ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು
ಅಮೇಠಿ, ಅಕ್ಟೋಬರ್ 10: ಆಡಳಿತರೂಢ ಬಿಜೆಪಿ ನಾಯಕರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅವರ ಸ್ವ ಕ್ಷೇತ್ರ ಅಮೇಥಿಯಲ್ಲೇ ಅಬ್ಬರಿಸಿದ್ದಾರೆ.
ಅಮೇಥಿಯಲ್ಲಿ ಬಿಜೆಪಿ ಆಯೋಜಿಸಿದ್ದ ರ್ಯಾಲಿಯಲ್ಲಿ, 'ಸ್ವ ಕ್ಷೇತ್ರವನ್ನು ಕಡೆಗಣಿಸಿರುವ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬೆರಳು ತೋರಿಸುತ್ತಿದ್ದಾರೆ' ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, 'ಕಾಂಗ್ರೆಸ್ ಪಕ್ಷ ರೈತರ ಜಮೀನನ್ನು ಕಸಿದುಕೊಂಡಿದೆ' ಎಂದು ಆರೋಪಿಸಿದ್ದಾರೆ.

"ಗೆಲುವು ಸಾಧಿಸಿದ ಅಭ್ಯರ್ಥಿ ತಮ್ಮ ಕ್ಷೇತ್ರವನ್ನು ಕಡೆಗಣಿಸಿದ್ದನ್ನು ಮತ್ತು ಸೋತ ಅಭ್ಯರ್ಥಿಯೊಬ್ಬರು ತಮ್ಮ ಕ್ಷೇತ್ರವನ್ನು ಮಗುವಿನಂತೆ ಆರೈಕೆ ಮಾಡುತ್ತಿರುವುದನ್ನು ನಾನು ಇದೇ ಮೊದಲು ನೋಡುತ್ತಿರುವುದು," ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಹುಲ್ ಗಾಂಧಿಯನ್ನು ರ್ಯಾಲಿಯಲ್ಲಿ ಛೇಡಿಸಿದ್ದಾರೆ.
ಅತ್ತ ಮೋದಿ ತವರು ಕ್ಷೇತ್ರ ವಡೋದರದಲ್ಲಿ ರಾಹುಲ್ ಗಾಂಧಿ ಗುಜರಾತ್ ಮಾದರಿಯ ಅಭಿವೃದ್ಧಿಯನ್ನು ಪ್ರಶ್ನಿಸುತ್ತಿದ್ದರೆ, ಇತ್ತ ಅಮೇಥಿಯಲ್ಲಿ ಯೋಗಿ ಆದಿತ್ಯನಾಥ್, ಇರಾನಿ, ಶಾ ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದಿದ್ದಾರೆ.
ಕೇಂದ್ರ ಸರಕಾರವನ್ನು ಪ್ರಶ್ನಿಸುವ ಮುನ್ನ ನಿಮ್ಮ ಸ್ವ ಕ್ಷೇತ್ರದಲ್ಲಿ ಯಾಕೆ ಅಭಿವೃದ್ಧಿಯಾಗಿಲ್ಲ ಎಂಬುದಕ್ಕೆ ಉತ್ತರಿಸಿ ಎಂದು ಇರಾನಿ ರಾಹುಲ್ ರನ್ನು ಪ್ರಶ್ನಿಸಿದ್ದಾರೆ.
ಅಖಿಲೇಶ್ ಯಾದವ್ ಸರಕಾರ ಸೈಕಲ್ ಕಂಪನಿಗೆ ಜಮೀನನ್ನು ರೈತರಿಂದ ಪಡೆದುಕೊಂಡು ಕೊಟ್ಟಿತ್ತು. ಆದರೆ ಕಂಪೆನಿ ಮುಚ್ಚಿದಾಗ ಈ ಜಮೀನನ್ನು ರಾಜೀವ್ ಗಾಂಧಿ ಫೌಂಡೇಷನ್ ಗೆ ನೀಡಲಾಯಿತು ಎಂದು ಹೇಳಿದ ಇರಾನಿ, ಸ್ವ ಕ್ಷೇತ್ರವನ್ನೇ ಅಭಿವೃದ್ಧಿ ಮಾಡದವರು ದೇಶವನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಾತ್ರ ಅಮೇಥಿಯಲ್ಲಿ ಅಭಿವೃದ್ಧಿ ಆರಂಭವಾಗಿದೆ ಎಂದೂ ಇರಾನಿ ಹೇಳಿದ್ದಾರೆ.












Click it and Unblock the Notifications