ಬಿಜೆಪಿಯನ್ನು ನನ್ನ ಗುರುವೆಂದು ಪರಿಗಣಿಸಿದ್ದೇನೆ: ರಾಹುಲ್ ಗಾಂಧಿ ಅಚ್ಚರಿ ಹೇಳಿಕೆ
ನವದೆಹಲಿ, ಡಿಸೆಂಬರ್ 31: ಬಿಜೆಪಿಯನ್ನು ನನ್ನ ಗುರುವೆಂದು ಪರಿಗಣಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿಕೆ ನೀಡಿದರು.
ರಾಷ್ಟ್ರ ರಾಜಧಾನಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, 'ನಾನು ಭದ್ರತೆಯಲ್ಲಿ ಲೋಪ ಮಾಡಿದ್ದೇನೆ. ಪ್ರೋಟೊಕಾಲ್ ಮೀರಿದ್ದೇನೆಂದು ಭದ್ರತಾ ಪಡೆಗಳಿಂದ ಬಿಜೆಪಿ ಹೇಳಿಕೆ ನೀಡಿಸುತ್ತಿದೆ. ವಿನಾಕರಣ ನನ್ನ ಮೇಲೆ ಗೂಬಿ ಕೂರಿಸಿ ಪ್ರಕರಣ ದಾಖಲಿಸುತ್ತಿದೆ' ಎಂಬುದಾಗಿ ರಾಹುಲ್ ಆರೋಪಿಸಿದರು.
'ನೀವು ಬುಲೆಟ್ ಪ್ರೂಫ್ ವಾಹನದಲ್ಲಿ ಹೋಗಿ ಎಂದು ಗೃಹ ಸಚಿವಾಲಯ ಹೇಳುತ್ತದೆ. ನಾನು ಅದನ್ನು ಹೇಗೆ ಮಾಡಲಿ? ನಾನು ಯಾತ್ರೆಗೆ ಕಾಲ್ನಡಿಗೆಯಲ್ಲಿ ಸಾಗಬೇಕು. ನನ್ನ ಭದ್ರತೆಗಾಗಿ ಏನು ಮಾಡಬೇಕೆಂದು ಅವರಿಗೆ ತಿಳಿದಿದೆ. ಅವರು ಅದರಲ್ಲೂ ವಿವಾದವನ್ನು ಸೃಷ್ಟಿಸಲು ಯತ್ನ ನಡೆಸಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ವಿರುದ್ಧ ದೇಶದೊಳಗೆ ಮೌನ ಅಲೆ
ಬಿಜೆಪಿ ವಿರುದ್ಧ ವಿಪಕ್ಷಗಳ ಒಗ್ಗೂಡುವಿಕೆಗೆ ಕರೆ ನೀಡಿದ ರಾಹುಲ್ ಗಾಂಧಿ, 'ಬಿಜೆಪಿ ವಿರುದ್ಧ ದೇಶದೊಳಗೆ ಮೌನ ಅಲೆ ಇದೆ' ಎಂದು ಹೇಳಿದರು.
ಬಿಜೆಪಿಗೆ ಪರ್ಯಾಯವಾಗುವ ದೃಷ್ಟಿಕೋನದಲ್ಲಿ ಪ್ರತಿಪಕ್ಷಗಳು ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸಬೇಕು ಎಂದೂ ಅವರು ಪ್ರತಿಪಾದಿಸಿದರು.
ಭಾರತ್ ಜೋಡೋ ಯಾತ್ರೆಗೆ ಸಿಕ್ಕಿರುವ ವ್ಯಾಪಕ ಬೆಂಬಲದ ಬಗ್ಗೆ ಕೇಳಿದಾಗ, 'ಪ್ರತಿಪಕ್ಷದ ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಜೊತೆಗಿದ್ದಾರೆ' ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರ ನಡುವಿನ ಪರಸ್ಪರ ಗೌರವದ ಬಗ್ಗೆಯೂ ಮಾತನಾಡಿದ ರಾಹುಲ್ ಗಾಂಧಿ, ಇತರ ವಿರೋಧ ಪಕ್ಷದ ನಾಯಕರನ್ನು ನೆಮ್ಮದಿಯಾಗಿರಿಸಲು ಇದು ಕಾಂಗ್ರೆಸ್ನ ಪ್ರಯತ್ನವಾಗಿದೆ ಎಂದು ತಿಳಿಸಿದರು.
|
ದ್ವೇಷದ ವಿರುದ್ಧ ರಾಷ್ಟ್ರವನ್ನು ಒಗ್ಗೂಡಿಸುವ ಗುರಿ
ಯಾತ್ರೆಯು ದ್ವೇಷದ ವಿರುದ್ಧ ರಾಷ್ಟ್ರವನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ ಎಂದು ಅವರು ಪುನರುಚ್ಚರಿಸಿದರು.
'ಇದು ನಮಗೆ ಯಶಸ್ವಿ ಯಾತ್ರೆಯಾಗಿದೆ. ಇದು ಬಹಳಷ್ಟು ಸಾಧಿಸಿದೆ. ನಿರುದ್ಯೋಗ ಸಮಸ್ಯೆಗಳು ಮತ್ತು ಬೆಲೆ ಏರಿಕೆಯ ಸಮಸ್ಯೆಗಳು ದೇಶದಲ್ಲಿ ವ್ಯಾಪಕವಾಗಿದೆ. ಈ ಕುರಿತಾದ ಅರಿವನ್ನು ಯಾತ್ರೆ ಮೂಡಿಸಿದೆ' ಎಂದು ಅವರು ಹೇಳಿದರು.
ದೇಶಕ್ಕೆ ಹೊಸ ಯೋಚಿಸುವ ಮಾರ್ಗವೊಂದನ್ನು ಈ ಯಾತ್ರೆ ಸೃಷ್ಟಿಸಿದೆ ಎಂದೂ ರಾಹುಲ್ ಅಭಿಪ್ರಾಯ ಪಟ್ಟರು.

