ಕಳೆದ 20 ವರ್ಷಗಳಲ್ಲಿ ತಾಲಿಬಾನ್ ಸ್ವಲ್ಪವೂ ಬದಲಾಗಿಲ್ಲ: ರಾವತ್
ನವದೆಹಲಿ, ಆಗಸ್ಟ್ 25: ಕಳೆದ 20 ವರ್ಷಗಳಲ್ಲಿ ತಾಲಿಬಾನ್ ಸ್ವಲ್ಪವೂ ಬದಲಾಗಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲಿದೆ ಎನ್ನುವ ಸಂಗತಿ ಮುಂಚೆಯೇ ತಿಳಿದಿತ್ತು ಎಂದು ಹೇಳಿದ್ದಾರೆ. ಆದರೆ ಇಷ್ಟು ಬೇಗನೆ ತಾಲಿಬಾನಿಗಳ ತೆಕ್ಕೆಗೆ ದೇಶ ಜಾರುವುದೆಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.
ಇ-ವೀಸಾ ಇದ್ದವರಿಗೆ ಮಾತ್ರ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಲು ಅವಕಾಶ
ಇದೇ ಸಂದರ್ಭದಲ್ಲಿ ಅವರು ಕ್ವಾಡ್ ರಾಷ್ಟ್ರಗಳು ಭಯೋತ್ಪಾದನೆ ಮಟ್ಟ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಕರೆ ನೀಡಿದ್ದಾರೆ.
ಕಳೆದ 20 ವರ್ಷಗಳಲ್ಲಿ ತಾಲಿಬಾನ್ ಒಂಚೂರೂ ಬದಲಾಗಿಲ್ಲ, ಅವರ ಸಹವರ್ತಿಗಳು ಬದಲಾಗಿದ್ದಾರಷ್ಟೇ ಎಂದ ರಾವತ್, ಈ ಪ್ರಾಂತ್ಯದಲ್ಲಿ ಭಯೋತ್ಪಾದನಾ ಮುಕ್ತ ವಾತಾವರಣ ನಿರ್ಮಾಣಕ್ಕೆ ಭಾರತ ಬದ್ಧವಾಗಿದೆ ಎಂದರು.
ಅಫ್ಘಾನಿಸ್ತಾನ ಬಿಕ್ಕಟ್ಟಿನಿಂದಾಗಿ ಅಲ್ಲಿನ ಉಗ್ರ ಚಟುವಟಿಕೆಗಳು ಭಾರತಕ್ಕೆ ಪ್ರವೇಶಿಸುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ. ಅಂಥಾ ಯಾವುದೇ ಉಗ್ರಚಟುವಟಿಕೆಗಳು ಭಾರತ ಪ್ರವೇಶಿಸದಂತೆ ತಡೆಹಿಡಿಯಲಾಗುವುದು ಎಂದು ಅವರು ಭರವಸೆ ನೀಡಿದರು.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಗೆ ಮಾನ್ಯತೆ ನೀಡುವುದರ ಕುರಿತು ಭಾರತ ಕಾಡು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಕಟ್ಟರ್ ಪಂತಿ ಸಂಘಟನೆ ಹೇಗೆ ವರ್ತಿಸುತ್ತದೆ ಮತ್ತು ಇತರ ಪ್ರಜಾಪ್ರಭುತ್ವ ರಾಷ್ಟ್ರಗಳು ಅದರ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತವೆ ಎಂಬುದನ್ನು ನೋಡುವುದಾಗಿ ಭಾರತ ಹೇಳಿದೆ. . ಸೋಮವಾರ, ಪ್ರಧಾನಿ ಮೋದಿ ಅವರು ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಅಫ್ಘಾನಿಸ್ತಾನ ಸೇರಿದಂತೆ ದ್ವಿಪಕ್ಷೀಯ, ಬಹುಪಕ್ಷೀಯ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ.
ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಬೇರೆ ರಾಷ್ಟ್ರಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿರುವ ತಾಲಿಬಾನ್, ಭಾರತ ಬಯಸುವುದಾದರೆ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ಅದರ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ.
ಯಾರ ವಿರುದ್ಧವೂ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಯಾವುದೇ ದೇಶಕ್ಕೆ ನಾವು ಬಿಡುವುದಿಲ್ಲ. ಇದು ಸ್ಪಷ್ಟ, ಅಫ್ಘಾನಿಸ್ತಾನದಲ್ಲಿ ಭಾರತ ಹಲವು ಯೋಜನೆಗಳನ್ನು, ನಿರ್ಮಾಣಗಳನ್ನು ಮತ್ತು ಮೂಲಭೂತ ಸೌಕರ್ಯ ಯೋಜನೆಗಳನ್ನು ಮಾಡಿದೆ.
ಭಾರತ ಬಯಸುವುದಾದರೆ ಅಪೂರ್ಣಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲಿ, ಏಕೆಂದರೆ ಯೋಜನೆಗಳು ಜನರ ಪರವಾಗಿದೆ ಎಂದು ವಕ್ತಾರ ಶಹೀನ್ ಪಾಕಿಸ್ತಾನದ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉರ್ದುವಿನಲ್ಲಿ ಹೇಳಿದ್ದಾರೆ.
ಕಳೆದ ಸೋಮವಾರ ಅಫ್ಘಾನಿಸ್ತಾನವನ್ನು ತಾಲಿಬಾನೀಯರು ವಶಪಡಿಸಿಕೊಂಡ ನಂತರ ಭಾರತ ಬಗ್ಗೆ ನೀಡುತ್ತಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ.
ತಾಲಿಬಾನ್ ಉಗ್ರರೊಂದಿಗೆ ಮಾತುಕತೆ, ಸಂವಹನಕ್ಕೆ ಸಿದ್ಧ ಎಂದು ಭಾರತ ಸರ್ಕಾರ ಈಗಾಗಲೇ ಸೂಚನೆ ನೀಡಿದ್ದರೂ ಕೂಡ ತಾಲಿಬಾನ್ ಒಂದು ಅಧಿಕೃತ ಸಂಘಟನೆಯಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದೆ. ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ವೃತ್ತಿಪರರನ್ನು ಭಾರತ ಇತ್ತೀಚೆಗೆ ಹಿಂದಕ್ಕೆ ಕರೆಸಿಕೊಂಡಿತ್ತು.