ಚೀನಾದಿಂದ ಸಂಘರ್ಷದ ಸೂಚನೆ: ಸುಧಾರಿತ ಕ್ಷಿಪಣಿ ಸ್ವಾಧೀನಕ್ಕೆ ಮುಂದಾದ ಭಾರತ
ನವದೆಹಲಿ, ಡಿಸೆಂಬರ್ 20: ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಸಂಘರ್ಷಕ್ಕೆ ಮುನ್ನಡಿ ಬರೆದಿದೆ. ಭಾರತಕ್ಕೆ ಮುಖ ಮಾಡಿ ಟಿಬೆಟ್ ವಾಯು ಪ್ರದೇಶದಲ್ಲಿ ಕ್ಷಿಪಣಿ, ಡ್ರೋನ್ಗಳು ನಿಂತಿವೆ. ಇದರಿಂದ ಎಚ್ಚೆತ್ತು ಕೊಂಡಿರುವ ಭಾರತ ಯಾವುದೇ ಸಂದರ್ಭದಲ್ಲಿ ಚೀನಾವನ್ನು ಎದುರಿಸುವುದಕ್ಕೆ ಸನ್ನದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ ಕ್ಷಿಪಣಿಗಳ ಸ್ವಾಧೀನಕ್ಕೆ ಭಾರತ ಮುಂದಾಗಿದೆ.
150 ರಿಂದ 500 ಕಿಲೋ ಮೀಟರ್ನಷ್ಟು ದೂರದ ಗುರಿಯನ್ನು ತಲುಪಬಲ್ಲ 'ಪ್ರಲೇ' ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ಸಶಸ್ತ್ರ ಪಡೆಗಳು ಮುಂದಾಗಿವೆ.
ಭಾರತೀಯ ರಕ್ಷಣಾ ಪಡೆಗಳ ಪ್ರಸ್ತಾವನೆಯು ರಕ್ಷಣಾ ಸಚಿವಾಲಯಕ್ಕೆ ತಲುಪಿದೆ. ಈ ವಾರ ನಡೆಯುವ ಉನ್ನತ ಪಟ್ಟದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬಹುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ ಎಂಬುದಾಗಿ ಸುದ್ದಿಸಂಸ್ಥೆ 'ಎಎನ್ಐ' ತಿಳಿಸಿದೆ.

ರಾಕೆಟ್ ಫೋರ್ಸ್ ರಚನೆಗೆ ಭಾರತೀಯ ಪಡೆಗಳು ಕೆಲಸ ಮಾಡುತ್ತಿರುವ ಸಮಯದಲ್ಲಿ ಕ್ಷಿಪಣಿ ಪ್ರಸ್ತಾಪವೂ ಮಹತ್ವ ಪಡೆದುಕೊಂಡಿದೆ. ರಾಕೆಟ್ ಫೋರ್ಸ್ ರಚನೆ ವಿಚಾರವಾಗಿ ರಕ್ಷಣಾ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
ಗಡಿಯಲ್ಲಿ ಶತ್ರುಗಳನ್ನು ಎದುರಿಸಲು ರಾಕೆಟ್ ಫೋರ್ಸ್ ರಚನೆಗಾಗಿ ದಿವಂಗತ ಜನರಲ್ ಬಿಪಿನ್ ರಾವತ್ ಕೆಲಸ ಮಾಡುತ್ತಿದ್ದರು ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಇತ್ತೀಚೆಗೆ ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ, ಸತತ ಎರಡು ದಿನಗಳ ಕಾಲ ಕ್ಷಿಪಣಿಯನ್ನು ಎರಡು ಬಾರಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಅಂದಿನಿಂದ ರಕ್ಷಣಾ ಪಡೆಗಳು ಅದರ ಸ್ವಾಧೀನ ಮತ್ತು ಸ್ಥಾಪನೆಗಾಗಿ ಕೆಲಸ ಮಾಡುತ್ತಿವೆ.

150 ರಿಂದ 500 ಕಿಮೀ ವ್ಯಾಪ್ತಿಯೊಂದಿಗೆ, 'ಪ್ರಲಯ್' ಪ್ರೊಪೆಲ್ಲೆಂಟ್ ರಾಕೆಟ್ ಮೋಟಾರ್ ಮತ್ತು ಇತರ ಹೊಸ ತಂತ್ರಜ್ಞಾನಗಳೊಂದಿಗೆ ಈ ಕ್ಷಿಪಣಿಯು ತಯಾರಿಸಲ್ಪಟ್ಟಿದೆ.
ಕ್ಷಿಪಣಿ ಮಾರ್ಗದರ್ಶನ ವ್ಯವಸ್ಥೆಯು ಅತ್ಯಾಧುನಿಕ ನ್ಯಾವಿಗೇಷನ್ ಮತ್ತು ಇಂಟಿಗ್ರೇಟೆಡ್ ಏವಿಯಾನಿಕ್ಸ್ ಅನ್ನು ಒಳಗೊಂಡಿದೆ.
ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಘರ್ಷಣೆ ನಡೆದ ಕೆಲವೇ ದಿನಗಳಲ್ಲಿ ಚೀನಾ ದೇಶವು ಅತ್ಯಾಧುನಿಕ ಹಾಗೂ ಸುಧಾರಿತ ಡ್ರೋನ್ ಹಾಗೂ ಜೆಟ್ಗಳನ್ನು ಗಡಿ ರೇಖೆಯ ಬಳಿ ತಂದು ನಿಲ್ಲಿಸಿದೆ ಎಂದು ವರಿದಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದ ಹೈ ರೆಸಲ್ಯೂಶನ್ ಫೋಟೊಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದು ಸಂಘರ್ಷದ ಭೀತಿಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.












Click it and Unblock the Notifications