
ಗುಜರಾತ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ: 20 ಲಕ್ಷ ಉದ್ಯೋಗ ಭರವಸೆ
ಅಹಮದಾಬಾದ್ ನವೆಂಬರ್ 26: ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಶನಿವಾರ ಗಾಂಧಿನಗರದಲ್ಲಿ ತನ್ನ 'ಸಂಕಲ್ಪ ಪತ್ರ' ಅಥವಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಇಂದು ಕೇಸರಿ ಪಕ್ಷದ ಪ್ರಣಾಳಿಕೆಯನ್ನು ಮಂಡಿಸಿದರು.
ಆಡಳಿತ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ, ಮಹಿಳೆಯರಿಗೆ ಒಂದು ಲಕ್ಷ ಸರ್ಕಾರಿ ಉದ್ಯೋಗಗಳು, ಕೃಷಿ-ಮಾರುಕಟ್ಟೆ ಮೂಲಸೌಕರ್ಯಕ್ಕಾಗಿ 10,000 ಕೋಟಿ, ನೀಲಿ ಆರ್ಥಿಕ ಉದ್ಯಮಗಳ ಕಾರಿಡಾರ್, EWS/OBC ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಭರವಸೆಗಳನ್ನು ನೀಡಿದೆ.
ಬಿಜೆಪಿ ತನ್ನ ಸಂಕಲ್ಪ ಪತ್ರದ ಅಡಿಯಲ್ಲಿ ಬಡವರಿಗೆ ಪ್ರತ್ಯೇಕ ನಿಧಿ, ಶಿಕ್ಷಣ, ಏಮ್ಸ್ ಮಟ್ಟದ ವೈದ್ಯಕೀಯ ಸೌಲಭ್ಯಗಳು ಮತ್ತು ಸೌರಾಷ್ಟ್ರದ ಜೊತೆಗೆ ದಕ್ಷಿಣ ಗುಜರಾತ್ನಲ್ಲಿ ನೀರಾವರಿಗೆ ಭರವಸೆ ನೀಡಿದೆ. ರಾಜ್ಯದಲ್ಲಿ 20 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಭರವಸೆಯನ್ನೂ ನೀಡಿದೆ.

ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಾಗ ನಡ್ಡಾ ಗುಜರಾತ್ ಅನ್ನು 'ಬದಲಾವಣೆ ಮಾಡುವವರ ನಾಡು' ಎಂದು ಕರೆದರು. ಗುಜರಾತ್ನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿಯವರ ಉದಾಹರಣೆಯನ್ನು ಉಲ್ಲೇಖಿಸಿದರು. ಗುಜರಾತ್ ದೇಶಕ್ಕೆ ರಾಜಕೀಯ ನಿರ್ದೇಶನ ನೀಡಿದೆ ಎಂದೂ ಅವರು ಹೇಳಿದ್ದಾರೆ.
"ಗುಜರಾತ್ನ ಪ್ರಗತಿಗಾಗಿ, ನಾವು ಗುಜರಾತ್ನ ಆರ್ಥಿಕತೆ ಸುಧಾರಿಸಲು ರಾಜ್ಯವನ್ನು ವಿದೇಶಿ ನೇರ ಬಂಡವಾಳ ಹೂಡಿಕೆಯ ತಾಣವನ್ನಾಗಿ ಮಾಡುತ್ತೇವೆ. ಸಂಭಾವ್ಯ ಬೆದರಿಕೆಗಳು ಮತ್ತು ಭಯೋತ್ಪಾದಕ ಸಂಘಟನೆಗಳು ಮತ್ತು ಭಾರತ ವಿರೋಧಿ ಶಕ್ತಿಗಳ ಸ್ಲೀಪರ್ ಸೆಲ್ಗಳನ್ನು ಗುರುತಿಸಲು ಮತ್ತು ತೊಡೆದುಹಾಕಲು ನಾವು ಆಮೂಲಾಗ್ರೀಕರಣ ವಿರೋಧಿ ಸೆಲ್ ಅನ್ನು ರಚಿಸುತ್ತೇವೆ"ಎಂದು ಬಿಜೆಪಿ ಮುಖ್ಯಸ್ಥರು ಭರವಸೆ ನೀಡಿದರು.

