Delhi Election: ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ ದೆಹಲಿ ಸಿಎಂ ಅತಿಶಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಈಗಾಗಲೇ ದೆಹಲಿಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಆಡಳಿತಾರೂಢ ಎಎಪಿ ಚುನಾವಣಾ ಪ್ರಚಾರವನ್ನು ಆರಂಭಿಸಿವೆ. ಬಿಜೆಪಿ ನಾಯಕ ರಮೇಶ್ ಬಿಧುರಿ ದೆಹಲಿ ಸಿಎಂ ಅತಿಶಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಸಿಎಂ ಅತಿಶಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣಾ ಆಯೋಗ ದೆಹಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಒಂದು ದಿನ ಮೊದಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನನ್ನು ಸಿಎಂ ಅಧಿಕೃತ ನಿವಾಸದಿಂದ ಹೊರಹಾಕಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಆರೋಪ ಮಾಡಿದ್ದಾರೆ.

"ದೆಹಲಿ ಚುನಾವಣೆ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ. ಆದರೆ ಸೋಮವಾರ ರಾತ್ರಿಯೇ ಕೇಂದ್ರ ಸರ್ಕಾರ ನನ್ನನ್ನು ಸಿಎಂ ಅಧಿಕೃತ ನಿವಾಸದಿಂದ ಹೊರಗೆ ಕಳಿಸಿದೆ. ಮೂರು ತಿಂಗಳಿನಲ್ಲಿ ಎರಡನೇ ಬಾರಿಗೆ ನನ್ನನ್ನು ಅಧಿಕೃತ ನಿವಾಸದಿಂದ ಹೊರಗೆ ಹಾಕಲಾಗಿದೆ. ಪತ್ರದ ಮೂಲಕ ನಿವಾಸ ಹಂಚಿಕೆಯನ್ನು ರದ್ದು ಮಾಡಲಾಗಿದೆ." ಎಂದು ಅತಿಶಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಬಿಜೆಪಿ ವಿರುದ್ಧ ವಾಗ್ದಾಳಿ
"ಮೂರು ತಿಂಗಳ ಹಿಂದೆ ಕೂಡ ಇದೇ ಕೆಲಸ ಮಾಡಿದ್ದರು. ನಾನು ಸಿಎಂ ಆಗಿ ಆಯ್ಕೆಯಾದಾಗ ನನ್ನ ಮತ್ತು ಕುಟುಂಬದ ವಸ್ತುಗಳನ್ನು ಬೀದಿಗೆ ಎಸೆದಿದ್ದರು. ನಾವು ಹೋರಾಟ ನಿಲ್ಲಿಸುತ್ತೇವೆ ಎಂದು ಬಿಜೆಪಿಯವರು ಭಾವಿಸಿದ್ದಾರೆ. ನಮ್ಮ ಮನೆಗಳನ್ನು ಕಸಿದುಕೊಂಡು, ನಮ್ಮನ್ನು, ನಮ್ಮ ಮನೆಯವರನ್ನು ನಿಂದಿಸಿದರೂ ನಾವು ಜನಕ್ಕಾಗಿ ಕೆಲಸ ಮಾಡುವುದು ಬಿಡುವುದಿಲ್ಲ" ಎಂದು ಅತಿಶಿ ಹೇಳಿದ್ದಾರೆ.
ಅತಿಶಿಗೆ ಎಎಪಿ ಸಚಿವ ಸೌರಭ್ ಭಾರದ್ವಾಜ್ ಕೂಡ ಬೆಂಬಲ ನೀಡಿದ್ದಾರೆ. ಎಎಪಿ ದೆಹಲಿಯ ಜನರಿಗೆ ಕೆಲಸ ಮಾಡಲು ಹೆದರುವುದಿಲ್ಲ. ದೆಹಲಿ ಜನತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ, ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಇದರ ಬಗ್ಗೆ ಬಿಜೆಪಿಗೆ ಯಾವುದೇ ಕಾಳಜಿಯಿಲ್ಲ, ಅವರು ಎಎಪಿ ನಾಯಕರ ವಿರುದ್ಧ ಕುತಂತ್ರ ಮಾಡುವುದನ್ನು ಮಾತ್ರ ಕಲಿತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ ನಿರಾಕರಿಸಿದ ಬಿಜೆಪಿ
ಅತಿಶಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ "ದೆಹಲಿ ಸಿಎಂ ಅತಿಶಿ ಮರ್ಲೆನಾ ಸುಳ್ಳು ಹೇಳುತ್ತಿದ್ದಾರೆ. 2024ರ ಅಕ್ಟೋಬರ್ 11ರಂದು ಶೀಶ್ಮಹಲ್ ಅನ್ನು ಮಂಜೂರು ಮಾಡಲಾಗಿದೆ. ಆದರೆ ಅರವಿಂದ್ ಕೇಜ್ರಿವಾಲ್ಗೆ ಅವಮಾನವಾಗುತ್ತದೆ ಎಂದು ಆಕೆ ಅಲ್ಲಿಗೆ ಇನ್ನೂ ಸ್ಥಳಾಂತರವಾಗಿಲ್ಲ, ಆದ್ದರಿಂದ ಅದನ್ನು ಹಿಂಪಡೆಯಲಾಗಿದ್ದು ಬದಲಾಗಿ ಎರಡು ಬಂಗಲೆಗಳನ್ನು ನೀಡಲಾಗಿದೆ ಎಂದರು.












Click it and Unblock the Notifications