ಸರ್ಜಿಕಲ್ ದಾಳಿ: ಕೇಜ್ರಿವಾಲ್ ಹೇಳಿಕೆಯಲ್ಲಿ ತಪ್ಪೇನಿದೆ, ಬಿಜೆಪಿಗ್ಯಾಕೆ ಸಿಟ್ಟು?
ನವದೆಹಲಿ, ಅ 4: ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದರಲ್ಲಿ ಮಂಚೂಣಿಯಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸರ್ಜಿಕಲ್ ದಾಳಿಯ ವಿಚಾರದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿಯವರನ್ನು ಹೊಗಳಿ, ಸೆಲ್ಯೂಟ್ ಹೊಡೆದಿದ್ದಾರೆ.
ಸರ್ಜಿಕಲ್ ದಾಳಿಯ ನಂತರ ಸೋಮವಾರ (ಅ 3) 2.30 ನಿಮಿಷದ ತನ್ನ ಭಾಷಣದ ವಿಡಿಯೋ ಬಿಡುಗಡೆ ಮಾಡಿ ಕೇಜ್ರಿವಾಲ್, ಪ್ರಧಾನಿ ಮತ್ತು ಸೈನಿಕರನ್ನು ಹೊಗಳಿದ್ದರು. ಜೊತೆಗೆ, ಸರ್ಜಿಕಲ್ ದಾಳಿ ನಡೆದಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ, ಅದಕ್ಕೂ ಉತ್ತರ ಕೊಡಬೇಕಾಗಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. (ಪಾಕಿಸ್ತಾನಕ್ಕೆ ನೀರಿಳಿಸಿದ ತಾರೀಕ್ ಫತಾ)
ಮೋದಿಯನ್ನು ಹೊಗಳಿದ್ದರೂ, ಬಿಜೆಪಿ ನಾಯಕರು ಮತ್ತು ಟ್ವಿಟ್ಟಿಗರು ಕೇಜ್ರಿವಾಲ್ ವಿರುದ್ದ ತಿರುಗಿಬಿದ್ದಿದ್ದಾರೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಾತನಾಡುತ್ತಾ, ಕೇಜ್ರಿವಾಲ್ ಅವರಿಗೆ ನಮ್ಮ ಸೈನಿಕರ ಮೇಲೆ ನಂಬಿಕೆ ಇದೆಯೋ, ಇಲ್ಲವೋ ಎಂದು ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ಬಿಡುಗಡೆ ಮಾಡಿರುವ ವಿಡಿಯೋದಿಂದಾಗಿ ಅವರ ಬಗ್ಗೆ ಸುದ್ದಿ ಪಾಕಿಸ್ತಾನದ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಅಚ್ಚಾಗಿದೆ. ಕೇಜ್ರಿವಾಲ್ ಅವರಿಗೆ ನಮ್ಮ ಸೈನಿಕರ ಮೇಲೆ ನಂಬಿಕೆಯಿದ್ದರೆ, ಪಾಕಿಸ್ತಾನದ ಅಪಪ್ರಚಾರದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕೆಂದು ರವಿಶಂಕರ್ ಪ್ರಸಾದ್ ಕಿಡಿಕಾರಿದ್ದಾರೆ. (ನಿವೃತ್ತಿಗೂ ಮುನ್ನ ಭಾರತದ ವಿರುದ್ದ ರಕ್ತಾಕ್ಷರ)
ಅಂತರಾಷ್ಟ್ರೀಯ ಪತ್ರಕರ್ತರನ್ನು ಗಡಿ ಬಳಿ ಪಾಕಿಸ್ತಾನ ಕರೆದುಕೊಂಡು ಹೋಗಿ, ಸರ್ಜಿಕಲ್ ದಾಳಿ ನಡೆದಿಲ್ಲ ಎಂದು ಅಪಪ್ರಚಾರ ಮಾಡುತ್ತಿದೆ. ಪಾಕಿಸ್ತಾನದ ಈ ಹೇಳಿಕೆಯಿಂದ ನನ್ನ ರಕ್ತ ಕುದಿಯುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದರು.
ಮೋದಿಗೆ ಸೆಲ್ಯೂಟ್
ನನ್ನ ಮತ್ತು ಪ್ರಧಾನಿಗಳ ನಡುವೆ ಭಿನ್ನಾಭಿಪ್ರಾಯವಿದೆ. ಆದರೆ ಸರ್ಜಿಕಲ್ ದಾಳಿಯ ವಿಚಾರದಲ್ಲಿ ನಾನು ಮತ್ತು ಇಡೀ ದೇಶ ಮೋದಿ ಬೆನ್ನಿಗಿದೆ. ಅವರ ನಿರ್ಧಾರ ಪ್ರಶಂಸನಾರ್ಹ, ಅವರಿಗೆ ನನ್ನದೊಂದು ಸೆಲ್ಯೂಟ್ - ಕೇಜ್ರಿವಾಲ್.
ಪಾಕ್ ಅಪಪ್ರಚಾರ
ಪಾಕಿಸ್ತಾನ ತನ್ನ ಮಾಧ್ಯಮಗಳ ಮೂಲಕ ವಿಶ್ವಕ್ಕೆ ಸುಳ್ಳು ಸಂದೇಶ ನೀಡುತ್ತಿದೆ. ಪಾಕಿಸ್ತಾನದ ಮಾಡುತ್ತಿರುವ ಈ ಅಪಪ್ರಚಾರದಿಂದ ನನ್ನ ರಕ್ತ ಕುದಿಯುತ್ತಿದೆ, ಪಾಕ್ ಅಪಪ್ರಚಾರಕ್ಕೆ ಪ್ರಧಾನಿಗಳು ಉತ್ತರ ನೀಡಬೇಕಿದೆ ಎಂದು ಕೇಜ್ರಿವಾಲ್ ಹೇಳಿದ್ದರು. ಇದಕ್ಕೆ ರವಿಶಂಕರ್ ಪ್ರಸಾದ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
|
ಸಿಸಿಟಿವಿ ಕ್ಯಾಮರಾ
ಸರ್ಜಿಕಲ್ ದಾಳಿ ಸಾಕ್ಷಿಗಾಗಿ ಹದಿನೈದು ಲಕ್ಷ ಸಿಸಿಟಿವಿಯನ್ನು ಗಡಿಯಲ್ಲಿ ಹಾಕಲು ಭಾರತದ ಆರ್ಮಿಯ ನಿರ್ಧಾರ.
|
ಇದೇನು ಸೆಕ್ಸ್ ಟೇಪಾ?
ಸರ್ಜಿಕಲ್ ದಾಳಿ ಅನ್ನೋದು ಸ್ಟಿಂಗ್ ಆಪರೇಷನ್ ಅಲ್ಲಾ. ನಿಮಗೆ ನಮ್ಮ ಸೈನಿಕರ ಮೇಲೆ ನಂಬಿಕೆಯಿಲ್ಲದಿದ್ದರೆ, ತಪ್ಪಿರುವುದು ನಿಮ್ಮಲ್ಲಿ.
|
ಸರ್ಜಿಕಲ್ ದಾಳಿ
ಕೇಜ್ರಿವಾಲ್ ಮತ್ತು ಹಫೀಜ್ ಸಯೀದ್ ಇಬ್ಬರು ಸರ್ಜಿಕಲ್ ದಾಳಿ ನಡೆದಿದ್ದಕ್ಕೆ ಪುರಾವೆ ಕೇಳುತ್ತಿದ್ದಾರೆ.
|
ಕೇಜ್ರಿವಾಲ್ ಜೊತೆಗೆ ಕರೆದುಕೊಂಡು ಹೋಗಿ
ಸರ್ಜಿಕಲ್ ದಾಳಿ ನಡೆದಿದ್ದಕ್ಕೆ ಸಾಕ್ಷಿ ಕೇಜ್ರಿವಾಲ್ ಕೇಳುತ್ತಿರುವುದರಿಂದ ನಮ್ಮ ಸೈನಿಕರ ಜೊತೆ ಕೇಜ್ರಿವಾಲ್ ಅವರನ್ನೂ ಕಳುಹಿಸಿ.