ವಿಡಿಯೋ; ಭೀಕರ ದುರಂತದ ಬಳಿಕ ಬಾಲಸೋರ್ನಲ್ಲಿ ರೈಲು ಸಂಚಾರ ಆರಂಭ
ನವದೆಹಲಿ, ಜೂನ್ 05: ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ನಡೆದ ಭೀಕರ ರೈಲ್ವೆ ಅಪಘಾತದ ಬಳಿಕ ಹಳಿಗಳ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಕ ರೈಲುಗಳ ಸಂಚಾರವನ್ನು ಭಾನುವಾರ ರಾತ್ರಿಯಿಂದಲೇ ಆರಂಭಿಸಲಾಗಿದೆ.
ಭಾನುವಾರ ಹಳಿಗಳ ಮೇಲೆ ಬಿದ್ದಿದ್ದ ಅವಶೇಷಗಳನ್ನು ತೆರವುಗೊಳಿಸಲಾಯಿತು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಥಳದಲ್ಲಿಯೇ ಇದ್ದು, ದುರಸ್ತಿ ಕಾರ್ಯದ ಉಸ್ತುವಾರಿ ನೋಡಿಕೊಂಡರು. ಹಳಿಗಳ ಮೇಲಿದ್ದ ಬೋಗಿ, ಇಂಜಿನ್ ಮೊದಲು ತೆರವುಗೊಳಿಸಲಾಯಿತು.

ರೈಲು ಸಂಚಾರ ಆರಂಭ; ಬಳಿಕ ಹಳಿಗಳನ್ನು ಪುನಃ ಜೋಡಿಸಿ, ವಿದ್ಯುತ್ ತಂತಿಗಳನ್ನು ಎಳೆದು ರೈಲು ಸಂಚಾರಕ್ಕೆ ಹಳಿ ಮುಕ್ತವಾಗಿದೆ ಎಂದು ಅಧಿಕಾರಿಗಳು ಘೋಷಣೆ ಮಾಡಿದರು. ಬಳಿಕ ಪೂಜೆ ಸಲ್ಲಿಕೆ ಮಾಡಿ ಎಲ್ಲರ ಪ್ರಯಾಣ ಸುರಕ್ಷಿತವಾಗಿ ಸಾಗಲಿ ಎಂದು ಪ್ರಾರ್ಥಿಸಿ ಪ್ರಯಾಣಿಕ ರೈಲು ಸಂಚಾರವನ್ನು ಆರಂಭಿಸಲಾಯಿತು.
#WATCH | Indian Railways has started running passenger trains on the tracks which were affected due to #TrainAccident in Odisha’s Balasore pic.twitter.com/E9NTCv1ieO
— ANI (@ANI) June 5, 2023
ಶುಕ್ರವಾರ ಸಂಜೆ ಸರಕು ಸಾಗಣೆ ರೈಲಿಗೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿತ್ತು. ಪರಿಣಾಮ 20 ಬೋಗಿಗಳು ಹಳಿ ತಪ್ಪಿದ್ದವು. ಅಕ್ಕಪಕ್ಕದ ಹಳಿಗಳ ಮೇಲೆ ಬೋಗಿಗಳು ಉರುಳಿ ಬಿದಿದ್ದವು. ಕೇವಲ 6 ನಿಮಿಷಗಳ ಅಂತರದಲ್ಲಿ ಇದೇ ಮಾರ್ಗದಲ್ಲಿ ಬಂದ ಹೌರಾ ಸೂಪರ್ ಫಾಸ್ಟ್ ರೈಲಿಗೆ ಬೋಗಿಗಳು ಡಿಕ್ಕಿಯಾಗಿ ಸುಮಾರು 3 ಬೋಗಿ ಹಳಿ ತಪ್ಪಿತ್ತು.

ಬಾಲಸೋರ್ ಜಿಲ್ಲೆಯಲ್ಲಿ ನಡೆದ ಈ ರೈಲು 288 ಜನರು ಸಾವನ್ನಪ್ಪಿದರು. 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದುರಂತದ ಬಳಿಕ ಈ ಮಾರ್ಗದಲ್ಲಿ ಸಾಗುವ ಸುಮಾರು 70 ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ಆದ್ದರಿಂದ ಪ್ರಯಾಣಿಕರು ವಿವಿಧ ರೈಲು ನಿಲ್ದಾಣಲ್ಲಿ ಸಿಲುಕಿಕೊಂಡು ಪರದಾಡುವಂತೆ ಆಗಿತ್ತು.
ಕಾರಣ ಬಹಿರಂಗ; ಬಾಲಸೋರ್ ರೈಲು ದುರಂತಕ್ಕೆ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಬದಲಾವಣೆ ಕಾರಣ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ಈ ಕುರಿತು ತನಿಖೆ ಕೈಗೊಂಡಿದ್ದು, ವರದಿಯಲ್ಲಿ ಇದಕ್ಕೆ ಕಾರಣ ಯಾರು? ಎಂದು ಹೇಳಲಿದ್ದಾರೆ. ಯಾರೇ ತಪ್ಪಿತಸ್ಥರಿದ್ದರು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಕೇಂದ್ರ ಸಚಿವರಾದ ಮುನ್ಸುಖ್ ಮಾಂಡವೀಯ, ಧರ್ಮೇಂದ್ರ ಪ್ರಧಾನ್ ಮತ್ತು ಅಶ್ವಿನ್ ವೈಷ್ಣವ್ ಕಟಕ್ ಜಿಲ್ಲಾಸ್ಪತ್ರೆಗೆ ಭಾನುವಾರ ಭೇಟಿ ನೀಡಿದರು. ರೈಲು ದುರಂತದಲ್ಲಿ ಗಾಯಗೊಂಡ ನೂರಾರು ಮಂದಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವರು, ಯಾವ ರಾಜ್ಯದವರು, ಜೊತೆಗೆ ಯಾರು, ಯಾರು ಇದ್ದರು? ಎಂಬ ಮಾಹಿತಿ ಸಂಗ್ರಹ ಮಾಡಿದರು.
ಸಚಿವರು ಭುವನೇಶ್ವರದ ಏಮ್ಸ್, ಎಸ್ಸಿಬಿ ವೈದ್ಯಕೀಯ ಕಾಲೇಜಿನ ವೈದ್ಯರ ಜೊತೆಗೆ ಸಹ ಸಭೆ ನಡೆಸಿದರು. ಗಾಯಾಳುಗಳ ಸ್ಥಿತಿ ಕುರಿತು ಚರ್ಚೆ ನಡೆಸಿದರು. ಎಲ್ಲಾ ಗಾಯಾಳುಗಳಿಗೂ ಅಗತ್ಯ ಚಿಕಿತ್ಸೆ ಸಿಗುವಂತೆ ಆಗಬೇಕು, ಈ ಕುರಿತು ಆಸ್ಪತ್ರೆಗಳು ಗಮನಹರಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಶುಕ್ರವಾರ ದುರಂತ ನಡೆದ ಬಳಿಕ ರೈಲ್ವೆ ಸಚಿವರು ಅಲ್ಲಿಯೇ ಇದ್ದಾರೆ. ಪರಿಹಾರ ಕಾರ್ಯಗಳು, ಹಳಿಗಳ ದುರಸ್ತಿ ಕಾರ್ಯ ಮುಂತಾದವುಗಳ ಮೇಲುಸ್ತುವಾರಿಯನ್ನು ಅವರು ನೋಡಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದರು.











Click it and Unblock the Notifications