ಅತ್ಯಾಚಾರ, ಕೊಲೆ ಅಪರಾಧಿಗಳ ಬಿಡುಗಡೆಗೆ ಗೃಹ ವ್ಯವಹಾರಗಳ ಸಚಿವಾಲಯದ ಅನುಮೋದನೆ!
ನವದೆಹಲಿ, ಅ.18: ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬವನ್ನು ಕೊಲೆ ಮಾಡಿದ 11 ಮಂದಿ ಅಪರಾಧಿಗಳು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಾಗ ಪೆರೋಲ್ನಲ್ಲಿ ಸಾವಿರ ದಿನಗಳ ಕಾಲ ಜೈಲಿನಿಂದ ಹೊರಬಂದಿದ್ದಾರೆ ಎಂದು ನ್ಯಾಯಾಲಯದ ದಾಖಲೆ ಬಹಿರಂಗಪಡಿಸಿದೆ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅನುಮೋದನೆಯ ನಂತರ ಈ ವರ್ಷದ ಆರಂಭದಲ್ಲಿ 11 ಮಂದಿ ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಆದರೆ ಕೇಂದ್ರೀಯ ತನಿಖಾ ದಳ ಮತ್ತು ವಿಶೇಷ ನ್ಯಾಯಾಲಯವು ಇಂತಹ ಘೋರ ಅಪರಾಧ ಎಸಗಿದ್ದವರ ಬಿಡುಗಡೆಯನ್ನು ವಿರೋಧಿಸಿದೆ.
ಜುಲೈ 11 ರಂದು ರಾಜ್ಯ ಸರ್ಕಾರ ಅನುಮೋದನೆಯನ್ನು ಕೋರಿದ ಎರಡು ವಾರಗಳಲ್ಲಿ ಗೃಹ ಸಚಿವಾಲಯ ಬಿಡುಗಡೆಗೆ ಅನುಮತಿ ನೀಡಿದೆ ಎಂದು ದಾಖಲೆಗಳು ತೋರಿಸಿವೆ. ಇದಕ್ಕೆ ಗುಜರಾತ್ನ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದರು, ಆದರೂ, ಸ್ವಾತಂತ್ರ್ಯ ದಿನದಂದು ಈ ಅಪರಾಧಿಗಳು ಬಿಡುಗಡೆಯಾಗಿ ಹೊರ ಬಂದರು.
ಈ ಹನ್ನೊಂದು ಮಂದಿ ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೂರು ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ.

ಸನ್ನಡತೆ ಆಧಾರದಲ್ಲಿ ಅತ್ಯಾಚಾರ, ಕೊಲೆ ಆರೋಪಿಗಳ ಬಿಡುಗಡೆ
ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬವನ್ನು ಕೊಲೆ ಮಾಡಿದ್ದ ಅಪರಾಧಿಗಳು 14 ವರ್ಷಗಳ ಕಾಲ ಜೈಲಿನಲ್ಲಿದ್ದರು. ಈ ಅಪರಾಧಿಗಳ ನಡವಳಿಕೆ ಉತ್ತಮವಾಗಿದೆ ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಹೇಳಿದೆ.
ಈ ಅಪರಾಧಿಗಳನ್ನು ಈ ವರ್ಷದ ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡಲಾಗಿತ್ತು. ಸಿಬಿಐ ಕಳೆದ ವರ್ಷ ಅವರ ಅಕಾಲಿಕ ಬಿಡುಗಡೆಯನ್ನು ತೀವ್ರವಾಗಿ ವಿರೋಧಿಸಿತ್ತು. ಅವರು ಎಸಗಿರುವ ಘೋರ, ಭೀಕರ ಮತ್ತು ಗಂಭೀರ ಅಪರಾಧವನ್ನು ದಾಖಲೆಗಳು ಎತ್ತಿ ತೋರಿಸಿವೆ.

ಅಪರಾಧಿಗಳ ಬಿಡುಗಡೆ ಸಮಾಜದ ಮೇಲೆ ಗಂಭೀರ ಪರಿಣಾಮ
ವಿಶೇಷ ನ್ಯಾಯಾಧೀಶರು ಅಪರಾಧಿಗಳ ಬಿಡುಗಡೆಯನ್ನು ವಿರೋಧಿಸಿದ್ದರು. "ಈ ಅಪರಾಧವನ್ನು ಸಂತ್ರಸ್ತೆ ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ಮಾತ್ರ ಎಸಗಲಾಗಿದೆ. ಈ ಪ್ರಕರಣದಲ್ಲಿ ಅಪ್ರಾಪ್ತ ಮಕ್ಕಳನ್ನು ಸಹ ಉಳಿಸಲಾಗಿಲ್ಲ" ಎಂದು ನ್ಯಾಯಾಧಿಶರು ಬೊಟ್ಟು ಮಾಡಿ ತೋರಿಸಿದ್ದರು.
"ಇದು ದ್ವೇಷದ ಅಪರಾಧ ಮತ್ತು ಮಾನವೀಯತೆ, ಮನುಷ್ಯತ್ವದ ವಿರುದ್ಧದ ಕೆಟ್ಟ ರೂಪ. ಇದು ಸಮಾಜದ ಮೇಲೆ ತೀವ್ರ ಪರಿಣಾಮ ಬೀರುತ್ತದೆ" ಎಂದು ವಿಶೇಷ ನ್ಯಾಯಾಧೀಶ ಆನಂದ್ ಎಲ್ ಯಾವಲ್ಕರ್ ಕಳೆದ ವರ್ಷ ಮಾರ್ಚ್ನಲ್ಲಿ ಗೋಧ್ರಾ ಉಪ ಕಾರಾಗೃಹದ ಅಧೀಕ್ಷಕರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಅಪರಾಧಿಗಳ ಬಿಡುಗಡೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ
2008 ರಲ್ಲಿ ಬಿಲ್ಕಿಸ್ ಬಾನೊ ಅವರ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದವರ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳನ್ನು ಶೀಘ್ರ ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವಾಲಯ (ಎಂಎಚ್ಎ) ಅನುಮೋದನೆ ನೀಡಿದೆ ಎಂದು ತಿಳಿಸಿ ಬೆನ್ನಲ್ಲೇ ಪ್ರತಿಪಕ್ಷಗಳು ಕೇಂದ್ರದ ಮೇಲೆ ದಾಳಿ ನಡೆಸಿವೆ.
ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು "ಈ ಸರ್ಕಾರ ಏನು ಮಾಡುತ್ತಿದೆ ಎಂಬುದರ ಬಗ್ಗೆ ನನಗೆ ಆಶ್ಚರ್ಯವಿಲ್ಲ" ಎಂದು ಹೇಳಿದ್ದಾರೆ.
ಡಿ ವೈ ಚಂದ್ರಚೂಡ್ ಮುಂದಿನ ಸಿಜೆಐ ಎಂಬುದನ್ನು ಬೊಟ್ಟು ಮಾಡಿರುವ ಕಪಿಲ್ ಸಿಬಲ್, ಈ ಸರ್ಕಾರ ಏನು ಮಾಡುತ್ತಿದೆ ಎಂಬುದರ ಬಗ್ಗೆ ಇನ್ಯಾವ ಆಶ್ಚರ್ಯವಿಲ್ಲ. ಅತ್ಯಾಚಾರಿಗಳಿಗೆ - ಕೊಲೆಗಾರರಿಗೆ ಪರಿಹಾರವನ್ನು ನೀಡುವುದು ಇದರ ಕೆಲಸ ಎಂದಿದ್ದಾರೆ.
ಮುಂದುವರೆದು. ಚಂದ್ರಚೂಡ್ ಜೆ ಅಧಿಕಾರ ವಹಿಸಿಕೊಂಡಾಗ ಇನ್ಯಾವುದೇ ಹೊಸ ಭರವಸೆ ಮೂಡಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ.

ಗರ್ಭಿಣಿಯ ಮೇಲೆ ಮೃಗಗಳಂತೆ ವರ್ತಿಸಿದ್ದ ಅಪರಾಧಿಗಳು
11 ಮಂದಿಯನ್ನು ದೋಷಿ ಎಂದು ತೀರ್ಪು ನೀಡಿದ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಮತ್ತು 2004 ರ ನಂತರ ಮುಂಬೈನಲ್ಲಿ ತನಿಖೆ ನಡೆಸಿ ವಿಚಾರಣೆ ನಡೆಸಿದ ಕೇಂದ್ರೀಯ ತನಿಖಾ ದಳ (ಸಿಬಿಐ) ಆಕ್ಷೇಪಣೆಗಳ ಹೊರತಾಗಿಯೂ ಆಗಸ್ಟ್ನಲ್ಲಿ ಅಪರಾಧಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಸೋಮವಾರ ಸಲ್ಲಿಸಿದ ಅಫಿಡವಿಟ್ ಬಹಿರಂಗಪಡಿಸಿದೆ.
2002 ರ ಗುಜರಾತ್ ಗಲಭೆಗಳ ಸಮಯದಲ್ಲಿ ಹಿಂಸಾಚಾರದಿಂದ ಓಡಿಹೋಗುವಾಗ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಾಗ ಬಿಲ್ಕಿಸ್ ಬಾನೋ 21 ವರ್ಷದವರಾಗಿದ್ದರು ಮತ್ತು ಐದು ತಿಂಗಳ ಗರ್ಭಿಣಿಯಾಗಿದ್ದರು. ಈ ಅಪರಾಧಿಗಳಿಂದ ಕೊಲ್ಲಲ್ಪಟ್ಟ ಆಕೆಯ ಏಳು ಕುಟುಂಬ ಸದಸ್ಯರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದರು.
ಅಪರಾಧಿಗಳ ಬಿಡುಗಡೆಯಾದ ಎರಡು ದಿನಗಳ ನಂತರ, ಬಿಲ್ಕಿಸ್ ಬಾನೊ ತನ್ನ ವಕೀಲರ ಮೂಲಕ, 'ಇತ್ತೀಚಿನ ಬೆಳವಣಿಗೆಯು ನ್ಯಾಯದ ಮೇಲಿನ ನಂಬಿಕೆಯನ್ನು ಅಲುಗಾಡಿಸಿದೆ' ಎಂದು ಹೇಳಿದ್ದರು.












Click it and Unblock the Notifications