ಪಾಪ ಮಾಡಿದವರಿಗೆ ಕ್ಯಾನ್ಸರ್ ಶಿಕ್ಷೆ ಎಂದ್ಹೇಳಿ ಕ್ಷಮೆಯಾಚಿಸಿದ ಸಚಿವ
ಗುವಾಹತಿ, ನವೆಂಬರ್ 24: ಕ್ಯಾನ್ಸರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗಳಿಗೆ ಗುರಿಯಾಗಿದ್ದ ಅಸ್ಸಾಂನ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಇದೀಗ ಕ್ಷಮೆ ಕೋರಿದ್ದಾರೆ.
ಪಾಪ ಮಾಡಿದವರಿಗೆ ದೇವರು ಕೊಡುವ ಶಿಕ್ಷೆ ಕ್ಯಾನ್ಸರ್: ಬಿಜೆಪಿ ಮುಖಂಡ
"ಪಾಪ ಮಾಡಿದವರಿಗೆ ದೇವರೇ ಶಿಕ್ಷೆ ನೀಡುತ್ತಾನೆ. ಚಿಕ್ಕ ವಯಸ್ಸಿನಲ್ಲಿಯೇ ವಾಹನಾಪಘಾತದಿಂದ ಮರಣ ಹೊಂದುವುದು ಅಥವಾ ಕ್ಯಾನ್ಸರ್ ನಂಥ ಮಾರಣಾಂತಿಕ ಕಾಯಿಲೆಗೆ ತುತ್ತಾಗುವುದು ಎಂದರೆ ದೇವರೇ ನೀಡುವ ಶಿಕ್ಷೆ ಅದು" ಎಂಬ ಅಸಂಬದ್ಧ ಹೇಳಿಕೆಯೊಂದನ್ನು ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಈ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದರಿಂದ ಕೊನೆಗೆ ಸಚಿವ ಹಿಮಂತ ಬಿಸ್ವಾ ಶರ್ಮಾ ಕ್ಷಮೆಯಾಚಿಸಿದ್ದಾರೆ.
ತಮ್ಮ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಕೋರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜತೆಗೆ ಅಸ್ಸಾಂ ಆರೋಗ್ಯ ಸಚಿವರಾಗಿ ತಾವು ಮಾಡಿರುವ ಕಾರ್ಯಗಳ ಬಗ್ಗೆ ಹೇಳಿರುವ ಹಿಮಂತ ಬಿಸ್ವಾ ಶರ್ಮಾ, ರಾಜ್ಯದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತ ಕಿಮೋಥೆರಪಿ ಸೇರಿದಂತೆ ಹಲವು ಸೌಲಭ್ಯ ನೀಡಲಾಗುತ್ತಿದೆ.
ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು 2 ಲಕ್ಷ ರು. ಆರ್ಥಿಕ ಸಹಾಯ ನೀಡಲಾಗುತ್ತಿದೆ. ಜತೆಗೆ ಈ ಕಾಯಿಲೆಯನ್ನು ತಡೆಗಟ್ಟಲು ತಂಬಾಕು ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.