ಗುಜರಾತ್ ಮುಖ್ಯಮಂತ್ರಿ ರೇಸ್ ನ ಮುಂಚೂಣಿಯಲ್ಲಿ ನಿತಿನ್ ಪಟೇಲ್
Recommended Video

ಅಹಮದಾಬಾದ್, ನವೆಂಬರ್ 30: ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಾಸ್) ಸಂಚಾಲಕ ಹಾರ್ದಿಕ್ ಪಟೇಲ್ ಸಮಾವೇಶಗಳಿಗೆ ಸಮರೋಪಾದಿಯಲ್ಲಿ ಜನ ಹರಿದು ಬರುತ್ತಿರುವುದು ಬಿಜೆಪಿಯ ನಿದ್ದೆಗೆಡಿಸಿದೆ.
ಹೀಗಾಗಿ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಘೋಷಣೆ ಮಾಡುವ ಸಾಧ್ಯತೆ ಇದ್ದು, ಪಟೇಲ್ ಸಮುದಾಯದವರು ಸಿಎಂ ಅಭ್ಯರ್ಥಿಯಾಗುವ ಎಲ್ಲಾ ಸಾಧ್ಯತೆಗಳಿವೆ.
ಈ ಮೂಲಕ ರಾಜ್ಯದಲ್ಲಿ ಶೇಕಡಾ 14 ರಷ್ಟು ಇರುವ ಪಟೇಲರ ಮತಗಳನ್ನು ಸೆಳೆಯುವ ಯೋಜನೆಯನ್ನು ಬಿಜೆಪಿ ಹಾಕಿಕೊಂಡಿದೆ.

ರೇಸ್ ನಲ್ಲಿ ನಿತಿನ್ ಪಟೇಲ್
ಬಿಜೆಪಿಯಿಂದ ಪಟೇಲ್ ಸಮುದಾಯದ ಕಣ್ಮಣಿಯಾಗಿ ಕಾಣಿಸಿಕೊಳ್ಳುತ್ತಿರುವವರು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್.
ನಿತಿನ್ ಪಟೇಲ್ ಬಗ್ಗೆ ಪಕ್ಷದಲ್ಲೂ ಅಂಥಹ ವಿರೋಧ ಧ್ವನಿಗಳಿಲ್ಲ. ಹೀಗಾಗಿ ಬಿಜೆಪಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಮಾಡುವ ಎಲ್ಲಾ ಸಾಧ್ಯತೆಗಳೂ ಇವೆ.

ಬಿಜೆಪಿಯ ಹಳೆ ತಂತ್ರ
ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೇರುವುದು ಬಿಜೆಪಿ ಹಿಂದಿನಿಂದಲೂ ಅನುಸರಿಸಿಕೊಂಡು ಬಂದ ತಂತ್ರ. ಈ ಮೂಲಕ ಅಭ್ಯರ್ಥಿಗಳ ಸಮುದಾಯದ ಮತಗಳನ್ನು ಸೆಳೆಯುವುದು, ಸಿಎಂ ಅಭ್ಯರ್ಥಿಗಳ ತವರು ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದನ್ನು ಬಿಜೆಪಿ ಕರಗತ ಮಾಡಿಕೊಂಡಿದೆ.
ಹಿಮಾಚಲ ಪ್ರದೇಶದಲ್ಲೂ ಇದೇ ತಂತ್ರ ಅನುಸರಿಸಿ ಪ್ರೇಮ್ ಕುಮಾರ್ ಧುಮಾಲ್ ರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಇಲ್ಲಿಯವರೆಗೆ ಬಿಡುಗಡೆಯಾದ ಸಮೀಕ್ಷೆಗಳ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಎಲ್ಲಾ ಸಮೀಕ್ಷೆಗಳು ಹೇಳಿವೆ.

ಬಿಜೆಪಿ ರ್ಯಾಲಿ ಬಣ ಬಣ
ಪ್ರಧಾನಿ ನರೇಂದ್ರ ಮೋದಿ ಭಾವಹಿಸುವ ರ್ಯಾಲಿಗಳಲ್ಲಿ ಜನವೇನೋ ಸೇರುತ್ತಿದ್ದಾರೆ. ಆದರೆ ಅವರಲ್ಲಿ ಉತ್ಸಾಹ ಕುಂದಿರುವುದು ನಾಯಕರ ಗಮನಕ್ಕೆ ಬಂದಿದೆ. ಅದರಲ್ಲೂ ಪಟೇಲರ ಪ್ರಾಭಲ್ಯವಿರುವ ಪ್ರದೇಶಗಳಲ್ಲಿ ಬಿಜೆಪಿ ಜನ ಸೇರಿಸಲು ಹೆಣಗಾಡುತ್ತಿದೆ.

ಕಾಂಗ್ರೆಸ್, ಹಾರ್ದಿಕ್ ಆಕ್ರಮಣಕಾರಿ ಪ್ರಚಾರ
ಬಿಜೆಪಿಯ ರ್ಯಾಲಿಗಳು ಬಣಗುಡುತ್ತಿದ್ದರೆ ಹಾರ್ದಿಕ್ ಪಟೇಲ್ ರ್ಯಾಲಿಗಳಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ.
ಜತೆಗೆ ಪಟೇಲರ ಬಾಹುಳ್ಯದ ಪ್ರದೇಶಗಳಲ್ಲಿ ಕಾಂಗ್ರೆಸ್ ಆಕ್ರಮಣಕಾರಿ ಪ್ರಚಾರ ನಡೆಸುತ್ತಿದ್ದು ಜನರ ಪ್ರತಿಕ್ರಿಯೆಯೂ ಉತ್ತಮವಾಗಿದೆ. ಹೀಗಾಗಿ ಬಿಜೆಪಿಗೆ ಒಳಗಿಂದ ಸ್ವಲ್ಪ ಮಟ್ಟಿಗೆ ಅಳುಕು ಕಾಣಿಸಿಕೊಂಡಿದೆ.

ಪಟೇಲರ ನಿರ್ಲಕ್ಷ್ಯ ಆರೋಪ
ಬಿಜೆಪಿ ಪಟೇಲ್ ಸಮುದಾಯದ ನಾಯಕರನ್ನು ತುಳಿದಿದೆ ಎಂಬ ಆರೋಪಗಳನ್ನು ಎದುರಾಳಿಗಳು ಮಾಡುತ್ತಾ ಬಂದಿದ್ದಾರೆ. ಕೇಶುಭಾಯಿ ಪಟೇಲರನ್ನು ಮೂಲೆಗುಂಪು ಮಾಡಲಾಯಿತು, ಆನಂದಿ ಬೆನ್ ಪಟೇಲ್ ರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಯಿತು, ಸಿಎಂ ಆಕಾಂಕ್ಷಿ ನಿತಿನ್ ಪಟೇಲ್ ರನ್ನು ಉಪ ಮುಖ್ಯಮಂತ್ರಿ ಮಾಡಲಾಯಿತು ಎಂಬ ಆರೋಪಗಳು ಕೇಸರಿ ಪಕ್ಷದ ಮೇಲೆ ಕೇಳಿ ಬಂದಿದೆ.

ಪಟೇಲರಿಗೆ ದೃಢ ಸಂದೇಶ
ಈ ಹಿನ್ನಲೆಯಲ್ಲಿ ಪಟೇಲರಿಗೆ ದೃಢ ಸಂದೇಶ ನೀಡಬೇಕು ಎಂದು ಬಿಜೆಪಿ ಅಂದುಕೊಂಡಿದ್ದು ಅದೇ ಸಮುದಾಯದವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಲು ಹೊರಟಿದೆ. ಕೆಲವೇ ದಿನಗಳಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಹೊರ ಬೀಳುವ ನಿರೀಕ್ಷೆ ಇದೆ.
ಗುಜರಾತ್ ನಲ್ಲಿ ಡಿಸೆಂಬರ್ 9 ರಂದು ಮತ್ತು 14ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದ್ದು ಅಂದೇ ಫಲಿತಾಂಶ ಹೊರ ಬೀಳಲಿದೆ.












Click it and Unblock the Notifications