ಆರಂಭಿಕ ಹಿನ್ನಡೆ ಅನುಭವಿಸುತ್ತಿರುವ ಪ್ರಮುಖ ಅಭ್ಯರ್ಥಿಗಳು
ನವದೆಹಲಿ, ಮೇ 02: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಮೊದಲಾರ್ಧಕ್ಕೆ ಸನಿಹದಲ್ಲಿದೆ. ಆರಂಭಿಕ ಮುನ್ನಡೆಗಳು ಬಂದಿದ್ದು ಕೆಲವೇ ಗಂಟೆಗಳಲ್ಲಿ ಚಿತ್ರಣ ಇನ್ನಷ್ಟು ಸ್ಪಷ್ಟವಾಗಲಿದೆ.
ಹಲವು ಅತಿರಥ-ಮಹಾರಥರು ಈ ಬಾರಿ ಚುನಾವಣೆಯಲ್ಲಿ ರಾಜಕೀಯ ಭವಿಷ್ಯ ಪಣಕ್ಕೆ ಇಟ್ಟಿದ್ದಾರೆ. ಕೆಲವು ದಿಗ್ಗಜರ ರಾಜಕೀಯ ಭವಿಷ್ಯವನ್ನು ಈ ಚುನಾವಣೆ ನಿರ್ಧರಿಸಲಿದೆ.
ಎರಡೂವರೆ ಗಂಟೆಗಳ ಚುನಾವಣಾ ಮತ ಎಣಿಕೆ ನಡೆದಿದ್ದು ಹಲವು ಪ್ರಮುಖ ಅಭ್ಯರ್ಥಿಗಳು ಆರಂಭಿಕ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಆರಂಭಿಕ ಹಿನ್ನಡೆ ಅನುಭವಿಸುತ್ತಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಸ್ವಕ್ಷೇತ್ರ ಬಿಟ್ಟು ತಮಗೆ ಕೈಕೊಟ್ಟ ಮಾಜಿ ಬಲಗೈ ಭಂಟ ಸುವೇಂದು ಅಧಿಕಾರಿ ವಿರುದ್ಧ ನಂದಿ ಗ್ರಾಮದಲ್ಲಿ ಸ್ಪರ್ಧೆ ಮಾಡಿದ್ದು ಮಮತಾ ಅವರು 8000 ಕ್ಕೂ ಹೆಚ್ಚು ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಅಲ್ಲಿ ಈವರೆಗೆ (10:30 AM) ಮೂರು ಸುತ್ತಿನ ಮತ ಎಣಿಕೆ ಅಷ್ಟೆ ನಡೆದಿದೆ.
ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿ ಆಗಿದ್ದ ಅಣ್ಣಾಮಲೈ ಅವರು ಬಿಜೆಪಿಯಿಂದ ರಾಜಕೀಯ ಪಯಣ ಆರಂಭಿಸಿದ್ದು ಮೊದಲ ಬಾರಿಗೆ ತಮ್ಮದೇ ಸ್ವಕ್ಷೇತ್ರ ತಮಿಳುನಾಡಿನ ಅರವಕುರುಚ್ಚಿಯಿಂದ ಸ್ಪರ್ಧೆಗಿಳಿದಿದ್ದಾರೆ. ಆದರೆ ಅಲ್ಲಿ ಅವರು ಆರಂಭಿಕ ಹಿನ್ನಡೆ ಅನುಭವಿಸಿದ್ದಾರೆ. ಡಿಎಂಕೆಯ ಎಲಂಗೋ ಅವರು ಮುನ್ನಡೆ ಸಾಧಿಸಿದ್ದಾರೆ.
ಹೊಸ ಪಕ್ಷ ಸ್ಥಾಪಿಸಿ ಚುನಾವಣೆಗೆ ನಿಂತಿರುವ ನಟ ಕಮಲ್ ಹಾಸನ್ ಸಹ ಆರಂಭಿಕ ಹಿನ್ನಡೆ ಅನುಭವಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು ಪ್ರಬಲ ಎದುರಾಳಿ ಮಯೂರ ಎಸ್ ಜಯಕುಮಾರ್ ಅನ್ನು ಎದುರಿಸುತ್ತಿದ್ದಾರೆ.
ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಖುಷ್ಬು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ತಮಿಳುನಾಡಿನ ಥೌಸಂಡ್ಸ್ ಲೈಟ್ಸ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರಿಗೂ ಅಲ್ಲಿ ಆರಂಭಿಕ ಹಿನ್ನಡೆ ಉಂಟಾಗಿದೆ.












Click it and Unblock the Notifications