ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?!
Recommended Video

ಅಹ್ಮದಾಬಾದ್, ನವೆಂಬರ್ 28: ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಲಿರುವ ರಾಹುಲ್ ಗಾಂಧಿ, ತಾವೇ ಆಡಿದ ಮಾತುಗಳಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರಾ? ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ರಾಹುಲ್ ಗಾಂಧಿ ಆಡಿದ್ದ ಬಾಲಿಶ ಹೇಳಿಕೆಗಳನ್ನೇ ಇದೀಗ ಕೆದಕಿ, ಗುಜರಾತ್ ಚುನಾವಣೆಯ ಹೊತ್ತಲ್ಲಿ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆಯಾ?
ಹೌದು, ಗುಜರಾತ್ ಚುನಾವಣೆಗೆ ಈಗಾಗಲೇ ದಿನಗಣನೆ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್ ಉಭಯ ಪಕ್ಷಗಳೂ ಬಿರುಸಿನ ಪ್ರಚಾರಕ್ಕೆತೊಡಗಿವೆ. ಈ ಮಧ್ಯೆ, ಉಗ್ರ ಹಫೀಜ್ ಸಯೀದ್ ಬಿಡುಗಡೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯ ಎಂಬಂತೆ ಬಿಂಬಿಸಿ, 'hugplomacy'ಗೆ ಸೋಲುಂಟಾಗಿದೆ ಎಂದು ಜರೆದಿರುವ ರಾಹುಲ್ ಗಾಂಧಿ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 2010 ರ ಸಮಯದಲ್ಲಿ ಆಡಿದ್ದ ಮಾತುಗಳನ್ನು ಇದೀಗ 'ರಿವೈಂಡ್' ಮಾಡಿರುವ ಬಿಜೆಪಿಯ ಕೇಂದ್ರ ಕಾನೂನು ಸಚಿವ, ಬಿಜೆಪಿಯ ರವಿಶಂಕರ್ ಪ್ರಸಾದ್ ಕಾಂಗ್ರೆಸ್ ಯುವರಾಜರನ್ನು ಲೇವಡಿ ಮಾಡಿದ್ದಾರೆ!
|
ಏನಿದು hugplomacy ಹೇಳಿಕೆ?
ಜಾಮತ್ ಉಲ್ ದಾವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ, ಮುಂಬೈ ಸ್ಫೋಟದ ರೂವಾರಿ, ಲಷ್ಕರ್ ಇ ತೊಯ್ಬಾ ಸ್ಥಾಪಕರಲ್ಲೊಬ್ಬನಾದ ಹಫೀಜ್ ಸಯೀದ್ ನನ್ನು ಪಾಕ್ ಸರ್ಕಾರ, 'ಸ್ಪಷ್ಟ ಸಾಕ್ಷ್ಯಾಧಾರವಿಲ್ಲ' ಎಂಬ ಕಾರಣಕ್ಕೆ ಬಿಡುಗಡೆ ಮಾಡಿದೆ. ಇದನ್ನು ಮೋದಿ ಸರ್ಕಾರದ ವೈಫಲ್ಯ ಎಂದಿರುವ ರಾಹುಲ್ ಗಾಂಧಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ಮತ್ತು ಅಪ್ಪುಗೆಗಳು ಯಾವುದೇ ಪರಿಣಾಮ ಬೀರಿಲ್ಲ. ಈ ಅಪ್ಪುಗೆ ಶೈಲಿ ವೈಫಲ್ಯವಾಗಿದೆ ಎಂಬುದನ್ನೇ ವಿಭಿನ್ನವಾಗಿ hugplomacy ಎಂದು ಕರೆದು ಟ್ವೀಟ್ ಮಾಡಿದ್ದರು. ಇದು ಬಿಜೆಪಿ ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು.

