ಕ್ವಾರಂಟೈನ್ ಸೆಂಟರ್ ಟೀಕಿಸಿದ ಶಾಸಕ ಕಂಬಿ ಹಿಂದೆ!
ಗೌಹಾತಿ, ಏಪ್ರಿಲ್ 07 : ದೇಶದಲ್ಲಿಯೇ ಕೊರೊನಾ ಆತಂಕ ಮೂಡಿಸಿದೆ. ಕೊರೊನಾ ಸೋಂಕು ತಗುಲಿದವರನ್ನು ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ. ಕ್ವಾರಂಟೈನ್ ಮಾಡಲಾಗುವ ಸ್ಥಳದ ಬಗ್ಗೆ ಕೆಟ್ಟ ಪ್ರತಿಕ್ರಿಯೆ ನೀಡಿದ ಶಾಸಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂನ ವಿರೋಧ ಪಕ್ಷದ ಶಾಸಕ ಅಮಿನುಲ್ ಇಸ್ಲಾಂ ಬಂಧಿತರು. ಶಾಸಕರು ಮಾತನಾಡಿದ ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ಅದರ ಆಧಾರದ ಮೇಲೆ ಬಂಧಿಸಲಾಗಿದೆ. ಅಸ್ಸಾಂ ಸರ್ಕಾರ ನಿರ್ಮಿಸಿರುವ ಕ್ವಾರಂಟೈನ್ ಸೆಂಟರ್ ಅಕ್ರಮ ನುಸುಳುಕೋರರನ್ನು ಬಂಧಿಸಿಡುವ ಕೇಂದ್ರಗಳಿಗಿಂತ ಕೆಟ್ಟದಾಗಿದೆ ಎಂದು ಆಡಿಯೋದಲ್ಲಿ ಹೇಳಿದ್ದಾರೆ.
ಅಸ್ಸಾಂನಲ್ಲಿರುವ ಬಿಜೆಪಿ ಸರ್ಕಾರ ಮುಸ್ಲಿಂಮರ ವಿರುದ್ಧ ಷಡ್ಯಂತ್ಯ ರೂಪಿಸಿದೆ. ದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ರಾಜ್ಯಕ್ಕೆ ವಾಪಸ್ ಆಗಿರುವ ಮುಸ್ಲಿಂಮರನ್ನು ಆಸ್ಪತ್ರೆಯಲ್ಲಿ ಹಿಂಸಿಸಲಾಗುತ್ತಿದೆ ಎಂದು ಶಾಸಕರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಸ್ಸಾಂನ ಎಐಡಿಯುಎಫ್ ಪಕ್ಷದ ದಿಂಗ್ ಕ್ಷೇತ್ರದ ಶಾಸಕ ಅಮಿನುಲ್ ಇಸ್ಲಾಂರನ್ನು ಸೋಮವಾರ ಪೊಲೀಸರು ವಿಚಾರಣೆ ನಡೆಸಿದ್ದರು. ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿದ್ದರು. ಮಂಗಳವಾರ ಬೆಳಗ್ಗೆ ಅವರನ್ನು ಬಂಧಿಸಲಾಗಿದೆ.
ಶನಿವಾರ ಅಸ್ಸಾಂನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿತ್ತು. ಇದುವರೆಗೂ ದಾಖಲಾಗಿರುವ 26 ಪ್ರಕರಣಗಳಲ್ಲಿ 25 ಜನರು ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ರಾಜ್ಯಕ್ಕೆ ವಾಪಸ್ ಆದವರು. ಕೊರೊನಾ ಹರಡದಂತೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಅಸ್ಸಾಂ ಸರ್ಕಾರ ರಾಜ್ಯದ 2 ಸ್ಟೇಡಿಯಂಗಳಲ್ಲಿ ಕೊರೊನಾ ಸೋಂಕಿತರ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಿದೆ. 2 ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. 33 ಜಿಲ್ಲೆಗಳಲ್ಲಿಯೂ ಒಂದೊಂದು ಆಸ್ಪತ್ರೆಯನ್ನು ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ಮೀಸಲಾಗಿಡಲಾಗಿದೆ.












Click it and Unblock the Notifications