2016 : ಸತ್ಯದ ತಲೆ ಮೇಲೆ ಪೆಟ್ಟು ಕೊಟ್ಟ 'ಫೇಕ್' ಸಂದೇಶಗಳು
ಸುಳ್ಳುಸುದ್ದಿಗಳಿಗೆ ರಾಕೆಟ್ ವೇಗ ನೀಡಿದ್ದೇ ಫೇಸ್ ಬುಕ್, ವಾಟ್ಸಪ್. ವಾಟ್ಸಪ್ ಮೂಲಕ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಅಷ್ಟೇ ಅಲ್ಲದೆ, ವಿಧವಿಧವಾದ ಸುಳ್ಳುಸುದ್ದಿಗಳನ್ನು ಹಂಚುವ ವೇದಿಕೆಯಾಗಿ ಕೂಡಾ ಮಾರ್ಪಟ್ಟಿದೆ
ಬೆಂಗಳೂರು, ಡಿಸೆಂಬರ್ 28: ಇಮೇಲ್, ಎಸ್ಎಂಎಸ್ ಮಾತ್ರ ಬಳಕೆ ಇದ್ದ ಕಾಲದಲ್ಲೇ ನಿಧಾನಗತಿಯಲ್ಲಿ ಹಬ್ಬುತ್ತಿದ್ದ ಸುಳ್ಳುಸುದ್ದಿಗಳಿಗೆ ರಾಕೆಟ್ ವೇಗ ನೀಡಿದ್ದೇ ಫೇಸ್ ಬುಕ್, ವಾಟ್ಸಪ್. ವಾಟ್ಸಪ್ ಮೂಲಕ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಅಷ್ಟೇ ಅಲ್ಲದೆ, ವಿಧವಿಧವಾದ ಸುಳ್ಳುಸುದ್ದಿಗಳನ್ನು ಹಂಚುವ ವೇದಿಕೆಯಾಗಿ ಕೂಡಾ ಮಾರ್ಪಟ್ಟಿದೆ. ಇಂಥ ಒಂದಿಷ್ಟು ಸುದ್ದಿಗಳ ಮೆಲುಕು ಇಲ್ಲಿದೆ...
ಟಿವಿ ಮಾಧ್ಯಮಗಳಿಗಂತೂ ಈ ವರ್ಷ ಸಾಕಷ್ಟು ಗಾಳಿ ಸುದ್ದಿಗಳು ಆಹಾರ ಒದಗಿಸಿ, ನಗೆಪಾಟಲಿಗೆ ಈಡಾಯಿತು. ಸತ್ಯಾಸತ್ಯತೆ ಪರಿಶೀಲಿಸದೆ ಮೆಸೇಜ್ ಫಾರ್ವಡ್ ಮಾಡಿ, ಅನೇಕರು ಬೆಸ್ತು ಬಿದ್ದಿದ್ದು ಇದೆ.[ದೇಶ ಕಂಡ ಪ್ರಮುಖ ಪ್ರತಿಭಟನೆಗಳು]
2016ರಲ್ಲಿ ಹಬ್ಬಿದ ಗಾಳಿಸುದ್ದಿಗಳ ಪೈಕಿ 'ನರೇಂದ್ರ ಮೋದಿ ಬೆಸ್ಟ್ ಪಿಎಂ ಎಂದು ಯುನೆಸ್ಕೊ ಘೋಷಿಸಿದೆ' ಎಂಬ ಸುದ್ದಿ ಹೆಚ್ಚು ಹರಿದಾಡಿತ್ತು. ಅಪನಗದೀಕರಣದ ನಂತರವಂತೂ ದಿನಕ್ಕೊಂದು ಗಾಳಿ ಸುದ್ದಿ ಹಬ್ಬಿತು. ಅದರಲ್ಲಿ 2000 ರು ನೋಟಿನಲ್ಲಿ ಜಿಪಿಎಸ್ ಚಿಪ್ ಇದೆ ಎಂಬ ಸುದ್ದಿ ಹೆಚ್ಚು ಕಾಲ ಜೀವಂತ ಇತ್ತು, ಈಗಲೂ ಇದೆ. ಈ ರೀತಿ ಹಂಚಲ್ಪಟ್ಟ ಆದರೆ, ಸುದ್ದಿಯಾಗಬಾರದಿದ್ದ ಸುದ್ದಿಗಳತ್ತ ಒಂದು ನೋಟ ಇಲ್ಲಿದೆ...

ಹೊಸ ನೋಟಿನಲ್ಲಿ ಜಿಪಿಎಸ್ ಚಿಪ್ ಇದೆ
ನವೆಂಬರ್ 8ರ ನಂತರ ನೋಟ್ ಬ್ಯಾನ್ ಸಮಸ್ಯೆಯಲ್ಲಿ ಸಿಲುಕಿದ್ದ ಸಾರ್ವಜನಿಕರಿಗೆ 500 ಹಾಗೂ 2000 ರುಪಾಯಿ ಹೊಸ ನೋಟುಗಳು ಕೈಗೆ ಸೇರುತ್ತಿದ್ದಂತೆ ವಾಟ್ಸಪ್ ಸಂದೇಶವೊಂದು ಹರಿದಾಡಿತು. ಹೋಸ ನೋಟಿನಲ್ಲಿ ಜಿಪಿಎಸ್ ಚಿಪ್ ಇದೆ, ಇದರಿಂದ ಕಪ್ಪು ಹಣವನ್ನು ಟ್ರ್ಯಾಕ್ ಮಾಡಬಹುದು ಎಂಬ ಸುದ್ದಿ ಹಬ್ಬಿತು. ಹಲವು ಮಾಧ್ಯಮಗಳು ಗಂಟೆಗಟ್ಟಲೇ ಚರ್ಚಾಗೋಷ್ಠಿ, ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವು. ಆದರೆ, ಇದು ಸುಳ್ಳು ಸುದ್ದಿ ಎಂದು ಆರ್ ಬಿಐ ಸ್ಪಷ್ಟನೆ ನೀಡಿತು.

ಜನಗಣಮನ ಶ್ರೇಷ್ಠ ರಾಷ್ಟ್ರಗೀತೆ: ಯುನೆಸ್ಕೋ
ಜನಗಣಮನ ಶ್ರೇಷ್ಠ ರಾಷ್ಟ್ರಗೀತೆ ಎಂದು ಯುನೆಸ್ಕೋ ಘೋಷಿಸಿದೆ ಎಂಬ ಸಂದೇಶ ಅನೇಕ ವರ್ಷಗಳಿಂದ ಹರಿದಾಡುತ್ತಿದೆ. ಅನೇಕ ಮಂದಿ ಇದು ಹೆಮ್ಮೆಯ ವಿಷಯ ಎಂದು ಟ್ವೀಟ್ ಮಾಡಿ, ಫೇಸ್ ಬುಕ್ ನಲ್ಲಿ ಹಾಕಿ, ವಾಟ್ಸಪ್ ನಲ್ಲಿ ಹಂಚಿಕೊಂಡರು. ಆದರೆ, ಇದು ಫೇಕ್ ಸುದ್ದಿ ಎಂದು ಸ್ಪಷ್ಟನೆ ಸಿಕ್ಕಿತು.

ಉಗ್ರರಿಂದ ಫೇಸ್ಬುಕ್, ವಾಟ್ಸಪ್ ಹ್ಯಾಕ್
ವಾಟ್ಸಪ್ ಹಾಗೂ ಫೇಸ್ಬುಕ್ ಪ್ರೊಫೈಲ್ ಚಿತ್ರಗಳನ್ನು ದುರ್ಬಳಕೆ ಮಾಡಿಕೊಳ್ಳುವ ತಂತ್ರವನ್ನು ಉಗ್ರರು ಬಳಸುತ್ತಿದ್ದಾರೆ. ದೆಹಲಿ ಪೊಲೀಸರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ಸ್ ಉಗ್ರರು ಪ್ರೊಫೈಲ್ ಹ್ಯಾಕ್ ಮಾಡುವ ನಿಮ್ಮ ವಿವರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಈ ಬಗ್ಗೆ ವಾಟ್ಸಪ್ ಸಿಇಒ ಸಂದೇಶ ನೀಡಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಆದರೆ, ಇದೆಲ್ಲವೂ ಸುಳ್ಳು ಸುದ್ದಿ ಎಂದು ಗುಪ್ತಚರ ಇಲಾಖೆ ಸ್ಪಷ್ಟಪಡಿಸಿತು.

ಉಪ್ಪಿನ ಬಗ್ಗೆ ಕಳವಳ, ಗೊಂದಲ
ನವೆಂಬರ್ ತಿಂಗಳಿನಲ್ಲಿ ಬರೀ ಉಪ್ಪಿನದ್ದೇ ಸುದ್ದಿ, ದೇಶದಲ್ಲಿ ಉಪ್ಪಿನ ಕೊರತೆ ಉಂಟಾಗಿದೆ ಎಂಬ ವಾಟ್ಸಪ್ ಸಂದೇಶದಿಂದ ಭಾರಿ ಗೊಂದಲ, ಸಮಸ್ಯೆ ಎದುರಾಯಿತು. ಒಂದು ಕೆಜಿ ಉಪ್ಪಿನ ದರ ನೂರಾರು ರುಪಾಯಿ ತನಕ ಏರಿತ್ತು. ಮೊದಲಿಗೆ ದೆಹಲಿ, ಉತ್ತರಪ್ರದೇಶ, ಹೈದರಾಬಾದ್ ಹಾಗೂ ಮಹಾರಾಷ್ಟ್ರದಲ್ಲಿ ಉಂಟಾದ ಸಮಸ್ಯೆ ನಂತರ ಇತರೆಡೆಗೂ ಹಬ್ಬಿತು. ಆದರೆ, ಆಯಾ ರಾಜ್ಯಗಳ ಆಡಳಿತ ಮಂಡಳಿಗಳು ಈ ಬಗ್ಗೆ ಸ್ಪಷ್ಟನೆ ನೀಡಿ, ಸಮಸ್ಯೆ ತಿಳಿಗೊಳಿಸಿದರು.

ಕೇಜ್ರಿವಾಲ್ ಮೇಲೆ ಅತ್ಯಾಚಾರ ಆರೋಪ
ಜೂನ್ 8, 1987ರಂದು ಟೆಲಿಗ್ರಾಫ್ ಪತ್ರಿಕೆಯ ಪ್ರತಿಯೊಂದರಲ್ಲಿ ಅರವಿಂದ್ ಕೇಜ್ರಿವಾಲ್ ಬಗ್ಗೆ ಬಂದ ಸುದ್ದಿ ಸಾಕಷ್ಟು ಚರ್ಚೆಗೊಳಪಟ್ಟಿತು. ಐಐಟಿ ವಿದ್ಯಾರ್ಥಿ ಕೇಜ್ರಿವಾಲ್ ಅವರು ಅತ್ಯಾಚಾರ ಎಸಗಿದ್ದರು. ಖರಗ್ ಪುರದ ವಿದ್ಯಾರ್ಥಿಯನ್ನು ಬಂಧಿಸಲಾಗಿತ್ತು ಎಂಬ ಸುದ್ದಿ ಹಬ್ಬಿತ್ತು. ಆದರೆ, ಇದು ಸುಳ್ಳು ಸುದ್ದಿ ಎಂದು ನಂತರ ತಿಳಿಯಿತು.












Click it and Unblock the Notifications