ಆಸ್ಟ್ರೇಲಿಯಾ ಪತ್ರಿಕೆಯದ್ದು 'ದುರುದ್ದೇಶಪೂರಿತ' ವರದಿ ಎಂದ ಭಾರತ
ನವದೆಹಲಿ, ಏಪ್ರಿಲ್ 27: ಭಾರತದಲ್ಲಿನ ಕೋವಿಡ್ ಬಿಕ್ಕಟ್ಟಿನ ಕುರಿತು ಆಸ್ಟ್ರೇಲಿಯನ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ಭಾರತ ಖಂಡಿಸಿದೆ.
ಭಾರತ ಸರ್ಕಾರವು ಕೊರೊನಾ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಇಂತಹ ಸಂದರ್ಭದಲ್ಲಿ ಪ್ರಧಾನಿ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ದೇಶ ಈ ಪರಿಸ್ಥಿತಿಗೆ ಬಂದಿದೆ, ಇನ್ನೂ ಸೋಂಕಿನ ಗಂಭೀರತೆ ಅರ್ಥಮಾಡಿಕೊಂಡಿಲ್ಲ ಎಂದು ಪತ್ರಿಕೆಯಲ್ಲಿ ಬರೆಯಲಾಗಿತ್ತು.
ಇದೀಗ ಭಾರತೀಯ ಹೈಕಮಿಷನ್ ಇದನ್ನು ದುರುದ್ದೇಶಪೂರಿತ , ಆಧಾರರಹಿತ ವರದಿ ಎಂದು ಕರೆದಿದೆ, ಆಸ್ಟ್ರೇಲಿಯಾದ ಪತ್ರಿಕೆಗಳು ಸುಳ್ಳು ಸುದ್ದಿ ಹರಡುತ್ತಿವೆ ಎಂದು ಹೇಳಿದೆ. ಅಂತಹ ಆಧಾರ ರಹಿತ ಲೇಖವನ್ನು ಪ್ರಕಟಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಲಾಗಿದೆ.

ವರದಿಯಲ್ಲಿ ಏನಿತ್ತು?: ದಿ ಆಸ್ಟ್ರಿಯನ್ನಲ್ಲಿ ಏಪ್ರಿಲ್ 25ರಂದು ವರದಿ ಪ್ರಕಟವಾಗಿತ್ತು. ಪ್ರಧಾನಿ ಮೋದಿಯವರು ಲಾಕ್ಡೌನ್ ತೆಗೆದುಹಾಕಿ ಭಾರತವನ್ನು ಸರ್ವನಾಶದತ್ತ ದೂಡುತ್ತಿದ್ದಾರೆ. ಒಂದೆಡೆ ಭಾರತದಲ್ಲಿ ಎರಡನೇ ಅಲೆ ಎದ್ದಿದ್ದು, ಇದರ ನಡುವೆಯೇ ಚುನಾವಣಾ ಮೆರವಣಿಗೆ, ಕುಂಭಮೇಳವನ್ನು ನಡೆಸಿ ಮತ್ತಷ್ಟು ಸೋಂಕನ್ನು ಹೆಚ್ಚಿಸಲು ಕಾರಣವಾಗಿದೆ. ತಜ್ಞರ ಸಲಹೆ ಧಿಕ್ಕಿರಿಸಿದ ಕಾರಣ ಹೇಗೆ ಪರಿಸ್ಥಿತಿ ಕೈಮೀರಿ ಹೋಯಿತು ನೋಡಿ ಎಂದು ಬರೆಯಲಾಗಿದೆ.
ವರದಿಗೆ ಭಾರತದ ಪ್ರತಿಕ್ರಿಯೆ ಏನು?: ಆಸ್ಟ್ರೇಲಿಯಾ ಪತ್ರಿಕೆಯ ಈ ವರದಿ ಕುರಿತು ಸಂಪಾದಕರಿಗೆ ಭಾರತೀಯ ಹೈಕಮಿಷನ್ ಪತ್ರ ಬರೆದಿದೆ. ಸರ್ಕಾರವು ಸರಿಯಾದ ಸಮಯಕ್ಕೆ ತೆಗೆದುಕೊಂಡಿರುವ ಹಲವು ನಿರ್ಧಾರಗಳಿಂದ ಕೋಟ್ಯಂತರ ಜನರ ಪ್ರಾಣ ಉಳಿದಿದೆ. ಭಾರತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುತ್ತಿದ್ದು, ಅದರಿಂದ ಲಕ್ಷಾಂತರ ಮಂದಿಯ ಪ್ರಾಣ ಉಳಿಸಲಾಗುತ್ತಿದೆ. ಈ ಪತ್ರಿಕೆಯ ವರದಿ ಒಪ್ಪಲು ಸಾಧ್ಯವಿಲ್ಲ ಎನ್ನಲಾಗಿದೆ.












Click it and Unblock the Notifications