಿ ಹೊರಟ ಅವರು ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.
ಸಂತಸ ಹಂಚಿಕೊಂಡ ಪಿಡಿಪಿ ನಾಯಕರು
ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪೀಪಲ್ಸ್ ಡೆಮೋಕ್ರಾಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬ ಮುಫ್ತಿ ಪತ್ರಿಕಾಗೋಷ್ಠಿ ನಡೆಸಿ ಗೆಲುವಿನ ಸಂತಸ ಹಂಚಿಕೊಂಡರು.