ಬರ್ಗರಿ ಧರ್ಮನಿಂದನೆ ಪ್ರಕರಣ: ಫರೀದ್ಕೋಟ್ನಲ್ಲಿ ಆರೋಪಿಗೆ ಗುಂಡಿಕ್ಕಿ ಹತ್ಯೆ- ಮೂವರಿಗೆ ಗಾಯ
ಫರೀದ್ಕೋಟ್ ನವೆಂಬರ್ 10: ಬರ್ಗರಿ ಧರ್ಮನಿಂದನೆ ಪ್ರಕರಣದ ಆರೋಪಿ ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್ ಸಿಂಗ್ ಅವರನ್ನು ಗುರುವಾರ ಪಂಜಾಬ್ನ ಫರೀದ್ಕೋಟ್ನಲ್ಲಿ ಅಪರಿಚಿತ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪ್ರದೀಪ್ ಸಿಂಗ್ ಅವರು ಬೆಳಗ್ಗೆ ತಮ್ಮ ಅಂಗಡಿಗೆ ಹೋಗುತ್ತಿದ್ದಾಗ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ.
ಫರೀದ್ಕೋಟ್ ರೇಂಜ್ ಐಜಿ ಪ್ರದೀಪ್ ಕುಮಾರ್ ಯಾದವ್ ಮಾಧ್ಯಮಗಳಿಗೆ ಘಟನೆಯನ್ನು ದೃಢೀಕರಿಸಿದ್ದಾರೆ. "ಇಂದು ಗುಂಡಿನ ದಾಳಿ ನಡೆದು ಪ್ರದೀಪ್ ಸಿಂಗ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜೊತೆಗೆ ಮೂವರು ಗಾಯಗೊಂಡಿದ್ದಾರೆ. ಅವರ ಭದ್ರತಾ ಸಿಬ್ಬಂದಿಯೂ ಪ್ರತೀಕಾರದ ಗುಂಡಿನ ದಾಳಿ ನಡೆಸಿದರು. ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ವೀಕರಿಸಿದ್ದೇವೆ ಮತ್ತು ಕೆಲವು ಸುಳಿವುಗಳನ್ನು ಪಡೆದುಕೊಂಡಿದ್ದೇವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ " ಎಂದಿದ್ದಾರೆ. ಬರ್ಗರಿ ಧರ್ಮನಿಂದನೆ ಪ್ರಕರಣದಲ್ಲಿ ಡೇರಾ ಪ್ರೇಮಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಶಾಂತಿ ಕಾಪಾಡಲು ಮನವಿ
ಈ ಘಟನೆ ಕುರಿತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ. ಪಂಜಾಬ್ ಶಾಂತಿಪ್ರಿಯ ರಾಜ್ಯವಾಗಿದ್ದು, ಇಲ್ಲಿ ಜನರ ಪರಸ್ಪರ ಸಹೋದರತ್ವ ಬಲವಾಗಿದೆ. ಪಂಜಾಬ್ ನ ಶಾಂತಿ ಕದಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಆದರೆ, ಡೇರಾ ಪ್ರೇಮಿ ಪ್ರದೀಪ್ ಹತ್ಯೆಗೆ ಧರ್ಮನಿಂದನೆ ಪ್ರಕರಣದಲ್ಲಿ ನ್ಯಾಯ ಸಿಗದ ಕಾರಣವೇ ಅಥವಾ ವೈಯಕ್ತಿಕ ದ್ವೇಷವೇ ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿಸಿಟಿವಿ ಕ್ಯಾಮೆರಾ ಮೂಲಕ ಹಂತಕರ ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ. ಅವರನ್ನು ವಿಚಾರಣೆಗೊಳಪಡಿಸಿದ ಬಳಿಕವಷ್ಟೇ ಸಂಪೂರ್ಣ ವಿಷಯ ತಿಳಿಯಲಿದೆ. ಅಮೃತಸರದಲ್ಲಿ ಹಿಂದೂ ಮುಖಂಡ ಸುಧೀರ್ ಸೂರಿ ಹತ್ಯೆಯೊಂದಿಗೆ ಒಂದು ವಾರದಲ್ಲಿ ಇದು ಎರಡನೇ ದೊಡ್ಡ ಘಟನೆಯಾಗಿದೆ. ಪಂಜಾಬ್ನಲ್ಲಿ ಕೆಲವು ಅನೈತಿಕ ಶಕ್ತಿಗಳು ಕಾನೂನುಬಾಹಿರ ಘಟನೆಗಳನ್ನು ನಡೆಸುತ್ತಿವೆ.

ಗುರು ಗ್ರಂಥ ಸಾಹಿಬ್ನ ಪವಿತ್ರ ಪುಸ್ತಕ ನಾಪತ್ತೆ
ಜೂನ್ 1, 2015 ರಂದು ಫರೀದ್ಕೋಟ್ನ ಬುರ್ಜ್ ಜವಾಹರ್ ಸಿಂಗ್ ವಾಲಾ ಗ್ರಾಮದ ಗುರುದ್ವಾರದಿಂದ ಗುರು ಗ್ರಂಥ ಸಾಹಿಬ್ನ ಪವಿತ್ರ ಪುಸ್ತಕ ನಾಪತ್ತೆಯಾಗಿತ್ತು. ಮೂರು ತಿಂಗಳ ನಂತರ, ಪವಿತ್ರ ಪುಸ್ತಕದ ವಿರುದ್ಧ ಅವಹೇಳನಕಾರಿ ಭಾಷೆ ಹೊಂದಿರುವ ಪೋಸ್ಟರ್ಗಳನ್ನು ಬುರ್ಜ್ ಜವಾಹರ್ ಸಿಂಗ್ ವಾಲಾ ಮತ್ತು ಬರ್ಗರಿ ಗ್ರಾಮಗಳಲ್ಲಿ ಅಂಟಿಸಲಾಗಿತ್ತು.
ನಂತರ ಅದೇ ವರ್ಷದ ಅಕ್ಟೋಬರ್ನಲ್ಲಿ ಗುರು ಗ್ರಂಥ ಸಾಹಿಬ್ನ ಹಲವಾರು ಪುಟಗಳು ಬಾರ್ಗರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಕಂಡುಬಂದವು. ಇದು ಪಂಜಾಬ್ನಾದ್ಯಂತ ಪ್ರತಿಭಟನೆಗೆ ಕಾರಣವಾಯಿತು. ಪ್ರತಿಭಟನೆ ತೀವ್ರಗೊಂಡಿದ್ದರಿಂದ ಅಕ್ಟೋಬರ್ 14 ರಂದು ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಇಬ್ಬರನ್ನು ಕೊಂದರು. ಆರು ವರ್ಷಗಳ ನಂತರ ಪಂಜಾಬ್ ಪೋಲೀಸ್ ಮತ್ತು ಸಿಬಿಐ ನಡೆಸಿದ ತನಿಖೆಗಳು, ಸಂಶೋಧನೆಗಳು ವ್ಯತಿರಿಕ್ತವಾಗಿರುವುದರಿಂದ ಇನ್ನೂ ನ್ಯಾಯಕ್ಕಾಗಿ ಕಾಯಲಾಗುತ್ತಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪಂಜಾಬ್ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ಸಿರ್ಸಾ ಮೂಲದ ಡೇರಾ ಸಚ್ಚಾ ಸೌದಾ ಮೇಲೆ ಆರೋಪ ಹೊರಿಸಿತ್ತು. ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಮತ್ತು ಇತರ 11 ಪಂಥದ ಅನುಯಾಯಿಗಳನ್ನು ಎಲ್ಲಾ ಮೂರು ಅಪವಿತ್ರ ಪ್ರಕರಣಗಳಲ್ಲಿ ಆರೋಪಿಗಳೆಂದು ಎಸ್ಐಟಿ ಹೆಸರಿಸಿದೆ. ಈ ಮೂರು ಅಪರಾಧ ಪ್ರಕರಣಗಳು ಫರೀದ್ಕೋಟ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

ಫರೀದ್ಕೋಟ್ನಲ್ಲಿ 9 ಡೇರಾ ರಕ್ಷಣೆಗೆ 27 ಪೊಲೀಸರ ನಿಯೋಜನೆ
ಕೆಲ ದಿನಗಳ ಹಿಂದೆ ಫರೀದ್ಕೋಟ್ ಜಿಲ್ಲೆಯಲ್ಲಿ ಡೇರಾ ಅನುಯಾಯಿಗಳ ಕೊಲೆ ಬೆದರಿಕೆ ಬಂದಿದ್ದು, ಹೀಗಾಗಿ 9 ಡೇರಾ ಅನುಯಾಯಿಗಳ ಭದ್ರತೆಗಾಗಿ 27 ಪೊಲೀಸ್ ಸಿಬ್ಬಂದಿಯನ್ನು ಒದಗಿಸಲಾಗಿತ್ತು. ಇಲ್ಲಿಯವರೆಗೆ 3 ಮಂದಿ ಡೇರಾ ಅನುಯಾಯಿಗಳು ಹತ್ಯೆಯಾಗಿದ್ದಾರೆ. ಕೊಟ್ಕಾಪುರ ನಿವಾಸಿ ಡೇರಾ ಅನುಯಾಯಿ ಮಹೇಂದ್ರಪಾಲ್ ಬಿಟ್ಟು ನಾಭಾ ಜೈಲಿನಲ್ಲಿ ಹತ್ಯೆಗೀಡಾಗಿದ್ದರೆ, ಗುರುದೇವ್ ಲಾಲ್ ನಿವಾಸಿ ಬುರ್ಜ್ ಜವಾಹರ್ ಸಿಂಗ್ ವಾಲಾ ಅವರ ಮೇಲೆ ಅಪರಿಚಿತರು ಗುಂಡು ಹಾರಿಸಿದ್ದಾರೆ. ಇಂದು (10 ನವೆಂಬರ್ 2022) ಡೇರಾ ಅನುಯಾಯಿ ಪ್ರದೀಪ್ ಸಿಂಗ್ ಹತ್ಯೆಯಾಗಿದೆ.
ಒಟ್ಟು 6 ಮಂದಿ ದಾಳಿಕೋರರು 3 ಬೈಕ್ಗಳಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಡೇರಾ ಅನುಯಾಯಿ ಪ್ರದೀಪ್ ಸಿಂಗ್ ಸಾವನ್ನಪ್ಪಿದ್ದಾರೆ. ಮಾಜಿ ಕೌನ್ಸಿಲರ್ ಅಮರ್ ಸಿಂಗ್ ಮತ್ತು ಗನ್ ಮ್ಯಾನ್ ಹಕಮ್ ಸಿಂಗ್ ಅವರಿಗೂ ಗುಂಡುಗಳು ತಾಗಿವೆ. ಗಾಯಗೊಂಡಿರುವ ಅವರನ್ನು ಗುರು ಗೋಬಿಂದ್ ಸಿಂಗ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಘಟನೆಯ ಬಳಿಕ ಲೂಧಿಯಾನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ಅಮರ್ ಸಿಂಗ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಮೃತ ಪ್ರದೀಪ್ ಸಿಂಗ್ ಅವರ ಎರಡನೇ ಗನ್ ಮ್ಯಾನ್ ಜಗದೀಶ್ ಸಿಂಗ್ ಬಾತ್ ರೂಂಗೆ ಹೋಗಿದ್ದರಿಂದ ಅಲ್ಲಿ ಅವರು ಇರಲಿಲ್ಲ. ಇದರಿಂದ ಆತ ಬದುಕುಳಿದಿದ್ದಾನೆ. ಘಟನೆ ಬಳಿಕ ಪೊಲೀಸರು ಹಾಗೂ ಜಿಲ್ಲಾಡಳಿತದಲ್ಲಿ ಸಂಚಲನ ಮೂಡಿದೆ. ಘಟನೆಯ ನಂತರ ಲೂಧಿಯಾನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಿಂದೂ ಮುಖಂಡರ ಭದ್ರತೆಯನ್ನು ಪೊಲೀಸರು ಹೆಚ್ಚಿಸಿದ್ದಾರೆ.

ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಸರ್ಕಾರ ವಿಫಲ
ಕೆಲವು ದಿನಗಳ ಹಿಂದೆ ಅಮೃತಸರದಲ್ಲಿ ಶಿವಸೇನೆ ನಾಯಕ ಸುಧೀರ್ ಸೂರಿ ಅವರ ಮೇಲೆ ಗೂಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಸೂರಿ ದೇವಸ್ಥಾನದ ಮುಮದೆ ಧರಣಿ ನಡೆಸುತ್ತಿದ್ದಾಗ ದಾಳಿಕೋರರು ದೇವಸ್ಥಾನದ ಹೊರಗೆ ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದರು. ಘಟನೆಯಿಂದ ಸಾಕಷ್ಟು ಕೋಲಾಹಲ ಉಂಟಾಗಿತ್ತು. ಈ ಘಟನೆ ಬಳಿಕ ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹಿಂದೂ ಸಂಘಟನೆಗಳು ಹೇಳಿವೆ.












Click it and Unblock the Notifications