2010 ರಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?
2010 ರಲ್ಲಿ, ಆಗಿನ ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಭಾರತಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, ಹಿಲರಿಯವರನ್ನು ಊಟಕ್ಕೆ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಹಾಜರಿದ್ದ ರಾಹುಲ್ ಗಾಂಧಿ ಅವರನ್ನು ಅಮೆರಿಕ ರಾಯಭಾರಿ ಟೊಮೋಥಿ ರೊಯ್ಮರ್, 'ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು' ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ರಾಹುಲ್, 'ಲಷ್ಕರ್ ವಿಷಯ ಬಿಡಿ, ಭಾರತದಲ್ಲಿ ಅದಕ್ಕಿಂತ ಭಯಾನಕವಾದುದು ಹಿಂದೂ ಭಯೋತ್ಪಾದನೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ವಿಕಿಲೀಕ್ಸ್ ಮೂಲಕ ಲೀಕ್ ಆಗಿತ್ತು!
ರಾಹುಲ್ ಗಾಂಧಿ ನೀಡಿದ್ದ ಈ ವಿವಾದಾತ್ಮಕ ಹೇಳಿಕೆ ವಿಕಿಲೀಕ್ಸ್ ಮೂಲಕ ಬಯಲಿಗೆ ಬಂದಿತ್ತು. 'ಭಾರತದಲ್ಲಿ ಲಷ್ಕರ್ ಇ ತೊಯ್ಬಾ ಸಂಘಟನೆಗಿಂತ ಭಯಾನಕವಾಗಿರುವುದು ಹಿಂದೂ ಸಂಘಟನೆ. ಹಿಂದೂ ಮೂಲಭೂತವಾದವೇ ಈ ದೇಶಕ್ಕೆ ಬಹುದೊಡ್ಡ ಅಪಾಯವಾಗಬಹುದು' ಎಂದು ರಾಹುಲ್ ಗಾಂಧಿ ಹೇಳಿದ್ದರು ಎಂದು ಪತ್ರಿಕೆಯೊಂದು ಬರೆದಿತ್ತು.

ಈಗೇಕೆ ನೆನಪಾಯ್ತು ಈ ವಿವಾದ?
ಈ ವಿವಾದ ಈಗ ನೆನಪಾಗಿರುವ ಹಿಂದೆ ಗುಜರಾತ್ ಚುನಾವಣೆಯಲ್ಲಿ ಜನರಿಗೆ ರಾಹುಲ್ ಗಾಂಧಿಯವರ ಅಪ್ರಬುದ್ಧ ಹೇಳಿಕೆಗಳನ್ನು ನೆನಪಿಸುವ ಉದ್ದೇಶವಿರುವುದು ಸುಳ್ಳಲ್ಲ. ಅದರೊಂದಿಗೆ, ಒಂದಾನೊಂದು ಕಾಲದಲ್ಲಿ ಹಿಂದೂಗಳೇ ಲಷ್ಕರ್ ಭಯೋತ್ಪಾದಕರಿಗಿಂತ ಅಪಾಯಕಾರಿ ಎಂದಿದ್ದ ರಾಹುಲ್, ಇದೀಗ ಹಫೀಜ್ ಬಿಡುಗಡೆಯ ಬಗ್ಗೆ ಮೋದಿ ಸರ್ಕಾರದ ಕಾಲೆಳೆಯುವ ಪ್ರಯತ್ನ ಮಾಡುತ್ತಿರುವುದೇಕೆ ಎಂಬ ಪ್ರಶ್ನೆಯೂ ಇರದೇ ಇಲ್ಲ. ಒಟ್ಟಿನಲ್ಲಿ ತಾವೇ ತೋಡಿದ್ದ ವಿವಾದದ ಹಳ್ಳದಲ್ಲಿ ಇದೀಗ ರಾಹುಲ್ ಗಾಂಧಿ ತಾವೇ ಬೀಳುವಂಥ ಪರಿಸ್ಥಿತಿ ತಂದುಕೊಂಡಿದ್ದಾರೆ.












Click it and Unblock the Notifications