ಭಾರತ್ ಜೋಡೋ ಯಾತ್ರೆಗೆ ಆಹ್ವಾನಕ್ಕಾಗಿ ಧನ್ಯವಾದ ಹೇಳಿ, ಶುಭ ಹಾರೈಸಿದ ಅಖಿಲೇಶ್, ಮಾಯಾವತಿ
ನವದೆಹಲಿ, ಜ. 02: ಮಂಗಳವಾರ ಉತ್ತರ ಪ್ರದೇಶಕ್ಕೆ ಕಾಂಘ್ರೆಸ್ನ ಭಾರತ್ ಜೋಡೋ ಯಾತ್ರೆ ಪ್ರವೇಶಿಸಲಿದೆ. ಇಲ್ಲಿನ ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಪಾದಯಾತ್ರೆಯ ಭಾಗವಾಗುವಂತೆ ಈ ಹಿಂದೆಯೇ ರಾಹುಲ್ ಗಾಂಧಿ ಆಹ್ವಾನ ನೀಡಿದ್ದರು. ಇದಕ್ಕೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಯಾತ್ರೆಗೆ ಶುಭ ಕೋರಿದ್ದಾರೆ.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಅಖಿಲೇಶ್ ಯಾದವ್, ಮಾಯಾವತಿ ಜೊತೆಯಾಗುವುದು ಅನುಮಾನ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಗಾಜಿಯಾಬಾದ್ನ ಲೋನಿ ಗಡಿಯ ಮೂಲಕ ಉತ್ತರ ಪ್ರದೇಶವನ್ನು ಜನವರಿ ಮೂರಕ್ಕೆ ಪ್ರವೇಶಿಸಲಿದೆ. ಯಾತ್ರೆಗೆ ಸೇರಲು ಆಹ್ವಾನ ನೀಡಿದ್ದಕ್ಕೆ ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಧ್ಯಕ್ಷೆ ಮಾಯಾವತಿ ಕಾಂಗ್ರೆಸ್ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, "ಭಾರತ್ ಜೋಡೋ ಯಾತ್ರೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು ಮತ್ತು ಭಾರತ್ ಜೋಡೋ ಅಭಿಯಾನದ ಯಶಸ್ಸಿಗೆ ಶುಭಾಶಯಗಳು. ಭಾರತವು ಕೇವಲ ಭೌಗೋಳಿಕ ವಿಸ್ತಾರಕ್ಕಿಂತ ಹೆಚ್ಚಿನದು. ಇದು ಪ್ರೀತಿ, ಅಹಿಂಸೆ, ಸಹಾನುಭೂತಿ, ಸಹಕಾರ ಮತ್ತು ಸಾಮರಸ್ಯದಿಂದ ಒಂದುಗೂಡಿದೆ. ಈ ಯಾತ್ರೆಯು ನಮ್ಮ ದೇಶದ ಈ ಸಂಸ್ಕೃತಿಯನ್ನು ಸಂರಕ್ಷಿಸುವ ಗುರಿಯನ್ನು ಸಾಧಿಸುತ್ತದೆ ಎಂದು ಭಾವಿಸುತ್ತೇವೆ" ಎಂದು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ಆಶಿಸಿದ್ದಾರೆ.
— Akhilesh Yadav (@yadavakhilesh) January 2, 2023
ಭಾರತ್ ಜೋಡೋ ಯಾತ್ರೆಗೆ ಶುಭಾಶಯಗಳು ಮತ್ತು ಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಬರೆದ ಪತ್ರಕ್ಕೆ ಧನ್ಯವಾದಗಳು ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರು ಭಾರತ್ ಜೋಡೋ ಯಾತ್ರೆಗೆ ಸೇರಲು ಕಾಂಗ್ರೆಸ್ ಹಿರಿಯ ನಾಯಕರು ಪದೇ ಪದೇ ಮನವಿ ಮಾಡಿದರೂ ಇದರಿಂದ ಇಬ್ಬರು ನಾಯಕರು ದೂರವೇ ಸರಿದಿದ್ದಾರೆ.
ಆದರೂ, ಯಾತ್ರೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇಬ್ಬರು ನಾಯಕರು ಸ್ಪಷ್ಟಪಡಿಸಿಲ್ಲ.
ಕಳೆದ ವಾರ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕಾಂಗ್ರೆಸ್ನಿಂದ ಆಹ್ವಾನ ಬಂದಿದೆ ಎಂಬುದನ್ನೇ ನಿರಾಕರಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ "ಒಂದೇ" ಎಂದಿದ್ದರು. ಆದರೆ ಯಾತ್ರೆಯ ಬಗ್ಗೆ ಉತ್ತಮ ಮಾತುಗಳನ್ನಾಡಿದ್ದರು.
ಅದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ, "ದ್ವೇಷ ಮತ್ತು ಪ್ರೀತಿ ಸಂಪೂರ್ಣವಾಗಿ ವಿರುದ್ಧವಾಗಿವೆ. ಆದರೆ ಅನೇಕ ಜನರು ಪ್ರೀತಿಯನ್ನು ಹಂಚಲು ಬಯಸುತ್ತಾರೆ. ನನಗೆ ಗೊತ್ತು ಅಖಿಲೇಶ್ ಜಿ ಮತ್ತು ಮಾಯಾವತಿ ಜಿ ದ್ವೇಷವನ್ನು ಬಯಸುವುದಿಲ್ಲ" ಎಂದಿದ್ದರು.
ಮಾಯಾವತಿಯವರ ಪ್ರತಿಕ್ರಿಯೆ ಕೂಡ ಸಂಕ್ಷಿಪ್ತವಾಗಿದೆ. "ಭಾರತ್ ಜೋಡೋ ಯಾತ್ರೆಗೆ ಶುಭಾಶಯಗಳು. ರಾಹುಲ್ ಗಾಂಧಿ ಅವರ ಪತ್ರಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ" ಎಂದು ಅವರು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
’’भारत जोड़ो यात्रा’’ के लिए शुभकामनायें तथा श्री राहुल गांधी द्वारा इस यात्रा में शामिल होने की लिखी गई चिट्ठी के लिए उनका धन्यवाद।
— Mayawati (@Mayawati) January 2, 2023
ಇನ್ನು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಹಲವಾರು ವಿರೋಧ ಪಕ್ಷದ ನಾಯಕರು ಸಾಥ್ ನೀಡಿದ್ದಾರೆ. ಶಿವಸೇನೆಯಿಂದ ಆದಿತ್ಯ ಠಾಕ್ರೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಎಂಕೆ ಸ್ಟಾಲಿನ್, ಮಕ್ಕಳ್ ನೀಧಿ ಮೈಯಂನಿಂದ ನಟ, ರಾಜಕಾರಣಿ ಕಮಲ್ ಹಾಸನ್, ಡಿಎಂಕೆಯ ಕನಿಮೋಳಿ, ಆರ್ಬಿಐ ಮಾಜಿ ಗವರ್ನರ್ ಸೇರಿದಂತೆ ಹಲವು ನಟ, ನಟಿಯರು, ಪ್ರಗತಿಪರರು ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ್ದಾರೆ.