ಸತ್ಯದೊಂದಿಗೆ ಹೋರಾಡಲು ಬಿಜೆಪಿಗೆ ಸಾಧ್ಯವಿಲ್ಲ
ತಮ್ಮ ಪಾದಯಾತ್ರೆ ಬಗ್ಗೆ ಬಿಜೆಪಿಯವರ ಗೇಲಿಗಳಿಗೆ ಪ್ರತಿಕ್ರಿಯಿಸಿದ ರಾಹುಲ್, ಬಿಜೆಪಿ ಬಹಳಷ್ಟು ಪ್ರಚಾರಗಳನ್ನು ಮಾಡುತ್ತದೆ. ಆದರೆ, ಸತ್ಯದ ವಿರುದ್ಧ ಹೋರಾಡಲು ಅದಕ್ಕೆ ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದರು.
'ಅವರ ಬಳಿ ಸಾಕಷ್ಟು ಹಣವಿದೆ. ಆದರೆ, ಅವರು ಏನು ಮಾಡಿದರೂ ಸತ್ಯದೊಂದಿಗೆ ಹೋರಾಡಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.
'ಆರ್ಎಸ್ಎಸ್ ಮತ್ತು ಬಿಜೆಪಿ ಅವರ ಟೀಕೆಗಳಿಗಾಗಿ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ, ಇದು ನಮ್ಮನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅವರು ನನ್ನ ಗುರುಗಳು. ಅವರು ಏನು ಮಾಡಬಾರದು ಎಂಬುದನ್ನು ಅವರು ನನಗೆ ನಿರಂತರವಾಗಿ ನೆನಪಿಸುತ್ತಾರೆ' ಎಂದು ರಾಹುಲ್ ತಿಳಿಸಿದರು.
ದೆಹಲಿಯಲ್ಲಿ ಟೀ ಶರ್ಟ್ ಧರಿಸಿ ನಡೆದಾಡುತ್ತಿರುವ ಬಗ್ಗೆ ಪದೇ ಪದೇ ಕೇಳಿದ ಪ್ರಶ್ನೆಗಳಿಗೆ, ನನಗೆ ಇನ್ನೂ ಚಳಿಯಾಗಿಲ್ಲ. ಹಾಗೆ ಆದರೆ ನಾನು ಹೆಚ್ಚು ಬಟ್ಟೆ ಧರಿಸುತ್ತೇನೆ ಎಂದು ಹೇಳಿದರು.

2800 ಕಿಮೀ ಕ್ರಮಿಸಿದ ಭಾರತ್ ಜೋಡೊ ಯಾತ್ರೆ
ಭಾರತ್ ಜೋಡೋ ಯಾತ್ರೆಗೆ ಅಭೂತ ಪೂರ್ವ ಯಶಸ್ಸು ಸಿಕ್ಕಿದೆ. ತಮಿಳು ನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯು ರಾಷ್ಟ್ರ ರಾಜಧಾನಿ ದೆಹಲಿ ತಲುಪಿದೆ. ತಮಿಳು ನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣಗಳಲ್ಲಿ ಯಾತ್ರೆ ಸಾಗಿದೆ. ಈಗಾಗಲೇ 2800 ಕಿಮೀಯಷ್ಟು ದೂರ ಕ್ರಮಿಸಿರುವ ಯಾತ್ರೆ 3500 ಕಿಮೀಯಷ್ಟು ಸಾಗುವ ಗುರಿಯನ್ನು ಹೊಂದಿದೆ. ಕಾಶ್ಮೀರದ ಕನ್ಯಾಕುಮಾರಿಯಲ್ಲಿ ಯಾತ್ರೆ ಕೊನೆಗಳ್ಳಲಿದೆ.












Click it and Unblock the Notifications