ಜಮ್ಮು-ಕಾಶ್ಮೀರ: ಉಗ್ರರಿಂದ ಬಿಜೆಪಿ ಮುಖಂಡನ ಬರ್ಬರ ಹತ್ಯೆ
ಕಿಶ್ತ್ವಾರ್(ಜಮ್ಮು ಮತ್ತು ಕಾಶ್ಮೀರ), ನವೆಂಬರ್ 02: ಜಮ್ಮು ಕಾಶ್ಮೀರ ರಾಜ್ಯದ ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿಹಾರ್ ಮತ್ತು ಅವರ ಸಹೋದರರನನ್ನು ಉಗ್ರರು ಗುಂಡಿಕ್ಕಿ ಕೊಂದ ಬರ್ಬರ ಘಟನೆ ಗುರುವಾರ ರಾತ್ರಿ ನಡೆದಿದೆ.
ಸಂಜೆ ಸುಮಾರು 8 ಗಂಟೆಯ ಸಮಯಕ್ಕೆ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಎಂಬಲ್ಲಿ ಈ ಘಟನೆ ನಡೆದಿದ್ದು, ತಕ್ಷಣವೇ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು.
52 ವರ್ಷ ವಯಸ್ಸಿನ ಅನಿಲ್ ಪರಿಹಾರ್ ಮತ್ತು ಅವರ ಹಿರಿಯ ಸಹೋದರ 55 ವರ್ಷ ವಯಸ್ಸಿನ ಅಜಿತ್ ಎಂಬುವವರನ್ನು ಗುಂಡಿಕ್ಕಿ ಸಾಯಿಸಲಾಗಿದೆ. ಅಂಗಡಿಗೆ ಹೋಗಿದ್ದ ಈ ಇಬ್ಬರು ಸಹೋದರರನ್ನು ಅವರು ಮನೆಗೆ ಬರುವ ದಾರಿಯಲ್ಲೇ ಕಾದು ಕುಳಿತು ಉಗ್ರರು ಕೊಂದಿದ್ದಾರೆ.

ಕಿಶ್ತ್ವಾರ್ ದಲ್ಲಿ ಕೋಮು ಸಂಘರ್ಷಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಆಗಸ್ಟ್ 2013 ರಲ್ಲಿ ನಡೆದ ಕೋಮು ಗಲಭೆಯ ನಂತರ ಈ ಭಾಗದಲ್ಲಿ ಇಂಥ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಕಿಶ್ತ್ವಾರ್ ದಲ್ಲಿ ಇದೀಗ ಪರಿಸ್ಥಿತಿ ಉದ್ವಿಗ್ನವಾಗಿರುವ ಕಾರಣ ಸ್ಥಳಕ್ಕೆ ಸೇನೆಯನ್ನು ನಿಯೋಜಿಸಲು ಸ್ಥಳೀಯ ಆಡಳಿತ ಮನವಿ ಮಾಡಿದೆ.
ಘಟನೆಯ ಹಿನ್ನಲೆಯಲ್ಲಿ ಕಿಶ್ತ್ವಾರ್ ನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications