ಬೇಗುದಿಯಲ್ಲಿ ಬಿಜೆಪಿ, ಶಿವಸೇನೆ; ಬಾಗುವವರಾರು?
ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿರುವ ಶಿವಸೇನೆ ಇನ್ನೂ ಬೆಂಬಲ ನೀಡದೆ ಮೊಂಡುತನ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್ ಸಿಪಿ)ದ ಬಾಹ್ಯ ಬೆಂಬಲ ಪಡೆಯುವ ಯೋಚನೆಯನ್ನು ಬಿಜೆಪಿ ಮುಕ್ತವಾಗಿರಿಸಿಕೊಂಡಿದೆ. ಅಥವಾ ಬಹುಮತ ಸಾಬೀತು ಸಂದರ್ಭದಲ್ಲಿ ಎನ್ ಸಿಪಿ ಗೈರಾಗುವಂತೆ ನೋಡಿಕೊಂಡು ಅಲ್ಪಮತದ ಸರ್ಕಾರ ರಚಿಸುವ ಕುರಿತು ಊಹಾಪೋಹಗಳನ್ನೂ ಬಿಜೆಪಿ ತನ್ನ ಪಡಸಾಲೆಯಿಂದ ಹರಿಬಿಟ್ಟಿದೆ.
ಏನೇ ಅಸಮಾಧಾನ ಇದ್ದರೂ ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಅವರು ಬಿಜೆಪಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಮತ್ತೆ ಮೈತ್ರಿ ಸಂಭವಿಸುವ ಸಾಧ್ಯತೆಯನ್ನು ನಿಚ್ಛಳವಾಗಿಸಿದೆ. ಅಲ್ಲದೆ, ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಎಲ್ಲಿಯೂ ಭಾಳಾ ಸಾಹೇಬ ಠಾಕ್ರೆ ಅವರ ಕುರಿತು ಟೀಕಿಸದ ಕಾರಣ ಮೈತ್ರಿಗೆ ಮುಂದಾಗಲು ಶಿವಸೇನೆಗೆ ಸ್ವಾಭಿಮಾನದ ಅಡ್ಡಿ ಎದುರಾಗುವುದಿಲ್ಲ. ಆದರೆ ಬಿಜೆಪಿ ಪ್ರಮುಖ ಖಾತೆಗಳನ್ನು ನೀಡಲೊಪ್ಪದ ಹಿನ್ನೆಲೆಯಲ್ಲಿ ಶಿವಸೇನೆ ಬೇಷರತ್ ಬೆಂಬಲ ನೀಡಲೊಪ್ಪದೆ ಇಬ್ಬಂದಿಯಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿದೆ.

ಶಿವಸೇನೆಯಲ್ಲಿ ಭಿನ್ನಮತವಿದೆಯೇ?: ಹೀಗೊಂದು ಯೋಚನೆ ಹುಟ್ಟುಹಾಕಲು ಕಾರಣವಾಗಿದ್ದು ಶಿವಸೇನೆಯ ಹಿರಿಯ ಮುಖಂಡರಾದ ಮಾಜಿ ಮುಖ್ಯಮಂತ್ರಿ ಮನೋಹರ ಜೋಶಿ ಅವರ ಹೇಳಿಕೆ. "ಶಿವಸೇನೆ ಬಸ್ ತಪ್ಪಿಸಿಕೊಂಡಿದೆ. ಆದರೆ, ಇದಕ್ಕೆ ಕಾರಣ ಯಾರು ಎಂಬುದನ್ನು ಯೋಚಿಸಬೇಕಿದೆ" ಎಂದು ಅವರು ಹೇಳಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟು ಕನಿಷ್ಠ 150 ಸ್ಥಾನಗಳಿಗೆ ಭೇಡಿಕೆ ಇಟ್ಟಿರುವುದು ಬಿಜೆಪಿ ಜತೆ ಮೈತ್ರಿ ಮುರಿಯಲು ಮುಖ್ಯ ಕಾರಣ ಎಂದು ಶಿವಸೇನೆ ಪಡಸಾಲೆಯಲ್ಲಷ್ಟೇ ಹರಿದಾಡುತ್ತಿದ್ದ ಅಸಮಾಧಾನ ಬಹಿರಂಗವಾಗುತ್ತಿದೆಯೇ ಎಂಬ ಸಂದೇಹಕ್ಕೆ ಕಾರಣವಾಗಿದೆ. ಅಲ್ಲದೆ, ಚುನಾವಣೆಗೂ ಮೊದಲು ಉದ್ಧವ್ ಠಾಕ್ರೆ ಅವರು ಪಕ್ಷದ ವೇದಿಕೆಯೊಂದರಲ್ಲಿ "ಒಂದು ವೇಳೆ ಪಕ್ಷ ನನ್ನ ಮೇಲೆ ವಿಶ್ವಾಸ ಕಳೆದುಕೊಂಡರೆ ಕಣದಿಂದ ಹಿಂದೆ ಸರಿಯುತ್ತೇನೆ" ಎಂದು ಹೇಳಿರುವುದು ಕಾಡುತ್ತಿರುವ ಸಂದೇಹಕ್ಕೆ ಇಂಬು ನೀಡಿದೆ. [ಆಸ್ತಿ ವೃದ್ಧಿಯಲ್ಲಿ ಶಾಸಕರ ಮೇಲುಗೈ]
ಮೊಂಡುತನವೇ ರಾಜನೀತಿ: ಇತ್ತ ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರಿರುವ ಬಿಜೆಪಿ ಬೀಗುತ್ತಿದೆ. ಆದರೆ, ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿರುವ ದೇವೇಂದ್ರ ಫಡ್ನವೀಸ್ ಈಗ ಎದುರಾಗಿರುವ ಸವಾಲನ್ನು ಸಮರ್ಥವಾಗಿ ನಿಭಾಯಿಸಬಲ್ಲರೇ ಎಂಬುದನ್ನು ಕಾದು ನೋಡಬೇಕಿದೆ. ಬೆನ್ನ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೀಮಬಲವಿದ್ದರೂ, ರಾಜಕೀಯ ಲೆಕ್ಕಾಚಾರಕ್ಕಿಂತ ಮೊಂಡುತನವನ್ನೇ ರಾಜನೀತಿಯನ್ನಾಗಿಸಿಕೊಂಡಿರುವ ಶಿವಸೇನೆ ತಲೆ ಬಾಗುತ್ತದೆಯೇ ಎಂಬುದನ್ನು ನೋಡಬೇಕಿದೆ. ಅಲ್ಲದೆ, ಪ್ರಮುಖ ಸ್ಪರ್ಧಿಯಾಗಿದ್ದ ರಾಜ್ ಠಾಕ್ರೆ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಕಾರಣ ಶಿವಸೇನೆ ಎದುರಾಳಿಯಿಲ್ಲದೇ ನಿಶ್ಚಿಂತವಾಗಿದೆ.
ಆದರೆ, ಕೇಂದ್ರದಲ್ಲಿಯೂ ಅಧಿಕಾರದಲ್ಲಿದ್ದು, ಅನೇಕ ರಾಜ್ಯಗಳಲ್ಲಿ ಚಿಕ್ಕಪುಟ್ಟ ಮಿತ್ರಪಕ್ಷಗಳೊಂದಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದ್ದರಿಂದ ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿಯನ್ನು ಎದುರುಹಾಕಿಕೊಂಡರೆ ಶಿವಸೇನೆಗೇ ನಷ್ಟ ಎಂಬ ವಾದ ಬಲವಾಗಿ ಕೇಳಿಬರುತ್ತಿದೆ.











Click it and Unblock the Notifications