ಬಿಜೆಪಿ ಸಂಘಟನೆಯಲ್ಲಿ ಭಾರೀ ಬದಲಾವಣೆ: ಮೂವರಿಗೆ ಭಾರೀ ಹಿನ್ನಡೆ
ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಆಯ್ಕೆಯಾದ ನಂತರ ಮೊದಲ ಬಾರಿಗೆ ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಭಾರೀ ಬದಲಾವಣೆಯನ್ನು ಮಾಡಿದ್ದಾರೆ. ರಾಜ್ಯದ ಮೂವರು ಮುಖಂಡರಿಗೆ ಅಚ್ಚರಿಯ ಸ್ಥಾನಮಾನ ಸಿಕ್ಕಿದೆ.
ನಡ್ಡಾ ಮಾಡಿರುವ ಬದಲಾವಣೆಯಲ್ಲಿ ವಾಕ್ಚಾತುರ್ಯ, ಪಕ್ಷದ ಸಿದ್ದಾಂತವನ್ನು ಜನರಿಗೆ ತಲುಪಿಸುವ ಮತ್ತು ಸಂಘಟನಾ ಸಾಮರ್ಥ್ಯ ಇರುವವರಿಗೆ ಮಣೆ ಹಾಕಿರುವುದು ಸ್ಪಷ್ಟವಾಗಿದೆ. ಕರ್ನಾಟಕ ಬಿಜೆಪಿ ಪಾಲಿಗೆ ಇದು ಅಚ್ಚರಿಯ ಆಯ್ಕೆಯಾಗಿದೆ.
ಲೋಕಸಭೆಯಲ್ಲಿ ಪಕ್ಷದ ಕಾರ್ಯಕ್ರಮ/ಯೋಜನೆಗಳನ್ನು ಬಲವಾಗಿ ಪ್ರತಿಪಾದಿಸುತ್ತಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯಗೆ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರನ್ನಾಗಿ ಮಾಡಲಾಗಿರುವುದು ಒಂದೆಡೆ.
ಇನ್ನೊಂದೆಡೆ, ರಾಜ್ಯದ ಹಾಲೀ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಬದಲಾವಣೆ, ನಾಲ್ವರು ಹಿರಿಯ ಮುಖಂಡರಿಗೆ ಭಾರೀ ಹಿನ್ನಡೆ:

ಹಿರಿಯ ಸಂಸದೆ ಉಮಾಭಾರತಿಗೆ ಕೊಕ್
ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ, ಹಿರಿಯ ಸಂಸದೆ ಉಮಾಭಾರತಿಗೆ ಕೊಕ್ ನೀಡಲಾಗಿದೆ. ಬಿಜೆಪಿ ವರಿಷ್ಠರ ಜೊತೆಗೆ ಉತ್ತಮ ಬಾಂಧವ್ಯವನ್ನು ಉಮಾಭಾರತಿ ಹೊಂದದೇ ಇರುವುದು, ಪಕ್ಷ ಸಂಘಟನೆಯಲ್ಲಿ ಉದಾಸೀನತೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಮೂರು ರಾಜ್ಯಗಳ ಉಸ್ತುವಾರಿಯಾಗಿದ್ದ ಮುರಳೀಧರ ರಾವ್
ಮೂರು ರಾಜ್ಯಗಳ ಉಸ್ತುವಾರಿಯಾಗಿದ್ದ ಮುರಳೀಧರ ರಾವ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಉಸ್ತುವಾರಿಯಾಗಿ ರಾವ್ ಕಾರ್ಯ ನಿರ್ವಹಿಸುತ್ತಿದ್ದರು. ಮೂರು ರಾಜ್ಯಗಳಲ್ಲಿ ನಿರೀಕ್ಷಿತ ನಿರ್ವಹಣೆ ಇವರಿಂದ ಬಂದಿಲ್ಲ ಎನ್ನುವ ಕಾರಣಕ್ಕೆ ಇವರನ್ನು ಕೆಳಗಿಳಿಸಲಾಗಿದೆ ಎನ್ನಲಾಗುತ್ತಿದೆ.

ರಾಮ್ ಮಾಧವ್
ಪಕ್ಷ ಸಂಘಟನೆಯಲ್ಲಿ ಅಷ್ಟೇನೂ ಹಿಂದಕ್ಕೆ ಬೀಳದ ರಾಮ್ ಮಾಧವ್, ಕಳೆದ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಸಹಯೋಗದೊಂದಿದೆ ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತರಾಗಿದ್ದರು. ಹುದ್ದೆಯಿಂದ ಈ ಕೆಳಗೆ ಇಳಿಸಲ್ಪಟ್ಟಿರುವ ರಾಮ್ ಮಾಧವ್, ರಾಜ್ಯಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದರೂ, ಟಿಕೆಟ್ ಲಭವಾಗಿರಲಿಲ್ಲ. ಆದರೆ, ಮೋದಿ ಸಂಪುಟದಲ್ಲಿ ಇವರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್
ಇನ್ನು ಪಕ್ಷದ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ಮತ್ತೆ ಆ ಸ್ಥಾನದಲ್ಲಿ ನಿರೀಕ್ಷೆಯಂತೆ ಮುಂದುವರಿದಿದ್ದಾರೆ. ಜೊತೆಗೆ, ತಮ್ಮ ಆಪ್ತ ವಲಯದ ಸಿ.ಟಿ.ರವಿ ಮತ್ತು ತೇಜಸ್ವಿ ಸೂರ್ಯಗೆ ರಾಷ್ಟ್ರ ಮಟ್ಟದಲ್ಲಿ ಸ್ಥಾನ ಸಿಗುವಂತೆ ಮಾಡುವಲ್ಲೂ ಯಶಸ್ವಿಯಾಗಿದ್ದಾರೆ.












Click it and Unblock the Notifications