ಬಾಬ್ರಿ ಮಸೀದಿ ಕೇಸ್: ಅಡ್ವಾಣಿ ಮತ್ತಿತರರಿಗೆ ಭಾರೀ ಹಿನ್ನಡೆ
ಲಕ್ನೋ, ಮೇ 30: 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಕೇಂದ್ರ ಸಚಿವೆ ಉಮಾ ಭಾರತಿ ಸೇರಿದಂತೆ 12 ಜನ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಸರಿಯಾಗಿ 25 ವರ್ಷ ಕಳೆದ ನಂತರ 12 ಜನರ ವಿರುದ್ಧ ಕ್ರಿಮನಲ್ ಸಂಚಿನ ಆರೋಪವನ್ನು ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ದಾಖಲು ಮಾಡಿಕೊಂಡಿದೆ.
ಆರೋಪಿಗಳು ತಮ್ಮ ವಿರುದ್ಧ ಆರೋಪ ಪಟ್ಟಿ ದಾಖಲಿಸದಂತೆ ವಾದಿಸಿದ್ದರು. ಬಾಬ್ರಿ ಮಸೀದಿ ಧ್ವಂಸದಲ್ಲಿ ನಮ್ಮದೇನೂ ಪಾತ್ರವಿಲ್ಲ. ಮಸೀದಿ ಧ್ವಂಸವಾಗುವಾಗ ನಾವು ಅದನ್ನು ತಡೆಯಲು ಯತ್ನಿಸಿದೆವು ಎಂದು ವಾದಿಸಿದ್ದರು. ಆದರೆ ಇದನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ ಯಾದವ್ ಕ್ರಿಮಿನಲ್ ಸಂಚಿನ ಪ್ರಕರಣ ದಾಖಲಿಸಿದ್ದಾರೆ.[ಬಾಬ್ರಿ ಮಸೀದಿ ಧ್ವಂಸ: ಅಡ್ವಾಣಿ ಸೇರಿ 12 ಜನರಿಗೆ ಜಾಮೀನು]
ಪ್ರತಿದಿನ ವಿಚಾರಣೆ ನಡೆಸಿ ಪ್ರಕರಣವನ್ನು ಎರಡು ವರ್ಷಗಳ ಮೊದಲು ಕೊನೆಗೊಳಿಸಲು ಸುಪ್ರೀಂ ಕೋರ್ಟ್ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಹೀಗಾಗಿ ಈ ನಾಯಕರ ವಿರುದ್ಧ ಇದೀಗ ವಿಚಾರಣೆ ಆರಂಭವಾಗಲಿದೆ.

ಯೋಗಿಯಿಂದ ಭೀಷ್ಮನಿಗೆ ಸ್ವಾಗತ
ಕೋರ್ಟಿಗೆ ಹಾಜರಾಗುವ ಮೊದಲು ಅಡ್ವಾಣಿ ಲಕ್ನೋದ ವಿವಿಐಪಿ ಅತಿಥಿ ಗೃಹಕ್ಕೆ ಭೇಟಿ ನೀಡಿದರು. ಅಲ್ಲಿ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೂಗುಚ್ಚ ನೀಡಿ ಸ್ವಾಗತ ಕೋರಿದರು.

ಸಂಚು ನಡೆದೇ ಇಲ್ಲ
ವರದಿಗಾರರ ಜತೆ ಮಾತನಾಡಿದ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ, "ನನ್ನನ್ನು ನಾನು ಆರೋಪಿ ಎಂದು ಪರಿಗಣಿಸಲು ಸಿದ್ಧವಿಲ್ಲ. ಇದರಲ್ಲಿ ಸಂಚು ಏನಿಲ್ಲ. ಅದೊಂದು ಬಹಿರಂಗ ಆಂದೋಲನ, ತುರ್ತು ಸಂದರ್ಭದಲ್ಲಿ ಅದರಷ್ಟಕ್ಕೆ ಅದು ನಡೆದು ಹೋಯಿತು," ಎಂದು ಹೇಳಿದ್ದಾರೆ.[25 ವರ್ಷಗಳ ನಂತರ ಬಾಬ್ರಿ ಮಸೀದಿ ಕೆಡವಿದ ಕೇಸ್ ರೀ ಕ್ಯಾಪ್]

ನಾಯಕರನ್ನು ಸಮರ್ಥಿಸಿಕೊಂಡ ಬಿಜೆಪಿ
ಪಕ್ಷದ ನಾಯಕರನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. "ನಮ್ಮ ನಾಯಕರು ಮುಗ್ಧರಾಗಿದ್ದಾರೆ. ಈ ಪ್ರಕರಣದಿಂದ ಅವರು ಹೊರ ಬಂದೇ ಬರುತ್ತಾರೆ," ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

ತೀರ್ಪು ನೀಡಲು ಗಡುವು
ಸಂಚಿನ ಆರೋಪ ಹೊರಿಸಲು ಸುಪ್ರೀಂ ಕೋರ್ಟ್ ವಿಶೇಷ ನ್ಯಾಯಾಲಯಕ್ಕೆ 1 ತಿಂಗಳ ಕಾಲಾವಕಾಶ ನೀಡಿತ್ತು. ಇನ್ನು ಎರಡು ವರ್ಷದೊಳಗೆ ತೀರ್ಪು ನೀಡುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿದೆ.

ಎರಡನೇ ಪ್ರಕರಣ
ಡಿಸೆಂಬರ್ 6,1992ರಂದು ಬಾಬ್ರಿ ಮಸೀದಿ ಧ್ವಂಸಕ್ಕೂ ಮೊದಲು ಕರಸೇವಕರನ್ನುದ್ದೇಶಿಸಿ ಉದ್ರೇಕಕಾರಿ ಭಾಷಣ ಮಾಡಿದ ಪ್ರಕರಣವನ್ನು ಈಗಾಗಲೇ ನಾಯಕರು ಎದುರಿಸುತ್ತಿದ್ದಾರೆ. ಇದೀಗ ಕ್ರಿಮಿನಲ್ ಸಂಚಿನ ಪ್ರಕಣವನ್ನೂ ನಾಯಕರು ಎದುರಿಸಬೇಕಾಗಿದೆ.












Click it and Unblock the Notifications