Saffron Gandhi Topi; ಏನಿದು ಬಿಜೆಪಿ ನಾಯಕರ ಹೊಸ ಟ್ರೆಂಡ್?
ಬೆಂಗಳೂರು, ಏಪ್ರಿಲ್ 06; ಬುಧವಾರ ಬಿಜೆಪಿಯ 42ನೇ ಸಂಸ್ಥಾಪನಾ ದಿನ. ದೇಶದ ವಿವಿಧ ರಾಜ್ಯಗಳು, ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದು ಕೇಸರಿ ಗಾಂಧಿ ಟೋಪಿ.
ಹೌದು ಕೆಲವು ದಿನಗಳಿಂದ ಬಿಜೆಪಿ ನಾಯಕರ ಕೇಸರಿ ಗಾಂಧಿ ಟೋಪಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಕೇಸರಿ ಗಾಂಧಿ ಟೋಪಿ ಧರಿಸಿದ್ದರು.
ಬಿಜೆಪಿಯ ಪದಾಧಿಕಾರಿಗಳು, ಕೇಂದ್ರ ಸಚಿವರು, ಸಂಸದರು ಧರಿಸಿದ್ದ ಕೇಸರಿ ಗಾಂಧಿ ಟೋಪಿ ಜನರ ಗಮನ ಸೆಳೆಯಿತು. ಏನಿದು ಬಿಜೆಪಿ ನಾಯಕರ ಹೊಸ ಟ್ರೆಂಡ್? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಹ ಕೇಸರಿ ಗಾಂಧಿ ಟೋಪಿ ಹಾಕಿಕೊಂಡಿದ್ದರು.

ಸಂಸ್ಥಾಪನಾ ದಿನದ ಅಂಗವಾಗಿ ಕರ್ನಾಟಕದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಸಚಿವ ಡಾ. ಅಶ್ವತ್ಥ್ ನಾರಾಯಣ್ ಮುಂತಾದವರು ಕೇಸರಿ ಗಾಂಧಿ ಟೋಪಿ ತೊಟ್ಟು ಗಮನ ಸೆಳೆದರು.
ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಜೊತೆ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಜೆ. ಪಿ. ನಡ್ಡಾ ಸಹ ಕೇಸರಿ ಗಾಂಧಿ ಟೋಪಿ ಧರಿಸಿದ್ದರು.

ಉತ್ತರ ಪ್ರದೇಶ ಚುನಾವಣೆ; ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಂಪು ಟೋಪಿ ಬಗ್ಗೆ ಭಾರೀ ಚರ್ಚೆಯಾಗಿತ್ತು. ಸಮಾಜವಾದಿ ಪಕ್ಷದ ನಾಯಕರು ಕೆಂಪು ಟೋಪಿ ಧರಿಸುತ್ತಾರೆ. ಈ ಬಗ್ಗೆ ಚುನಾವಣಾ ಪ್ರಚಾರದಲ್ಲಿ ಆರೋಪ ಪ್ರತ್ಯಾರೋಪಗಳು ನಡೆದಿದ್ದವು.
ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಪ್ರಧಾನಿ ನರೇಂದ್ರ ಮೋದಿ, "ಕೆಂಪು ಟೋಪಿ ಧರಿಸುವವರು ಕೆಂಪು ದೀಪಗಳಲ್ಲಿ (ಅಧಿಕಾರ) ಮಾತ್ರ ಆಸಕ್ತಿ ಹೊಂದಿದ್ದಾರೆ ಮತ್ತು ಜನರ ಸಮಸ್ಯೆಗಳಲ್ಲಿ ಅಲ್ಲ ಎಂಬುದು ಇಡೀ ಉತ್ತರ ಪ್ರದೇಶಕ್ಕೆ ತಿಳಿದಿದೆ" ಎಂದು ಹೇಳಿದ್ದರು.

