ಬಾಂಗ್ಲಾದೇಶ ಪ್ರಧಾನಿ ಭಾರತದಲ್ಲಿ.. ಕೆಲವೇ ದಿನದಲ್ಲಿ ಇಂಗ್ಲೆಂಡ್ಗೆ ಎಸ್ಕೇಪ್?
ಭಾರತದ ನೆರೆಯ ದೇಶ ಬಾಂಗ್ಲಾದೇಶ ಈಗ ಹೊತ್ತಿ ಉರಿಯುತ್ತಿದ್ದು, ಭಾರತದ ಗಡಿ ಭಾಗ ಯಾವಾಗ ಬೇಕಾದರೂ ಬೆಂಕಿ ಕೆನ್ನಾಲಿಗೆಗೆ ಸಿಲುಕಬಹುದು. ಹೀಗಾಗಿ ಎಲ್ಲೆಲ್ಲೂ ಅಲರ್ಟ್ ಘೋಷಣೆ ಮಾಡಲಾಗಿದೆ. ಮತ್ತೊಂದು ಕಡೆ ಭಾರತಕ್ಕೆ ಓಡಿ ಬಂದಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಇದೀಗ ಭಾರತವನ್ನ ಕೂಡ ಬಿಟ್ಟು ಹೋಗುವ ಲೆಕ್ಕಾಚಾರ ಹಾಕಿದ್ದಾರೆ. ಅರೆ ಹಾಗಾದ್ರೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತೆ ಎಲ್ಲಿಗೆ ಹೋಗಲಿದ್ದಾರೆ ಗೊತ್ತಾ?
ಬಾಂಗ್ಲಾದೇಶ ಕೆಲವೇ ಕೆಲವು ದಿನಗಳ ಹಿಂದೆ ನೆಮ್ಮದಿಯಾಗಿ ಇತ್ತು, ಜನರು ಖುಷಿಯಾಗಿದ್ದರು. ಹೀಗೆ ನೆಮ್ಮದಿಯಾಗಿದ್ದ ಬಾಂಗ್ಲಾದೇಶದಲ್ಲಿ ನೆಮ್ಮದಿ ಹಾಳು ಮಾಡಿದ್ದೇ ಮೀಸಲಾತಿ ಚರ್ಚೆ. 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಹೋರಾಟಗಾರರಿಗೆ ಸರ್ಕಾರದ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿರ್ಧಾರವೇ ಬಾಂಗ್ಲಾದೇಶದ ನೆಮ್ಮದಿ ಹಾಳು ಮಾಡಿದೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಸರ್ಕಾರದ ನಿರ್ಧಾರ ವಿರೋಧಿಸಿ ಮೊದಲಿಗೆ ಪ್ರತಿಭಟನೆ ಶುರು ಮಾಡಿದ್ದ ವಿದ್ಯಾರ್ಥಿ ಸಂಘಟನೆಗಳು, ಆ ನಂತರ ಹಿಂಸಾಚಾರಕ್ಕೆ ಇಳಿದವು.

100ಕ್ಕೂ ಹೆಚ್ಚು ಜನರ ಜೀವ...
ಹೀಗೆ ಶುರುವಾದ ಹೋರಾಟ ಘೋರ ಹಿಂಸೆಗೂ ತಿರುಗಿದೆ ಈವರೆಗೆ ಬಾಂಗ್ಲಾದೇಶದಲ್ಲಿ 100ಕ್ಕೂ ಹೆಚ್ಚು ಜನ ಜೀವ ಬಿಟ್ಟಿದ್ದಾರೆ. ವಿದ್ಯಾರ್ಥಿ ಸಂಘಟನೆ ಜೊತೆಯಲ್ಲಿ ಪ್ರತಿಭಟನೆಗೆ ಇಳಿದಿದ್ದ ಜನ ಹಾಗೂ ಸರ್ಕಾರದ ನಡುವೆ ಘೋರ ಯುದ್ಧ ಶುರುವಾಗಿತ್ತು. ಹೀಗಾಗಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಬೇಕು ಎಂದು ಆದೇಶ ನೀಡಲಾಗಿತ್ತು. ಆ ನಂತರ ಪ್ರಧಾನಿ ಪಟ್ಟ ತ್ಯಜಿಸಿದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಓಡಿ ಬಂದಿದ್ದಾರೆ.
ಆದರೆ ಶೇಖ್ ಹಸೀನಾ ಭಾರತವನ್ನ ಕೂಡ ಬಿಟ್ಟು ಹೋಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಹಸೀನಾ ಬ್ರಿಟನ್ನಲ್ಲಿ ಆಶ್ರಯ ಪಡೆಯಲಿದ್ದಾರೆ ಎನ್ನಲಾಗಿದೆ. ಹೀಗಿದ್ದಾಗಲೇ ಶೇಖ್ ಹಸೀನಾ ಅವರು ಬ್ರಿಟನ್ನಲ್ಲಿ ಆಶ್ರಯ ಪಡೆಯಲು ಇನ್ನೂ ಒಪ್ಪಿಗೆ ಸಿಗದ ಕಾರಣಕ್ಕೆ, ಈಗಲೂ ಹಸೀನಾ ಭಾರತದಲ್ಲೇ ಇದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ಇಂಗ್ಲೆಂಡ್ಗೆ ಹೋಗುವ ಸಾಧ್ಯತೆ ಇದೆ.
ವಿದ್ಯಾರ್ಥಿಗಳ ಶಕ್ತಿ ಏನು ಅಂತಾ ಗೊತ್ತಾಗಿದೆ!
ಒಟ್ನಲ್ಲಿ ಬಾಂಗ್ಲಾದೇಶ ಹೋರಾಟ ವಿದ್ಯಾರ್ಥಿಗಳ ಶಕ್ತಿ ಏನು ಅನ್ನೋದನ್ನ ಮತ್ತೊಮ್ಮೆ ಇಡೀ ಜಗತ್ತಿಗೆ ತೋರಿಸಿದಂತೆ ಕಾಣುತ್ತಿದೆ. ಯಾಕಂದ್ರೆ ಸಣ್ಣ ವಿಚಾರವನ್ನು ಬಾಂಗ್ಲಾದೇಶ ಸರ್ಕಾರ ಗುಡ್ಡ ಮಾಡಿ ತೋರಿಸಿತ್ತು. ಇದರ ಪರಿಣಾಮ ಬಾಂಗ್ಲಾದೇಶ ಈಗ ಅರಾಜಕತೆಗೆ ಸಿಲುಕಿದೆ. ಹಾಗೇ ಬಾಂಗ್ಲಾದೇಶ ಇದೀಗ ಸೇನೆಯ ಹಿಡಿತಕ್ಕೆ ಸಿಲುಕಿದ್ದು, ಭವಿಷ್ಯದಲ್ಲಿ ಬಾಂಗ್ಲಾ ಸ್ಥಿತಿ ಮತ್ತಷ್ಟು ಹದಗೆಡುವ ಭಯ ಕೂಡ ಆವರಿಸಿದೆ.












Click it and Unblock the Notifications