'ರಾಮ ಮಂದಿರ ಕಟ್ಟುತ್ತೇವೆ'... ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಆಶ್ವಾಸನೆ
ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಕೂಡದೆಂದು ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆನ್ನಲ್ಲೇ ಬಿಜೆಪಿಯಿಂದ 'ರಾಮ ಮಂದಿರ' ಜಪ ಶುರುವಾಗಿದೆ.
ಅಲಹಾಬಾದ್, ಜನವರಿ 28: ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಶುಕ್ರವಾರ ಬಿಡುಗಡೆಗೊಳಿಸಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಭರವಸೆ ನೀಡಲಾಗಿದೆ.
ಶುಕ್ರವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.
ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರ ಸಿಕ್ಕರೆ ರಾಮ ಮಂದಿರ ನಿರ್ಮಿಸುತ್ತೇವೆ ಎಂದು ಹೇಳಿರುವ ಬಿಜೆಪಿ ಆ ಮಂದಿರವನ್ನು ಕಾನೂನಿಗನುಗುಣವಾಗಿ ನಿರ್ಮಿಸುತ್ತೇವೆ ಎಂದು ಹೇಳುವ ಮೂಲಕ ಜಾಣ್ಮೆ ಮೆರೆದಿದೆ.
ಇನ್ನುಳಿದಂತೆ, ಪ್ರಣಾಳಿಕೆಯಲ್ಲಿರುವ ಇತರ ಪ್ರಮುಖ ಅಂಶಗಳು ಹೀಗಿವೆ.
-ರಾಜ್ಯದ ಶಾಲಾ ಕಾಲೇಜುಗಳ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಆ್ಯಂಟಿ ರೋಮಿಯೋ ದಳ ರಚನೆ
- ರಾಜ್ಯದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ 500 ಕೋಟಿ ರು.
- ಜನ ಕಲ್ಯಾಣ ಸಂಕಲ್ಪ ಯೋಜನೆಯಡಿ ಸಣ್ಣ ಹಾಗೂ ಕನಿಷ್ಟ ಆದಾಯವಿರುವ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ.
-ಕಬ್ಬು ಬೆಳೆಗಾರರ ಬಾಕಿ ಬಿಜೆಪಿ ಅಧಿಕಾರಕ್ಕೆ ಬಂದ 120 ದಿನಗಳಲ್ಲಿ ಪಾವತಿ
- ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಹಾಗೂ 1 ಜಿಬಿ ಡೇಟಾ
- ಕಾನೂನಿನ ಬಲೆಯಿಂದ ತಪ್ಪಿಸಿಕೊಂಡಿರುವ ಎಲ್ಲಾ ಸಮಾಜ ಘಾತುಕರೂ 45 ದಿನಗಳಲ್ಲಿ ಅಂದರ್
- ರಾಜ್ಯದಲ್ಲಿ ಆಹಾರ ಸಂಸ್ಕರಣಾ ಪಾರ್ಕ್ ಸ್ಥಾಪನೆ
- ರಾಜ್ಯದಲ್ಲಿ 24 ಗಂಟೆ ನಿರಂತರ ವಿದ್ಯುತ್, ಬಡವರಿಗೆ ಕಡಿಮೆ ದರದಲ್ಲಿ
- ಜಿಲ್ಲಾಮಟ್ಟದಲ್ಲಿ ಮತೀಯ ಗಲಭೆಗಳಿಂದ ಜನರು ಬೇರೆಡೆ ಗುಳೆ ಹೋಗದಂತೆ ತಡೆಯಲು ಬಿಜೆಪಿಯಿಂದ ವಿಶೇಷ ದಳಗಳ ರಚನೆ
- ಭ್ರಷ್ಟಾಚಾರ ತಡೆಯುವ ಸಲುವಾಗಿ ಸರ್ಕಾರಿ ವಲಯದಲ್ಲಿ ಮೂರನೇ ಹಾಗೂ ನಾಲ್ಕನೇ ದರ್ಜೆ ನೌಕರಿಗಿರುವ ಸಂದರ್ಶನ ರದ್ದು