ಚುನಾವಣೆ ಮುಕ್ತಾಯಗೊಂಡು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಗುಜರಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ್ದರು. ಆಗ ಅವರು ಕೇಸರಿ ಗಾಂಧಿ ಟೋಪಿ ಧರಿಸಿ ಗಮನ ಸೆಳೆದಿದ್ದರು.
ಹೇಗಿದೆ ಕೇಸರಿ ಟೋಪಿ?; ಮಹಾತ್ಮ ಗಾಂಧಿ ಬಿಳಿಯ ಟೋಪಿ ಧರಿಸುತ್ತಿದ್ದರು. ಗಾಂಧಿ ಟೋಪಿ ಮಾದರಿಯಲ್ಲಿರುವ ಬಿಜೆಪಿ ನಾಯಕರು ಧರಿಸುವ ಟೋಪಿ ಕೇಸರಿ ಬಣ್ಣದಲ್ಲಿದೆ. ಅದರ ಮೇಲೆ ಬಿಳಿಯ ಬಣ್ಣದಲ್ಲಿ ಬಿಜೆಪಿ ಎಂದು ಬರೆಯಲಾಗಿದೆ. ಜೊತೆಗೆ ಬಿಜೆಪಿ ಪಕ್ಷದ ಕಮಲದ ಹೂವಿನ ಚಿನ್ಹೆ ಇದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಈ ಟೋಪಿ ಧರಿಸಿ ಬಿಜೆಪಿ ನಾಯಕರು ಪಕ್ಷದ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕೇಸರಿ ಗಾಂಧಿ ಟೋಪಿ ಬಗ್ಗೆ ಕೇಳಿದಾಗ ಪಕ್ಷದ ನಾಯಕರು, ಈ ಹಿಂದೆಯೂ ನಮ್ಮ ಪಕ್ಷದ ನಾಯಕರು, ಪದಾಧಿಕಾರಿಗಳು ಕೇಸರಿ ಗಾಂಧಿ ಟೋಪಿ ಧರಿಸುತ್ತಿದ್ದರು. ಈಗ ಧರಿಸುತ್ತಿರುವ ಟೋಪಿ ಹೊಸ ವಿನ್ಯಾಸ ಒಳಗೊಂಡಿದೆ. ಟೋಪಿಯಲ್ಲಿ ಪಕ್ಷದ ಚಿನ್ಹೆ ಮುದ್ರಿಸಲಾಗಿದೆ. ಇದನ್ನು ಬಳಸಿದ ಮೇಲೆ ಜೋಪಾನವಾಗಿ ಇಟ್ಟುಕೊಳ್ಳಬಹುದು ಎಂದು ಹೇಳಿದ್ದಾರೆ.
ಪಕ್ಷ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಹೊಸ ಹೊಸ ಸಾಮಾಗ್ರಿಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಹಿಂದೆ ಶರ್ಟ್ ಮೇಲೆ ಧರಿಸುವ ಪಕ್ಷದ ಚಿನ್ಹೆಯ ಮಾದರಿಯ ಸಾಮಾಗ್ರಿ ಇತ್ತು. ಈಗ ಸುಧಾರಿತ ಭಾಗವಾಗಿ ಕೇಸರಿ ಗಾಂಧಿ ಟೋಪಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಎಪಿ ಟೋಪಿ; ದೆಹಲಿಯಲ್ಲಿ ಅಧಿಕಾರದಲ್ಲಿರುವ ಮತ್ತು 2022ರ ಚುನಾವಣೆಯಲ್ಲಿ ಗೆದ್ದು ಪಂಜಾಬ್ನಲ್ಲಿ ಅಧಿಕಾರ ಹಿಡಿದಿರುವ ಆಮ್ ಆದ್ಮಿ ಪಕ್ಷದ ನಾಯಕರು ಬಿಳಿಯ ಗಾಂಧಿ ಟೋಪಿ ಧರಿಸುತ್ತಾರೆ. ಅದರಲ್ಲಿ ನಾನು ಆಮ್ ಆದ್ಮಿ, ಆಮ್ ಆದ್ಮಿ ಪಕ್ಷ ಮುಂತಾದ ಬರಹಳಿವೆ.
ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಈಗ ಕಾಂಗ್ರೆಸ್ಗಿಂತ ಎಎಪಿಯೇ ಸ್ಪರ್ಧೆ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ನಾಯಕರು ಕೇಸರಿ ಗಾಂಧಿ ಟೋಪಿ ಧರಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications