Bangladesh Crisis: ದೆಹಲಿ ಸಂಸತ್ ಭವನದಲ್ಲಿ ಸರ್ವಪಕ್ಷಗಳ ಸಭೆ
ನವದೆಹಲಿ, ಆಗಸ್ಟ್ 06: ಮೀಸಲಾತಿ ವಿರೋಧಿ ಪ್ರತಿಭಟನೆ ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟು ಮಾಡಿದೆ. ಪ್ರಧಾನಮಂತ್ರಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶವನ್ನು ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಬಾಂಗ್ಲಾದೇಶದ ಆಡಳಿತ ಸೇನೆಯ ವಶದಲ್ಲಿದ್ದು, ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆ ಮಾಡಲು ಸೇನೆ ಪ್ರಯತ್ನ ನಡೆಸಿದೆ.
ಪಕ್ಕದ ದೇಶವಾದ ಬಾಂಗ್ಲಾದೇಶದಲ್ಲಿ ರಾಜಕೀಯ ಬೆಳವಣಿಗೆ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಮಹತ್ವದ ಸಭೆಯನ್ನು ನಡೆಸಿದರು. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, ಹಲವು ಸಚಿವರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ವಿಚಾರದಲ್ಲಿ ಭಾರತ ಕೈಗೊಂಡಿರುವ ನಿಲುವು ಕುರಿತು ವಿವರಣೆ ನೀಡಲು ಮಂಗಳವಾರ ಸರ್ವಪಕ್ಷಗಳ ಸಭೆಯನ್ನು ನಡೆಸಲಾಗುತ್ತಿದೆ. ಸಂಸತ್ ಭವನದಲ್ಲಿ ಸಚಿವ ಡಾ. ಎಸ್. ಜೈಶಂಕರ್ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಗುತ್ತಿದೆ. ಇತ್ತೀಚಿನ ಬೆಳವಣಿಗೆ ಕುರಿತು ಪಕ್ಷಗಳಿಗೆ ಮಾಹಿತಿ ನೀಡಲಾಗುತ್ತಿದೆ.
ಭಾರತದಲ್ಲಿ ಕಟ್ಟೆಚ್ಚರ: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆ, ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ, ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನಲೆಯಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ.
ಸೋಮವಾರ ಮಧ್ಯಾಹ್ನ ಬಾಂಗ್ಲಾದೇಶದಿಂದ ಸೇನಾ ಹೆಲಿಕಾಪ್ಟರ್ನಲ್ಲಿ ಸಹೋದರಿ ಶೇಖ್ ರೆಹಾನಾ ಜೊತೆ ಶೇಖ್ ಹಸೀನಾ ಪರಾರಿಯಾಗಿದ್ದರು. ಬಳಿಕ ಅವರು ತ್ರಿಪುರಾಕ್ಕೆ ಆಗಮಿಸಿದ್ದರು. ಆಗ ಬಿಎಸ್ಎಫ್ ಯೋಧರು ಅವರ ಭದ್ರತೆಯ ಉಸ್ತುವಾರಿ ಹೊಣೆ ಹೊತ್ತಿದ್ದರು.
ರಾತ್ರಿ ಶೇಖ್ ಹಸೀನಾ ದೆಹಲಿಯ ಹಿಂಡನ್ ವಾಯುನೆಲೆಗೆ ಆಗಮಿಸಿದ್ದರು. ಅಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರ ಉನ್ನತ ಅಧಿಕಾರಿಗಳು ಅವರನ್ನು ಭೇಟಿಯಾಗಿದ್ದರು. ಸದ್ಯ ಶೇಖ್ ಹಸೀನಾ ಭಾರತದಲ್ಲಿಯೇ ಇದ್ದಾರೆ.
ಶೇಖ್ ಹಸೀನಾ ಮತ್ತು ಅವರ ಸಹೋದರಿ ಶೇಖ್ ರೆಹಾನಾಗೆ ಸದ್ಯ ಭಾರತ ಆಶ್ರಯ, ರಕ್ಷಣೆ ನೀಡಿದೆ. ಶೇಖ್ ರೆಹಾನಾ ಬ್ರಿಟನ್ ಪೌರತ್ವ ಹೊಂದಿದ್ದಾರೆ. ಶೇಖ್ ಹಸೀನಾ ಸಹ ಸಹೋದರಿ ಜೊತೆಗೆ ಅಲ್ಲಿಗೆ ತೆರಳಿ ವಾಸ್ತವ್ಯ ಹೂಡಲು ಮುಂದಾಗಿದ್ದಾರೆ. ಆದರೆ ಇನ್ನೂ ಅವರು ಬ್ರಿಟನ್ಗೆ ಪ್ರಯಾಣಿಸಲು ಒಪ್ಪಿಗೆ ಸಿಕ್ಕಿಲ್ಲ. ಆದ್ದರಿಂದ ಭಾರತದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಬ್ರಿಟನ್ ಸದ್ಯಕ್ಕೆ ಶೇಖ್ ಹಸೀನಾಗೆ ಆಶ್ರಯ ನೀಡುವ ಕುರಿತು ಒಪ್ಪಿಗೆ ನೀಡಿಲ್ಲ. ಢಾಕಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಬಾಂಗ್ಲಾದೇಶ ಭಾರತ ಸ್ನೇಹಿ ರಾಷ್ಟ್ರವಾದ ಕಾರಣಕ್ಕೆ ಶೇಖ್ ಹಸೀನಾಗೆ ಆಶ್ರಯ ನೀಡಲಾಗಿದೆ. ಈ ಬೆಳವಣಿಗೆ ಕುರಿತು ವಿರೋಧ ಪಕ್ಷಗಳಿಗೆ ಸಚಿವ ಡಾ. ಎಸ್. ಜೈಶಂಕರ್ ವಿವರಣೆ ಕೊಟ್ಟಿದ್ದಾರೆ.
ದೇಶದಲ್ಲಿ ಹಿಂಸಾಚಾರ ಅಧಿಕವಾದ ಬಳಿಕ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಸೇನಾ ಪಡೆ ಸೂಚನೆ ನೀಡಿತ್ತು. ಈ ಸೂಚನೆಯ 40 ನಿಮಿಷದ ಬಳಿಕ ಅವರು ರಾಜೀನಾಮೆ ನೀಡಿ, ಬಾಂಗ್ಲಾದೇಶದಿಂದ ಪರಾರಿಯಾದರು. ಸದ್ಯ ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಲಿದೆ.
ಈಗಾಗಲೇ ದೇಶದ ಆಡಳಿತವನ್ನು ಸೇನೆ ತನ್ನ ವಶಕ್ಕೆ ಪಡೆದಿದೆ. ಸೇನಾ ಮುಖ್ಯಸ್ಥ ವಾಕರ್-ಉಜ್ -ಜಮಾನ್ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಶೀಘ್ರವೇ ರಾಷ್ಟ್ರದ ಅಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಲಾಗುತ್ತದೆ. ಹಿಂಸಾಚಾರವನ್ನು ನಿಲ್ಲಿಸಿ ಎಂದು ಜನವರಿ ಮನವಿ ಮಾಡಿದ್ದಾರೆ.












Click it and Unblock the Notifications