'ಆಯುಷ್ಮಾನ್ ಭಾರತ್' ಯೋಜನೆ ದೇಶದ ಎಷ್ಟು ಮಂದಿಯನ್ನು ತಲುಪಿದೆ?
ನವದೆಹಲಿ, ಮೇ 20: 'ಆಯುಷ್ಮಾನ್ ಭಾರತ್' ಯೋಜನೆಯ ಪ್ರಯೋಜನ ಪಡೆದ ಫಲಾನುಭವಿಗಳ ಸಂಖ್ಯೆ ಒಂದು ಕೋಟಿ ದಾಟಿದೆ.
ಈ ಯೋಜನೆಯು ಜನರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.2018ರ ಸೆಪ್ಟೆಂಬರ್ನಲ್ಲಿ ಪ್ರಧಾನಿ ಮೋದಿ 'ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನಾ- ಆಯುಷ್ಮಾನ್ ಭಾರತ್' ಯೋಜನೆ ಜಾರಿಗೆ ತಂದರು. ಇದು ವಿಶ್ವ ಅತಿ ದೊಡ್ಡ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆ ಒಂದು ಕೋಟಿ ಜನರನ್ನು ತಲುಪಿದೆ ಎನ್ನುವುದು ಉತ್ತಮ ಬೆಳವಣಿಗೆಯಾಗಿದೆ.
ಆಯುಷ್ಮಾನ್ ಭಾರತ್ ಅಥವಾ ಮೋದಿಕೇರ್ ಎಂದರೇನು?
ಎರಡೇ ವರ್ಷಗಳಲ್ಲಿ ದೇಶದ ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಯೋಜನೆ ಬೀರಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು. ಆಯುಷ್ಮಾನ್ ಭಾರತ್ ಯೋಜನೆ ಫಲಾನುಭವಿಗಳ ಕುಟುಂಬ ಆರೋಗ್ಯದಾಯಕವಾಗಿರಲಿ ಎಂದು ಪ್ರಾರ್ಥಿಸಿದ್ದು, ವೈದ್ಯರು, ನರ್ಸ್ಗಳ, ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯಿಂದ ನಂಬಿಕೆ
ಈ ಯೋಜನೆಯಿಂದ ದೇಶದ ಜನರಲ್ಲಿ ನಂಬಿಕೆ ಮೂಡಿದೆ. ಈ ಯೋಜನೆಯಿಂದ ಕೇವಲ ಅವರು ನೋಂದಾಯಿಸಿದ ಸ್ಥಳದಲ್ಲಿ ಮಾತ್ರವಲ್ಲದೆ ದೇಶದ ಯಾವ ಮೂಲೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಮೋದಿಯವರು ಪ್ರವಾಸಕ್ಕೆ ತೆರಳಿದ್ದಾಗ ಸಾಕಷ್ಟು ಮಂದಿ ಫಲಾನುಭವಿಗಳ ಜೊತೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಯೋಧರೊಬ್ಬರ ಪತ್ನಿ ಹೇಳಿದ್ದೇನು?
ಮೇಘಾಲಯದಲ್ಲಿ ನೆಲೆಸಿರುವ ಯೋಧರೊಬ್ಬರ ಪತ್ನಿ ಪೂಜಾ ಅವರೊಂದಿಗೆ ನರೇಂದ್ರ ಮೋದಿ ಟೆಲಿಫೋನಿಕ್ ಸಂಭಾಷಣೆ ನಡೆಸಿದ್ದರು. ಅವರು ಶಿಲ್ಲಾಂಗ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಆಯುಷ್ಮಾನ್ ಭಾರತ್ ಯೋಜನೆ ತಮಗೆ ಹೇಗೆ ಸಹಾಯ ಮಾಡಿತು ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.ಲಾಕ್ಡೌನ್ನಿಂದಾಗಿ ಪತಿಪಣಿಪುರಕ್ಕೆ ಬರಬೇಕಾಯಿತು.ಶಸ್ತ್ರಚಿಕಿತ್ಸೆ, ಔಷಧಿ ಯಾವುದಕ್ಕೂ ಹಣ ಪಾವತಿಸಿಲ್ಲ. ಸಾಲವನ್ನೂ ಮಾಡಿಲ್ಲ ಆಯುಷ್ಮಾನ್ ಭಾರತ್ ಯೋಜನೆ ಉತ್ತಮವಾದದ್ದು ಎಂದು ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆ ಎಂದರೇನು?
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(PMJAY) ಮೂಲಕ ವಾರ್ಷಿಕವಾಗಿ ಫಲಾನುಭವಿ ಕುಟುಂಬಕ್ಕೆ 5 ಲಕ್ಷ ರು ತನಕ ಸಿಗಲಿದೆ. ಸುಮಾರು 10 ಕೋಟಿ ಬಡ ಕುಟುಂಬಗಳಿಗೆ ಇದರಿಂದ ನೆರವಾಗಲಿದೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಪ್ರತಿಯೊಂದು ರೋಗಕ್ಕೂ ಒಂದು ದರ ನಿರ್ಧರಿಸಲಾಗಿದೆ. ಈ ದರ ಪಟ್ಟಿಯಂತೆ ನೇರವಾಗಿ ಆಸ್ಪತ್ರೆಗಳಿಗೆ ಹಣ ಪಾವತಿಯಾಗಲಿದೆ.
ಮೊದಲ ಹಂತದಲ್ಲಿ 11 ರಾಜ್ಯಗಳಲ್ಲಿ ಜಾರಿಯಾಗಿತ್ತು
ಮೊದಲ ಹಂತವಾಗಿ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಯನ್ನು ಜಾರಿಗೆ ತರಲಾಯಿತು.. ಮೊದಲ ಹಂತದಲ್ಲಿ ಈ ಯೋಜನೆ ಛತ್ತೀಸ್ಗಢ, ತ್ರಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ದಮನ್ ಮತ್ತು ದಿಯು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಜಾರಿಯಾಗಿತ್ತು.