'ಈಡೇರಿಸಬಹುದಾದ ಭರವಸೆ ಮಾತ್ರ ಬಿಜೆಪಿ ನೀಡುತ್ತದೆ'
ಗುಜರಾತಿ ಜನರಿಗೆ ಹಲವಾರು ಭರವಸೆಗಳನ್ನು ಘೋಷಿಸಿದ ನಂತರ, ಸಿಎಂ ಭೂಪೇಂದ್ರ ಪಟೇಲ್ ಮಾತನಾಡಿ, "ಕಳೆದ ಎರಡು ದಶಕಗಳಲ್ಲಿ ನಾವು (ಬಿಜೆಪಿ) ಇಲ್ಲಿನ ಜನರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದ್ದೇವೆ. ಇವು ಪೊಳ್ಳು ಭರವಸೆಗಳಲ್ಲ. ಆದರೆ ಪ್ರಧಾನಿ ಮೋದಿಯವರು ನಿಗದಿಪಡಿಸಿದ ಅಭಿವೃದ್ಧಿ ಮಾರ್ಗಸೂಚಿಯ ಕಡೆಗೆ ನಮ್ಮ ಕಾರ್ಯಗಳು ನಡೆಯುತ್ತವೆ. ನಾವು ಈಡೇರಿಸಬಹುದಾದ ಭರವಸೆಯನ್ನು ಮಾತ್ರ ನಾವು ನೀಡುತ್ತೇವೆ'' ಎಂದರು.

ಗೊಂದಲದಲ್ಲಿ
ಕಳೆದ 27 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಈ ಬಾರಿ ಮತದಾರರ ಮನಸ್ಸಿನಲ್ಲಿ ಬದಲಾವಣೆಯ ಭಾವನೆ ದೊಡ್ಡ ಸವಾಲಾಗಿದೆ. 2002-2014ರ ಅವಧಿಯಲ್ಲಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿ ಅವರು ಗುಜರಾತ್ನ ಅಭಿವೃದ್ಧಿ ಮಾದರಿಯಿಂದ ಜನಪ್ರಿಯತೆಯನ್ನು ಗಳಿಸಿದರು. ಅವರು 2014 ರಲ್ಲಿ ಪ್ರಧಾನಿಯಾದ ನಂತರ, ಬಿಜೆಪಿ ಮುಖ್ಯಮಂತ್ರಿಯಾಗಿ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವ ಹಲವಾರು ಮುಖಗಳನ್ನು ಗುಜರಾತ್ ಜನರ ಮುಂದೆ ತಂದಿದೆ.
ಆದರೆ ಈ ಬಾರಿಯೂ ತ್ರಿಕೋನ ಸ್ಪರ್ಧೆಯಲ್ಲಿ ಯಾರನ್ನು ಜನ ಮೆಚ್ಚಿಕೊಳ್ಳುತ್ತಾರೆ. ಯಾರಿಗೆ ಅವಕಾಶ ನೀಡುತ್ತಾರೆ. ಯಾರನ್ನು ಗೆಲ್ಲಿಸುತ್ತಾರೆ. ಯಾವ ಪಕ್ಷ ಯಾರೊಂದಿಗೆ ಪೈಪೋಟಿಗಿಳಿಯಲಿದೆ ಎಂಬುದು ಮಾತ್ರ ಇನ್ನೂ ಪ್ರಶ್ನೆಯಾಗೇ ಉಳಿಸಿದೆ. ಬಹುತೇಕರು ಹೇಳುವಂತೆ ಈ ಬಾರಿಯೂ ಮತದಾರರು ಬಿಜೆಪಿ ಭದ್ರಕೋಟೆಯನ್ನು ಒಡೆಯುವುದಿಲ್ಲ ಎಂಬಂತೆಯೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಬಿಜೆಪಿಗೆ ಈ ಹಿಂದೆ ಜಯ
ಕಳೆದ 2017 ರ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಕಾಂಗ್ರೆಸ್ 77 ಸ್ಥಾನಗಳೊಂದಿಗೆ ಸಮೀಪಿಸಿತ್ತು. ಚುನಾವಣೆಯ ನಂತರ, ಕಾಂಗ್ರೆಸ್ನಿಂದ 14 ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು ಪ್ರಸ್ತುತ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವದಲ್ಲಿ, ಪಕ್ಷವು 111 ಶಾಸಕರನ್ನು ಹೊಂದಿದೆ. 182 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.ಸ