ಬಿಜೆಪಿ ಧರ್ಮದ ರೇಖೆ ಎಳೆದು ದೇಶವನ್ನು ವಿಭಜಿಸುತ್ತಿದೆ: ಪಿ.ಚಿದಂಬರಂ
ತಿರುವನಂತಪುರಂ, ಏಪ್ರಿಲ್ 26: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುತ್ತಿದೆ ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಜನ ಮೋಚನಾ ಯಾತ್ರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
"ಮಹಿಳೆಯರು, ದಲಿತರು, ಮಕ್ಕಳು, ಬುಡಕಟ್ಟು ಜನಾಂಗದವರು ಮತ್ತು ಅಲ್ಪಸಂಖ್ಯಾತರು ಮೋದಿ ಸರ್ಕಾರದಲ್ಲಿ ಭಯದಲ್ಲಿ ಬದುಕುತ್ತಿದ್ದಾರೆ. ಬಿಜೆಪಿ ಭಾರತವನ್ನು ಧರ್ಮದ ರೇಖೆಯ ಆಧಾರದಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದೆ. ಜಾತ್ಯತೀತ ಭಾರತವನ್ನು ಕೋಮುವಾದಿ ಭಾರತವನ್ನಾಗಿ ಮಾಡಲು ಮೋದಿ ಮತ್ತು ಬಿಜೆಪಿಯವರು ಪ್ರಯಯತ್ನಿಸುತ್ತಿದ್ದಾರೆಂದು" ಅವರು ಹೇಳಿದ್ದಾರೆ.

"ಭಾರತದ ಇತಿಹಾಸದಲ್ಲಿ ಎಂದಿಗೂ ಜನರು ಇಷ್ಟೊಂದು ಭಯದಿಂದ ಬದುಕುತ್ತಿರಲಿಲ್ಲ. ಆದರೆ ಕಳೆದ ನಾಲ್ಕು ವರ್ಷಗಳಿಂದ ಭಯದ ನೆರಳಿನಲ್ಲೇ ಜನರು ಬದುಕುವಂತಾಗಿದೆ. ರಾಜ್ಯಗಳಿಗೆ ನೀಡಬೇಕಾದ ಬಾಕಿ ಅನುದಾನವನ್ನೂ ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂಬುದು ಸಹ ಆತಂಕದ ವಿಷಯವಾಗಿದೆ' ಎಂದು ಅವರು ಹೇಳಿದರು.
'ನ್ಯೂ ಇಂಡಿಯಾ' ಎಂಬ ಘೋಷವಾಕ್ಯದಲ್ಲಿ ತನ್ನ ವೈಯಕ್ತಿಕ ಉದ್ದೇಶಗಳಿಗೆ ಪ್ರಚಾರ ನೀಡುತ್ತಿದೆ. ಆದರೆ ಅವೆಲ್ಲವೂ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿವೆ ಎಂದು ಸಹ ಅವರು ಲೇವಡಿ ಮಾಡಿದರು.
ಕೇರಳದಲ್ಲಿ ರಾಜಕೀಯ ಉದ್ದೇಶಕ್ಕಾಗಿ ಎದುರಾಳಿ ಪಕ್ಷದ ಕಾರ್ಯಕರ್ತರನ್ನು ಕೊಲೆ ಮಾಡುತ್ತಿರುವ ಆತಂಕಕಾರಿ ಘಟನೆಗಳು ಹೆಚ್ಚಾಗಿವೆ ಎಂದು ಸಹ ಅವರು ಕಳವಳ ವ್ಯಕ್ತಪಡಿಸಿದರು.












Click it and Unblock the Notifications