ಜಮ್ಮು-ಕಾಶ್ಮೀರ: ಸಚಿವರ ಸಾಮೂಹಿಕ ರಾಜೀನಾಮೆ ಕೇಳಿದ ಬಿಜೆಪಿ
ಶ್ರೀನಗರ, ಏಪ್ರಿಲ್ 18: ಜಮ್ಮು-ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಮತ್ತು ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಇದೀಗ ಮಂತ್ರಿಮಂಡಲವನ್ನು ಸಂಪೂರ್ಣ ಬದಲಾಯಿಸುವ ಕಾರಣದಿಂದ ಜಮ್ಮು-ಕಾಶ್ಮೀರ ಸರ್ಕಾರದ ಎಲ್ಲಾ ಬಿಜೆಪಿ ಸಚಿವರ ರಾಜೀನಾಮೆಯನ್ನು ಪಕ್ಷದ ಉನ್ನತ ನಾಯಕರು ಕೇಳಿದ್ದಾರೆ.
ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹರಿ ಬಾಬು ರಾಜೀನಾಮೆ
ನಿನ್ನೆ(ಏ.17) ನಡೆದ ಈ ದಿಢೀರ್ ಬೆಳವಣಿಗೆ ರಾಜಕೀಯ ವಲಯಲ್ಲಿ ಕೆಲಕಾಲ ತಲ್ಲಣ ಎಬ್ಬಿಸಿತ್ತು. ಕತುವಾ ಅತ್ಯಾಚಾರ ಪ್ರಕರಣದ ನಂತರ ಕಾಶ್ಮೀರದ ಬಿಜೆಪಿ-ಪಿಡಿಪಿ ಸರ್ಕಾರ ಮೊದಲಿನಷ್ಟು ಉತ್ತಮ ಬಾಂಧವ್ಯ ಹೊಂದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕತುವಾ ಪ್ರಕರಣದ ಆರೋಪಿಗಳ ಪರವಾಗಿ ನಡೆದ rally ಯೊಂದರಲ್ಲಿ ಬಿಜೆಪಿ ಸಚಿವರಿಬ್ಬರು ಕಾಣಿಸಿಕೊಂಡ ನಂತರ ಪರಿಸ್ಥಿತಿ ಮತ್ತಷ್ಟು ಬಿಗಿಯಾಗಿತ್ತು. ಇಬ್ಬರು ಸಚಿವರು ರಾಜೀನಾಮೆ ನೀಡಿದ್ದರೂ, ಕತುವಾ ಪ್ರಕರಣ ಜಮ್ಮು-ಕಾಶ್ಮೀರದ ಮೈತ್ರಿ ಸರ್ಕಾರವನ್ನೇ ಅಲ್ಲಾಡಿಸಬಹುದು ಎಂದು ನಿರೀಕ್ಷಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಎಲ್ಲಾ ಸಚಿವರ ರಾಜೀನಾಮೆ ಕೇಳಿದ್ದು ಕೆಲಕಾಲ ಅನುಮಾನ ಹುಟ್ಟಿಸಿತ್ತಾದರೂ, 'ರಾಜೀನಾಮೆ ಕೇಳಿದ್ದರೆ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ. ಸಚಿವ ಸಂಪುಟ ಪುನಾರಚನೆಗಷ್ಟೇ ಈ ನಿರ್ಧಾರ' ಎಂದು ಜಮ್ಮು-ಕಾಶ್ಮೀರದ ಬಿಜೆಪಿ ಮೂಲಗಳು ತಿಳಿಸಿವೆ.