ಐವರನ್ನು ಬಲಿಪಡೆದ ರೈಲು ದುರಂತದ ಚಿತ್ರಗಳು
ಬೆಂಗಳೂರು, ಆಗಸ್ಟ್ 24 : ಹಳಿ ತಪ್ಪಿದ ರೈಲು, ನಜ್ಜುಗುಜ್ಜಾದ ಲಾರಿ, ಅಪಘಾತದ ಭೀಕರತೆಗೆ ಸಾಕ್ಷಿಯಾಗಿ ನಿಂತಿರುವ ರೈಲ್ವೆ ಬೋಗಿ, ಅಪಘಾತದ ಭೀಕರತೆ ನೋಡುತ್ತಿರುವ ಜನರು...ಈ ದೃಶ್ಯಗಳು ಕಂಡುಬಂದಿದ್ದು ಆಂಧ್ರಪ್ರದೇಶದ ಮಡಕಶಿರ ಬಳಿಯ ರೈಲ್ವೆ ಕ್ರಾಸಿಂಗ್ ಬಳಿ.
ಬೆಂಗಳೂರು-ನಾಂದೇಡ್ ಎಕ್ಸ್ಪ್ರೆಸ್ ರೈಲಿನಲ್ಲಿ ಮುಂಜಾನೆ 2.30ರ ಸುಮಾರಿನ ಸುಖನಿದ್ದೆ ಸವಿಯುತ್ತಿದ್ದ ಜನರು ಭಾರೀ ಶಬ್ದ ಕೇಳಿ ಬೆಚ್ಚಿಬಿದ್ದಿದ್ದರು. ಏನಾಗುತ್ತಿದೆ ಎನ್ನುವುದು ಅರಿವಾಗುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು. ಯವ ಸ್ವರೂಪಿಯಂತೆ ಬಂದ ಲಾರಿ 5 ಜನರ ಜೀವ ತೆಗೆದುಕೊಂಡಿತ್ತು. [ಶಾಸಕ ವೆಂಕಟೇಶ್ ನಾಯಕ್ ಪರಿಚಯ]
ಸೋಮವಾರ ಮುಂಜಾನೆ ಆಂಧ್ರಪ್ರದೇಶದ ಮಡಕಶಿರ ಬಳಿಯ ರೈಲ್ವೆ ಕ್ರಾಸಿಂಗ್ ಬಳಿ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದ ಗ್ರಾನೈಟ್ ಕಲ್ಲು ತುಂಬಿದ್ದ ಲಾರಿ ಬೆಂಗಳೂರು-ನಾಂದೇಡ್ ರೈಲಿನ ಎಚ್ 1 ಎಸಿ ಬೋಗಿಗೆ ಡಿಕ್ಕಿ ಹೊಡೆಯಿತು.
ಎಸಿ ಬೋಗಿಯಲ್ಲಿ ಮಲಗಿದ್ದ ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್, ಒಬ್ಬರು ರೈಲ್ವೆ ಸಿಬ್ಬಂದಿ ಸೇರಿದಂತೆ 5 ಜನರು ಅಪಘಾತದಲ್ಲಿ ಮೃತಪಟ್ಟರೆ, 20ಕ್ಕೂ ಅಧಿಕ ಜನರು ಗಾಯಗೊಂಡರು. ಅಪಘಾತದ ಭೀಕರತೆಗೆ ರೈಲಿನ ಕೆಲವು ಬೋಗಿಗಳು ಹಳಿ ತಪ್ಪಿದವು. ರೈಲು ಅಪಘಾತದ ಚಿತ್ರಗಳು ಇಲ್ಲಿವೆ ನೋಡಿ..... [ಪಿಟಿಐ ಚಿತ್ರಗಳು]
ರೈಲು ಅಪಘಾತದಲ್ಲಿ ಶಾಸಕರ ಸಾವು
ಬೆಂಗಳೂರು-ನಾಂದೇಡ್ ರೈಲು ಅಪಘಾತದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಮಡಕಶಿರ ಬಳಿಯ ರೈಲ್ವೆ ಕ್ರಾಸಿಂಗ್ನಲ್ಲಿ ಈ ಘಟನೆ ನಡೆದಿದೆ.
ಯಮನಂತೆ ಬಂದ ಲಾರಿ ಐವರ ಪ್ರಾಣ ತೆಗೆಯಿತು
ಸೋಮವಾರ ಮುಂಜಾನೆ 2.30ರ ಸುಮಾರಿಗೆ ಗ್ರಾನೈಟ್ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಡಕಶಿರ ರೈಲ್ವೆ ಕ್ರಾಸಿಂಗ್ ಬಳಿ ಬೆಂಗಳೂರು-ನಾಂದೇಡ್ ರೈಲಿನ ಎಸಿ ಕೋಚ್ಗೆ ಡಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ ದೇವದುರ್ಗ ಶಾಸಕ ವೆಂಕಟೇಶ್ ನಾಯಕ್ ಸೇರಿದಂತೆ 5 ಜನರು ಮೃತಪಟ್ಟರು. 20ಕ್ಕೂ ಅಧಿಕ ಜನರು ಗಾಯಗೊಂಡರು.
ಮೃತಪಟ್ಟವರ ವಿವರಗಳು
ರೈಲು ಅಪಘಾತದಲ್ಲಿ ಮೃತಪಟ್ಟವರನ್ನು ಶಾಸಕ ವೆಂಕಟೇಶ್ ನಾಯಕ್ (70), ರಾಯಚೂರಿನ ಪುಲ್ಲರಾವ್ (48), ಟಿ.ಎಸ್.ಟಿ.ರಾಜು (53), ಎಸಿ ಕೋಚ್ ಮೆಕ್ಯಾನಿಕ್ ಸೈಯದ್ ಅಹಮದ್ ಎಂದು ಗುರುತಿಸಲಾಗಿದೆ. ಮತ್ತೊಂದು ಶವದ ಗುರುತು ಪತ್ತೆಯಾಗಬೇಕಾಗಿದೆ.
ನಜ್ಜುಗುಜ್ಜಾದ ಲಾರಿ
ಅಪಘಾತ ನಡೆದ ಸ್ಥಳದಲ್ಲಿ ಲಾರಿ ನಜ್ಜುಗುಜ್ಜಾಗಿತ್ತು. ಅಪಘಾತದ ಭೀಕರತೆಗೆ ಇದು ಸಾಕ್ಷಿಯಾಗಿತ್ತು. ರೈಲಿನ ಎಚ್ 1 ಎಸಿ ಬೋಗಿ ಸಂಪೂರ್ಣ ಜಖಂಗೊಂಡಿದ್ದು, ಶವಗಳು ಛಿದ್ರವಾಗಿದ್ದವು.
ಮಾಜಿ ಸಂಸದ ವೆಂಕಟೇಶ್ ನಾಯಕ್
ನಾಲ್ಕು ಬಾರಿ ರಾಯಚೂರು ಸಂಸದರಾಗಿದ್ದ ಎ.ವೆಂಕಟೇಶ್ ನಾಯಕ್ ಅವರಿಗೆ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. 62,070 ಮತಗಳನ್ನು ಪಡೆದು ಶಿವನಗೌಡ ನಾಯಕ್ ಅವರ ವಿರುದ್ಧ ಜಯಗಳಿಸಿದ್ದ ವೆಂಕಟೇಶ್ ನಾಯಕ್ ಅವರು ವಿಧಾನಸಭೆ ಪ್ರವೇಶಿಸಿದ್ದರು.