ಜಲ್ಲಿಕಟ್ಟು ನಿಷೇಧ ರದ್ದುಗೊಳಿಸಲು ಕೇಂದ್ರ ಸರ್ಕಾರ ಸಮ್ಮತಿ
ಚೆನ್ನೈ, ಜ. 08: ಪ್ರಾಣಿ ಪ್ರಿಯ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ತಮಿಳುನಾಡಿನ ಸಾಂಪ್ರದಾಯಿಕ ಹೋರಿ ಕಾಳಗ (ಜಲ್ಲಿ ಕಟ್ಟು) ಕ್ಕೆ ಕೇಂದ್ರ ಪರಿಸರ ಖಾತೆ ಸಚಿವಾಲಯ ಶುಕ್ರವಾರ ಅನುಮತಿ ನೀಡಿದೆ. ಸಂಕ್ರಾಂತಿ(ಪೊಂಗಲ್) ಸಂದರ್ಭದಲ್ಲಿ ಮದುರೈ ಸೇರಿದಂತೆ ಅನೇಕ ಕಡೆಗಳಲ್ಲಿ ಜಲ್ಲಿಕಟ್ಟು ಆಚರಿಸಲಾಗುತ್ತದೆ.
ತಮಿಳುನಾಡು ಅಸೆಂಬ್ಲಿ ಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಘಟಕ ಒತ್ತಡ ಹೇರಿ ಕೇಂದ್ರ ಸರ್ಕಾರದ ಸಮ್ಮತಿ ಪಡೆದಿದೆ ಎಂಬ ಕೂಗು ಕೇಳಿ ಬಂದಿದೆ. ಪ್ರಾಣಿಗಳಿಗೆ ಹಿಂಸೆ ನೀಡುವ ಆಚರಣೆ ಬೇಡ ಎಂದು ಪರಿಸರ ಹಾಗೂ ಪ್ರಾಣಿ ಪ್ರಿಯ ಸಂಘಟನೆಗಳು ಕಾನೂನು ಸಮರಕ್ಕೆ ಮುಂದಾಗಿವೆ.[ಜಲ್ಲಿಕಟ್ಟು ,ಅಪಾಯಕಾರಿ ರೋಮಾಂಚನಕಾರಿ : ಟ್ವೀಟ್ಸ್ ]

ಪಶು ಸಂಗೋಪಣೆ ಸಮಿತಿ ಸದಸ್ಯರು ಕೂಡಾ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದು ಅನುಮತಿ ನೀಡದಂತೆ ಕೋರಿತ್ತು. ಆದರೆ, ಪ್ರತಿರೋಧದ ನಡುವೆಯೂ ಈ ಸಾಂಪ್ರದಾಯಿಕ ಆಚರಣೆಗೆ ಅನುಮತಿ ಸಿಕ್ಕಿದೆ.
ತಮಿಳುನಾಡಿನಲ್ಲಿ ಸಂಕ್ರಾಂತಿ ಸಂದರ್ಭದಲ್ಲಿ ನಡೆಯುವ ವಾರ್ಷಿಕ ಜಲ್ಲಿ ಕಟ್ಟು ಗೂಳಿ ಕಾಳಗ ಸ್ಪರ್ಧೆ ಪುನರಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ಡಿಎಂಕೆ ಅಧ್ಯಕ್ಷ ಕರುಣಾನಿಧಿ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪೊಂಗಲ್ ಹಬ್ಬದ ವೇಳೆ ನಡೆಯುವ ಜಲ್ಲಿಕಟ್ಟನ್ನು ತಮಿಳುನಾಡಿನ ಮಧುರೈ ಸೇರಿದಂತೆ ಹಲವು ಪ್ರಾಂತಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿತ್ತು. ಜಲ್ಲಿಕಟ್ಟಿನಲ್ಲಿ ಗೂಳಿಗಳನ್ನು ಹಿಂಸಿಸಲಾಗುತ್ತದೆ ಎಂಬುದನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್ ಕಳೆದ ಮೇನಲ್ಲಿ ಇದರ ಆಯೋಜನೆಗೆ ನಿಷೇಧವನ್ನು ವಿಧಿಸಿತ್ತು.
ತಮಿಳುನಾಡಿನ ಪರಂಪರೆಯಲ್ಲಿ ಜಲ್ಲಿಕಟ್ಟು ಹಾಸು ಹೊಕ್ಕಿದೆ. ಹಬ್ಬದ ಸಂದರ್ಭದಲ್ಲಿ ಬೇಕಾದ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜಲ್ಲಿ ಕಟ್ಟು ಕ್ರೀಡೆಯಿಂದ ಪ್ರಾಣಿಗಳಿಗೆ ಹಾನಿಯಾಗುವುದಿಲ್ಲ ಎಂದು ತಮಿಳುನಾಡು ಸರ್ಕಾರದಿಂದ ಭರವಸೆ ಸಿಗಬೇಕಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications